ಪ್ರಸ್ತಾವಿತ ಜಿಎಸ್ಟಿ ಸುಧಾರಣೆಗಳ ಅನುಷ್ಠಾನಕ್ಕೆ ಸಹಕರಿಸುವಂತೆ ರಾಜ್ಯಗಳಿಗೆ ಮೋದಿ ಆಗ್ರಹ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ,ಆ.17: ಕೇಂದ್ರವು ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳ ಕರಡನ್ನು ರಾಜ್ಯಗಳಿಗೆ ವಿತರಿಸಿದೆ ಮತ್ತು ದೀಪಾವಳಿಗೆ ಮುನ್ನ ಅವುಗಳನ್ನು ಅನುಷ್ಠಾನಿಸಲು ಸಹಕರಿಸುವಂತೆ ಕೋರಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ತಿಳಿಸಿದರು.
ಜಿಎಸ್ಟಿಯಲ್ಲಿ ಸುಧಾರಣೆಯು ಬಡ ಮತ್ತು ಮಧ್ಯಮ ವರ್ಗದ ಜನರ ಜೊತೆ ಸಣ್ಣ ಮತ್ತು ದೊಡ್ಡ ವ್ಯವಹಾರಗಳಿಗೂ ಲಾಭದಾಯಕವಾಗಲಿದೆ ಎಂದು ಅವರು ಹೇಳಿದರು.
ಎರಡು ಎಕ್ಸ್ಪ್ರೆಸ್ ವೇಗಳ ಉದ್ಘಾಟನೆಯ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ,ಜಿಎಸ್ಟಿ ಕಾನೂನನ್ನು ಸರಳಗೊಳಿಸಲು ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸಲು ಕೇಂದ್ರವು ಉದ್ದೇಶಿಸಿದೆ ಎಂದು ತಿಳಿಸಿದರು.
ಆ.15ರಂದು ಕೆಂಪುಕೋಟೆಯಿಂದ ತನ್ನ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಜಿಎಸ್ಟಿ ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವ ಪ್ರಸ್ತಾವವನ್ನು ಮೋದಿ ಪ್ರಕಟಿಸಿದ್ದರು.
ಜಿಎಸ್ಟಿ ಸುಧಾರಣೆಯ ಕರಡು ಪ್ರಸ್ತಾವವನ್ನು ಕೇಂದ್ರವು ಎಲ್ಲ ರಾಜ್ಯಗಳಿಗೆ ಕಳುಹಿಸಿದೆ ಎಂದು ತಿಳಿಸಿದ ಮೋದಿ,ಕೇಂದ್ರ ಸರಕಾರದ ಉಪಕ್ರಮಗಳಿಗೆ ಎಲ್ಲ ರಾಜ್ಯಗಳು ಸಹಕರಿಸುವ ಭರವಸೆ ತನಗಿದೆ ಎಂದು ಹೇಳಿದರು. ದೀಪಾವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಈ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಅವರು ರಾಜ್ಯಗಳನ್ನು ಆಗ್ರಹಿಸಿದರು.