ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣ | ಮಾಜಿ ಕಾರ್ಯ ನಿರ್ವಹಣಾಧಿಕಾರಿ ಬಂಧನ
Photo Credit : PTI
ತಿರುವನಂತಪುರ, ನ. 1: ಶಬರಿಮಲೆ ದೇವಾಸ್ಥಾನದಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್ಐಟಿ) ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಸುಧೀಶ್ ಕುಮಾರ್ನನ್ನು ಗುರುವಾರ ಸಂಜೆ ಬಂಧಿಸಿದೆ.
2019ರಲ್ಲಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸುಧೀಶ್ ಕುಮಾರ್ನನ್ನು ತಿರುವನಂತಪುರದಲ್ಲಿರುವ ಕ್ರೈಮ್ ಬ್ರಾಂಚ್ನ ಕಚೇರಿಯಲ್ಲಿ ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದ್ವಾರಪಾಲಕ ವಿಗ್ರಹಗಳ ಮೇಲಿನ ಹೊದಿಕೆ ಚಿನ್ನದಿಂದ ಮಾಡಲಾಗಿದೆ ಎಂದು ತಿಳಿದಿದ್ದರೂ ಸುಧೀಶ್ ಕುಮಾರ್ ಅಧಿಕೃತ ದಾಖಲೆಗಳಲ್ಲಿ ‘‘ತಾಮ್ರದ ಹೊದಿಕೆ’’ ಎಂದು ಸುಳ್ಳು ಬರೆದಿದ್ದಾರೆ ಎಂಬುದನ್ನು ತನಿಖಾಧಿಕಾರಿಗಳು ಕಂಡು ಕೊಂಡಿದ್ದಾರೆ. ಸುಧೀಶ್ ಕುಮಾರ್ ಅಧಿಕೃತ ದಾಖಲೆಗಳನ್ನು ತಿದ್ದುವ ಮೂಲಕ ಪ್ರಧಾನ ಆರೋಪಿ ಉಣ್ಣಿಕೃಷ್ಣನ್ ಗೆ ಚಿನ್ನ ಕಳವುಗೈಯಲು ಸಹಾಯ ಮಾಡಿದ್ದಾರೆ ಎಂದು ಎಸ್ಐಟಿ ನಿರ್ಧರಿಸಿದೆ.
ಸುಧೀಶ್ ಕುಮಾರ್ ಅವರು ಉಣ್ಣಿ ಕೃಷ್ಣನ್ ಪೊಟ್ಟಿ ಅವರನ್ನು ಪ್ರಾಯೋಜಕರನ್ನಾಗಿ ಅನುಮೋದಿಸಿದ್ದರು. ವಿಗ್ರಹದ ಹೊದಿಕೆ ತಾಮ್ರದ್ದು ಎಂದು ಸುಳ್ಳು ಹೇಳುವ ಮೂಲಕ ಪೊಟ್ಟಿಯನ್ನು ಒಪ್ಪಿಕೊಳ್ಳುವಂತೆ ದೇವಸ್ವಂ ಮಂಡಳಿಗೆ ಶಿಫಾರಸು ಮಾಡಿದ್ದರು.
ಕುಮಾರ್ ಈ ಪ್ರಕರಣದಲ್ಲಿ ಬಂಧನವಾಗುತ್ತಿರುವ ಮೂರನೇ ವ್ಯಕ್ತಿ. ಈ ಹಿಂದೆ ಪೊಟ್ಟಿ ಹಾಗೂ ಮಾಜಿ ಆಡಳಿತಾಧಿಕಾರಿ ಬಿ. ಮುರಳಿ ಬಾಬುವನ್ನು ಬಂಧಿಸಲಾಗಿತ್ತು.