ಮಲಪ್ಪುರಂ | ಎರಡು ತಿಂಗಳ ಕಾರ್ಯಾಚರಣೆ ಬಳಿಕ ನರಭಕ್ಷಕ ಹುಲಿ ಸೆರೆ ಹಿಡಿದ ಅರಣ್ಯ ಇಲಾಖೆ
Photo: Manorama
ಮಲಪ್ಪುರಂ: ಎರಡು ತಿಂಗಳ ಹಿಂದೆ ಕಾಳಿಕಾವು ಬಳಿ 45ರ ಹರೆಯದ ರಬ್ಬರ್ ಟ್ಯಾಪರ್ ಗಪೂರ್ ಎಂಬವರನ್ನು ಕಾಡಿಗೆ ಎಳೆದೊಯ್ದು ಕೊಂದು ತಿಂದಿದ್ದ ನರ ಭಕ್ಷಕ ಹುಲಿಯನ್ನು ರವಿವಾರ ಬೆಳಿಗ್ಗೆ ಸೆರೆಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಶೋಧ ಕಾರ್ಯಾಚರಣೆಯ ಭಾಗವಾಗಿ ಈ ಪ್ರದೇಶದಲ್ಲಿ ಅಲ್ಲಲ್ಲಿ ಬೋನುಗಳನ್ನು ಇರಿಸಲಾಗಿತ್ತು. ಅದರಲ್ಲಿ ಒಂದು ಬೋನಿಗೆ ಹುಲಿ ಬಿದ್ದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮೇ 15 ರಂದು 13 ವರ್ಷದ ಗಂಡು ಹುಲಿ ಮಲಪ್ಪುರಂ ಜಿಲ್ಲೆಯ ಕಾಳಿಕಾವು ಬಳಿ ರಬ್ಬರ್ ತೋಟದಲ್ಲಿ 45 ವರ್ಷದ ಗಫೂರ್ ಎಂಬ ಕಾರ್ಮಿಕನ ಮೇಲೆ ದಾಳಿ ಮಾಡಿ ಆತನನ್ನು ಕಾಡಿಗೆ ಎಳೆದೊಯ್ದು ತಿಂದು ಹಾಕಿತ್ತು.
ಘಟನೆ ಬಳಿಕ ಹುಲಿ ಸೆರೆಗೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಸಚಿವ ಎಕೆ ಸಶೀಂದ್ರನ್, ಹುಲಿ ಪ್ರಸ್ತುತ ಅರಣ್ಯ ಇಲಾಖೆಯ ವಶದಲ್ಲಿದೆ. ಹುಲಿಯನ್ನು ಕಾಡಿನ ಆಳಕ್ಕೆ ಬಿಡಬೇಕೆ ಅಥವಾ ಕಾಡು ಪ್ರಾಣಿಗಳ ಆಶ್ರಯಕ್ಕೆ ಸ್ಥಳಾಂತರಿಸಬೇಕೆ ಎಂದು ನಿರ್ಧರಿಸಲು ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.