ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಆರು ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ: ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್
ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ (Photo: PTI)
ಬೆಂಗಳೂರು: ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯ ವೇಳೆ ಭಾರತೀಯ ವಾಯುಪಡೆಯು ಪಾಕಿಸ್ತಾನದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತ್ತು ಎಂದು ಭಾರತೀಯ ವಾಯು ಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಬಹಿರಂಗಗೊಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಯುಪಡೆ ಮುಖ್ಯಸ್ಥರು, “ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಅದ್ಭುತವಾದದ್ದನ್ನು ಸಾಧಿಸಿದೆ. ನಾವು ಇತ್ತೀಚೆಗೆ ಖರೀದಿಸಿದ್ದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ಇಡೀ ಆಟವನ್ನೇ ಬದಲಿಸಿತು. ಈ ವ್ಯವಸ್ಥೆಯ ವ್ಯಾಪ್ತಿಯಿಂದಾಗಿ, ಪಾಕಿಸ್ತಾನದ ಯುದ್ಧ ವಿಮಾನಗಳು ಹೊಂದಿದ್ದ ದೂರಗಾಮಿ ವ್ಯಾಪ್ತಿಯ ಗ್ಲೈಡ್ ಬಾಂಬ್ ಗಳನ್ನು ಪ್ರಯೋಗಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಅವಕ್ಕೆ ಸಾಧ್ಯವಾಗದಿದ್ದರಿಂದ, ಅವರು ತಮ್ಮ ಬಳಿಯಿದ್ದ ದೂರಗಾಮಿ ವ್ಯಾಪ್ತಿಯ ಗ್ಲೈಡ್ ಬಾಂಬ್ ಗಳನ್ನು ಬಳಸಲೂ ಸಾಧ್ಯವಾಗಲಿಲ್ಲ” ಎಂದು ಅವರು ವಿವರಿಸಿದರು.
ನೆಲಕ್ಕುರುಳಿಸಿದ ಯುದ್ಧ ವಿಮಾನಗಳ ಪೈಕಿ ಐದು ಯುದ್ಧವಿಮಾನಗಳು ಪಾಕಿಸ್ತಾನದ್ದಾಗಿದ್ದು, ಮತ್ತೊಂದು ಎಇಡಬ್ಲ್ಯೂ ಆ್ಯಂಡ್ ಸಿ (ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್) ಅಥವಾ ಇಎಲ್ಐಎನ್ಟಿ (ಎಲೆಕ್ಟ್ರಾನಿಕ್ ಇಂಟಲಿಜೆನ್ಸ್) ವಿಮಾನವಾಗಿದೆ ಎಂದು ಅವರು ಮಾಹಿತಿ ನೀಡಿದರು.