Assam | ಪದ್ಮಶ್ರೀ ಜಾದವ್ ಪಯೆಂಗ್ ನಿರ್ಮಿಸಿದ ಅರಣ್ಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ
ಘಟನೆಯಿಂದ ತೀವ್ರವಾಗಿ ದುಃಖಿತನಾಗಿದ್ದೇನೆ ಎಂದ 'ಭಾರತದ ಅರಣ್ಯ ಮಾನವ'
Photo credit: X/@beingAAPian
ಗೋಲಾಘಾಟ್: ಅಸ್ಸಾಂನ ಗೋಲಾಘಾಟ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು 'ಭಾರತದ ಅರಣ್ಯ ಮಾನವ' ಎಂದು ಕರೆಯಲ್ಪಡುವ ಜಾದವ್ ಪಯೆಂಗ್ ಅವರ ನಿರ್ಮಿಸಿದ ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ನಂತರ ಗಣನೀಯವಾಗಿ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಯೆಂಗ್ ಅವರ ʼಮೊಲೈ ಕಟೋನಿʼ(Molai Katoni) ಎಂದು ಜನಪ್ರಿಯವಾಗಿರುವ ಅರಣ್ಯಕ್ಕೆ ರವಿವಾರ ಸಂಜೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಅರಣ್ಯಕ್ಕೆ ಹಾನಿಯಾಗಿದೆ. ಬೆಂಕಿಯ ಜ್ವಾಲೆಗೆ ಸಾವಿರಾರು ಸಸ್ಯಗಳು ಸುಟ್ಟು ಕರಕಲಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.
2022ರಲ್ಲಿ ಪಯೆಂಗ್ ಮತ್ತು ಅವರ ಪುತ್ರಿ ನೆಟ್ಟಿದ್ದ ಅಂದಾಜು 5,500 ಕ್ಕೂ ಹೆಚ್ಚು ಸಸಿಗಳು ಬೆಂಕಿಗೆ ಆಹುತಿಯಾಗಿವೆ. ಆದರೆ ಯಾವುದೇ ವನ್ಯಜೀವಿಗಳ ಸಾವು ಹಾಗೂ ಮನುಷ್ಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಕಿಯಲ್ಲಿ ಸಸ್ಯಗಳು ಮತ್ತು ಪ್ರದೇಶದ ಒಟ್ಟಾರೆ ಜೀವವೈವಿಧ್ಯತೆಯ ನಷ್ಟದಿಂದ ತೀವ್ರ ದುಃಖಿತನಾಗಿದ್ದಾನೆ” ಎಂದು ಜಾದವ್ ಪಯೆಂಗ್ ಹೇಳಿದ್ದಾರೆ.
“ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಜಾದವ್ ಪಯೆಂಗ್ ಅವರ ಪುತ್ರಿ ಮುನ್ಮುನಿ ಪೆಯಾಂಗ್ ಆರೋಪಿಸಿದ್ದಾರೆ.