ಮಧ್ಯ ಪ್ರದೇಶ | ಕೆಮ್ಮಿನ ಸಿರಫ್ ಸೇವಿಸಿ ಮಕ್ಕಳ ಮೃತಪಟ್ಟ ಪ್ರಕರಣ : ರಾಜ್ಯ ಔಷಧ ನಿಯಂತ್ರಕನ ವರ್ಗಾವಣೆ ; ಇತರ ಮೂವರ ಅಮಾನತು
ಸಾಂದರ್ಭಿಕ ಚಿತ್ರ | Photo Credit : freepik.com
ಭೋಪಾಲ, ಅ. 6: ಛಿಂದ್ವಾರದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 14 ಮಕ್ಕಳು ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಯುತ್ತಿರುವಂತೆ ಮಧ್ಯಪ್ರದೇಶ ಸರಕಾರ ಸೋಮವಾರ ಇಬ್ಬರು ಡ್ರಗ್ ಇನ್ಸ್ಪೆಕ್ಟರ್, ಆಹಾರ ಹಾಗೂ ಔಷಧ ಆಡಳಿತದ ಉಪ ನಿರ್ದೇಶಕರನ್ನು ಅಮಾನತುಗೊಳಿಸಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತನ್ನ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ರಾಜ್ಯ ಔಷಧ ನಿಯಂತ್ರಕ ದಿನೇಶ್ ಮೌರ್ಯ ಅವರನ್ನು ವರ್ಗಾಯಿಸಿದ್ದಾರೆ.
ಅಮಾನತುಗೊಂಡ ಡ್ರಗ್ಸ್ ಇನ್ಸ್ಪೆಕ್ಟರ್ಗಳನ್ನು ಗೌರವ್ ಶರ್ಮಾ ಹಾಗೂ ಶರದ್ ಕುಮಾರ್ ಜೈನ್ ಎಂದು ಗುರುತಿಸಲಾಗಿದೆ. ಇವರನ್ನು ಅನುಕ್ರಮವಾಗಿ ಛಿಂದ್ವಾರ ಹಾಗೂ ಜಬಲ್ಪುರದಲ್ಲಿ ನೇಮಿಸಲಾಗಿತ್ತು. ಅಮಾನತುಗೊಂಡ ಉಪ ನಿರ್ದೇಶಕರನ್ನು ಶೋಬಿತ್ ಕೋಸ್ಟಾ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗದು ಎಂದು ಮೋಹನ್ ಯಾದವ್ ಹೇಳಿದ್ದಾರೆ.