×
Ad

AI ಶೃಂಗಸಭೆಯಲ್ಲಿನ ಪ್ರತಿಭಟನೆಯನ್ನು ಅಪರಾಧೀಕರಿಸುವುದನ್ನು ಟೀಕಿಸಿದ ರಾಜ್ ದೀಪ್ ಸರ್ದೇಸಾಯಿ

"ಪ್ರತಿಭಟನೆ ಅನಾನುಕೂಲವನ್ನುಂಟು ಮಾಡುತ್ತದೆ ಎಂಬ ಕಾರಣಕ್ಕೆ ಅಪರಾಧವೆಂದು ಪರಿಗಣಿಸುವಂತಿಲ್ಲ"

Update: 2026-02-24 14:33 IST

ರಾಜ್ ದೀಪ್ ಸರ್ದೇಸಾಯಿ (Photo: NDTV)

ಹೊಸದಿಲ್ಲಿ: AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಸೂಕ್ತವಲ್ಲದಿದ್ದರೂ, ಅದು ಕ್ರಿಮಿನಲ್ ಕೃತ್ಯಕ್ಕೆ ಸಮಾನವಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಹೇಳಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಾಜ್ ದೀಪ್ ಸರ್ದೇಸಾಯಿ, ಈ ಪ್ರತಿಭಟನೆಯನ್ನು "ಕೆಟ್ಟ ನಡವಳಿಕೆ” ಮತ್ತು "ಸಂಪೂರ್ಣವಾಗಿ ಅನಗತ್ಯ" ಎಂದು ಬಣ್ಣಿಸಿದರು. ಗಮನ ಸೆಳೆಯಲು ನಾಟಕೀಯತೆಯಿಗಿಂತ ಸಂಯಮವೇ ಆರೋಗ್ಯಕರ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಗತ್ಯವೆಂದು ಅಭಿಪ್ರಾಯಪಟ್ಟರು. ಆದರೆ, ಪ್ರತಿಭಟನೆಯ ಸ್ವರೂಪ ಮತ್ತು ಅದರ ಕಾನೂನಾತ್ಮಕತೆ ಎರಡನ್ನೂ ಪ್ರತ್ಯೇಕವಾಗಿ ನೋಡಬೇಕು ಎಂದು ಹೇಳಿದರು.

ಪ್ರತಿಭಟನೆಯ ವಿಧಾನ ಪ್ರಶ್ನಾರ್ಹವಾಗಿದ್ದರೂ ಅದು ಶಾಂತಿಯುತವಾಗಿದ್ದರೆ, ಸಂವಿಧಾನ ನೀಡಿರುವ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ವ್ಯಾಪ್ತಿಯಲ್ಲೇ ಬರುತ್ತದೆ ಎಂದ ರಾಜ್‌ದೀಪ್ ಸರ್ದೇಸಾಯಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಹಕ್ಕು ಉಲ್ಲಂಘಿಸಲಾಗದ ಹಕ್ಕಾಗಿದೆ. ವೈಯಕ್ತಿಕ ಅನಾನೂಕೂಲ ಕಾರಣಕ್ಕೆ ಪ್ರತಿಭಟನೆಯನ್ನು ಅಪರಾಧೀಕರಿಸುವುದು ಸರಿಯಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಪ್ರಕರಣದಲ್ಲಿ ಜಾಮೀನು ಸಿಗದ ವಿಧಿಗಳನ್ನು ಅನ್ವಯಿಸಿರುವ ನಿರ್ಧಾರವನ್ನು ರಾಜ್‌ದೀಪ್ ಸರ್ದೇಸಾಯಿ ತೀವ್ರವಾಗಿ ಟೀಕಿಸಿದರು. ಇದು ಅತಿಯಾದ ಪ್ರತಿಕ್ರಿಯೆಯಾಗಿದೆ, ಶಾಂತಿಯುತ ಭಿನ್ನಾಭಿಪ್ರಾಯವನ್ನು ಅಪರಾಧವಾಗಿ ಪರಿಗಣಿಸುವುದರಿಂದ ದೇಶವನ್ನು “ಪೊಲೀಸ್ ರಾಜ್ಯ”ದತ್ತ ತಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ದೇಶವು ಕಾನೂನಿನ ಆಳ್ವಿಕೆಯಿಂದಲೇ ನಡೆಯಬೇಕು, ನಿರಂಕುಶ ಅಧಿಕಾರ ಅಥವಾ ಏಕಪಕ್ಷೀಯ ಸಾರ್ವಜನಿಕ ಆಕ್ರೋಶದಿಂದಲ್ಲ. “ನಿಮಗೆ ಅಸೌಕರ್ಯ ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಮಾತ್ರ ಪ್ರತಿಭಟನೆಯನ್ನು ಅಪರಾಧವಾಗಿ ಪರಿಗಣಿಸಿದರೆ, ನಾವು ಪೊಲೀಸ್ ರಾಜ್ಯದತ್ತ ಸಾಗುತ್ತಿರುವಂತಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News