ರಾಜಘಾಟ್ ಗೆ ಪುಟಿನ್ ಭೇಟಿ: ಗಾಂಧೀಜಿಯವರಿಗೆ ನಮನ
ವ್ಲಾಡಿಮಿರ್ ಪುಟಿನ್ | Photo Credit : PTI
ಹೊಸದಿಲ್ಲಿ,ಡಿ.5: ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿರುವ ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ದಿಲ್ಲಿಯ ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ನಮನಗಳನ್ನು ಸಲ್ಲಿಸಿದರು.
ಪುಟಿನ್ ಬಳಿಕ ಅಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ, ಗಾಂಧಿ ಆಧುನಿಕ ಸ್ವತಂತ್ರ ಭಾರತದ ಸ್ಥಾಪಕರಾಗಿದ್ದಾರೆ. ಜೊತೆಗೆ ಮಾನವತಾವಾದಿ ಮತ್ತು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದಾರೆ ಎಂದು ಬಣ್ಣಿಸಿದ್ದಾರೆ.
‘ಮಹಾತ್ಮಾ ಗಾಂಧಿಯವರು ಅಹಿಂಸೆ ಮತ್ತು ಸತ್ಯ ಮಾರ್ಗದ ಮೂಲಕ ನಮ್ಮ ಈ ಭೂಮಿಯಲ್ಲಿ ಶಾಂತಿ ನೆಲೆಸಲು ಅಮೂಲ್ಯಕೊಡುಗೆಯನ್ನು ನೀಡಿದ್ದಾರೆ ಮತ್ತು ಅದರ ಪ್ರಭಾವವು ಇಂದಿಗೂ ಪ್ರಸ್ತುತವಾಗಿದೆ. ಅವರು ಈಗ ರೂಪುಗೊಳ್ಳುತ್ತಿರುವ ಹೊಸ,ನ್ಯಾಯಯುತ ಮತ್ತು ಬಹುಧ್ರುವೀಯ ವಿಶ್ವ ವ್ಯವಸ್ಥೆಗೆ ಮಾರ್ಗವನ್ನು ತೋರಿಸಿದ್ದರು. ಸಮಾನತೆ, ಪರಸ್ಪರ ಗೌರವ ಮತ್ತು ಸಹಕಾರ ಕುರಿತು ಅವರ ಬೋಧನೆಗಳಿಂದಾಗಿ ಇಂದು ಭಾರತವು ಜಗತ್ತಿನ ಇತರರೊಂದಿಗೆ ಸೇರಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಈ ತತ್ವಗಳು ಮತ್ತು ಮೌಲ್ಯಗಳನ್ನು ಸಮರ್ಥಿಸುತ್ತಿದೆ. ರಷ್ಯ ಕೂಡ ಇದನ್ನೇ ಮಾಡುತ್ತಿದೆ ’ಎಂದು ಪುಟಿನ್ ರಷ್ಯನ್ ಭಾಷೆಯಲ್ಲಿ ಬರೆದಿದ್ದಾರೆ.