ಕಲಬುರಗಿ | ಬೆಳೆ ಹಾನಿ ವರದಿ ಕುರಿತ ಸುಳ್ಳು ವದಂತಿಗೆ ರೈತರು ಕಿವಿಗೊಡಬೇಡಿ: ಸಮದ್ ಪಟೇಲ್
Update: 2025-08-22 22:33 IST
ಕಲಬುರಗಿ: ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ವರದಿ ಕುರಿತಂತೆ ಸುಳ್ಳು ಮಾಹಿತಿ ಹರಿದಾಡುತ್ತಿದ್ದು, ರೈತರು ಇದಕ್ಕೆ ಕಿವಿಗೊಡಬಾರದು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಮನವಿ ಮಾಡಿದ್ದಾರೆ.
ಆಗಸ್ಟ್ ಎರಡನೇ ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಬೆಳೆ ಹಾನಿ ಕುರಿತು ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳನ್ನೊಳಗೊಂಡಂತೆ ಜಂಟಿ ಸಮೀಕ್ಷೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ಸಮೀಕ್ಷೆ ಪ್ರಗತಿಯಲ್ಲಿದೆ. ಬೆಳೆ ಹಾನಿ ನಷ್ಟದ ಕುರಿತು ಯಾವುದೇ ವರದಿ ಇನ್ನು ಸಿದ್ಧವಾಗಿಲ್ಲ ಮತ್ತು ಈ ಕಚೇರಿಯಿಂದ ಅಧಿಕೃತವಾಗಿ ಏನು ಮಾಹಿತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜಂಟಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡ ನಂತರ ನಿಖರವಾದ ಬೆಳೆ ಹಾನಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಸಮದ್ ಪಟೇಲ್ ತಿಳಿಸಿದ್ದಾರೆ.