ಸಿನಿಮಾ ಕಾರ್ಯಕ್ರಮದಲ್ಲಿ ಖಡ್ಗ ಝಳಪಿಸಿದ ಪವನ್ ಕಲ್ಯಾಣ್: ಅಂಗರಕ್ಷಕ ಕೂದಲೆಳೆಯ ಅಂತರದಲ್ಲಿ ಪಾರು!
PC : NDTV
ಹೈದರಾಬಾದ್: ತಮ್ಮ ಮುಂಬರುವ ‘ದೆ ಕಾಲ್ ಹಿಮ್ ಒಜಿ’ ಚಿತ್ರದ ಕಾರ್ಯಕ್ರಮಕ್ಕೆ ಪ್ರವೇಶಿಸಿದಾಗ ತೆಲುಗು ನಟ ಹಾಗೂ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಖಡ್ಗ ಝಳಪಿಸಿದ್ದು, ಹಿಂದೆಯೇ ಇದ್ದ ಅವರ ಅಂಗರಕ್ಷಕ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಇಲ್ಲಿ ಆಯೋಜನೆಗೊಂಡಿದ್ದ ‘ದೆ ಕಾಲ್ ಹಿಮ್ ಒಜಿ’ ಚಿತ್ರ ಕಾರ್ಯಕ್ರಮಕ್ಕೆ ಬಂದ ಪವನ್ ಕಲ್ಯಾಣ್, ವೇದಿಕೆಗೆ ಖಡ್ಗವೊಂದನ್ನು ಹಿಡಿದುಕೊಂಡು ಆಗಮಿಸಿದರು. ಈ ವೇಳೆ ಅವರು ಖಡ್ಗವನ್ನು ತಿರುಗಿಸಿದಾಗ, ಅವರ ಹಿಂದೆಯೇ ಇದ್ದ ಅವರ ಅಂಗರಕ್ಷಕ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಉಪ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಂತಹ ಅನುಚಿತ ವರ್ತನೆ ತೋರಿರುವುದರ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಕನ್ನಡ ನಟ ದುನಿಯಾ ವಿಜಯ್ ಕೂಡಾ ಕೇಕ್ ಅನ್ನು ಲಾಂಗ್ ನಲ್ಲಿ ಕತ್ತರಿಸಿದ್ದ ಘಟನೆ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಇದರ ಬೆನ್ನಿಗೇ, ಮಾರಕಾಸ್ತ್ರ ಪ್ರದರ್ಶಿಸಿದ ಆರೋಪದ ಮೇಲೆ ದುನಿಯಾ ವಿಜಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈಗ ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡಾ ಸಾರ್ವಜನಿಕ ವೇದಿಕೆಯಲ್ಲಿ ಮಾರಕಾಸ್ತ್ರ ಪ್ರದರ್ಶಿಸಿದ್ದು, ಈ ನಡೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿ ಬಂದಿದೆ.