ನಾನು ಮರಾಠಿ ಮಾತನಾಡುವುದಿಲ್ಲ, ಧೈರ್ಯವಿದ್ದರೆ ನನ್ನನ್ನು ರಾಜ್ಯದಿಂದ ಹೊರ ಹಾಕಿ: ಠಾಕ್ರೆ ಸೋದರರಿಗೆ ಭೋಜ್ಪುರಿ ನಟ ನಿರಾಹುವಾ ಸವಾಲು
BJP MP Dinesh Lal Yadav, popularly known as Nirahua (Photo credit: amarujala.com)
ಮುಂಬೈ: ರಾಷ್ಟ್ರೀಯ ಶಿಕ್ಷಣ ನೀತಿಯಡಿ ತ್ರಿಭಾಷಾ ನೀತಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ರಾಜ್ಯಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ "ನಾನು ಮರಾಠಿ ಮಾತನಾಡುವುದಿಲ್ಲ.ಧೈರ್ಯವಿದ್ದರೆ ನನ್ನನ್ನು ರಾಜ್ಯದಿಂದ ಹೊರಹಾಕಿ" ಎಂದು ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಸೋದರರಿಗೆ ಜನಪ್ರಿಯ ಭೋಜ್ಪುರಿ ನಟ ನಿರಾಹುವಾ ಸವಾಲು ಹಾಕಿರುವುದು ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದೆ.
ಇತ್ತೀಚೆಗೆ ಮುಂಬೈ ಮಹಾನಗರ ಪಾಲಿಕೆ ಪ್ರದೇಶದಲ್ಲಿನ ಸಿಹಿ ತಿನಿಸು ಅಂಗಡಿಯ ಮಾಲಕರೊಬ್ಬರ ಮೇಲಿನ ಹಲ್ಲೆ ಸೇರಿದಂತೆ ರಾಜ್ಯಾದ್ಯಂತ ಮರಾಠಿ ಭಾಷೆ ಮಾತನಾಡದ ವ್ಯಕ್ತಿಗಳ ಮೇಲೆ ಮಹಾರಾಷ್ಟ್ರ ನಿರ್ಮಾಣ ಸೇನೆ ಸರಣಿ ಹಲ್ಲೆ ನಡೆಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರ ಬಿದ್ದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ, ವೊರ್ಲಿಯಲ್ಲಿನ ಷೇರು ಹೂಡಿಕೆದಾರ ಸುಶೀಲ್ ಕೆದಾಯಿ ನಿವಾಸವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಧ್ವಂಸಗೊಳಿಸಿದ ನಂತರ, ಈ ವಿವಾದ ಭುಗಿಲೆದ್ದಿದೆ. ನಾನು ಮರಾಠಿ ಮಾತನಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದ ಸುಶೀಲ್ ಕೆದಿಯಾ, ಈ ಕುರಿತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಗೆ ಸವಾಲು ಎಸೆದಿದ್ದರು.