“ನಾನು ಯಾವ ಸುಪ್ರೀಂ ಕೋರ್ಟ್ನ ಆದೇಶವನ್ನು ಪಾಲಿಸುವುದಿಲ್ಲ” ಎಂದ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ
Photo credit: PTI
ಹೊಸದಿಲ್ಲಿ : ನಾನು ಯಾವ ಸುಪ್ರೀಂ ಕೋರ್ಟ್ನ ಆದೇಶವನ್ನು ಪಾಲಿಸುವುದಿಲ್ಲ ಎಂದು ಹೇಳಿ ಆದೇಶ ಧಿಕ್ಕರಿಸಿದ ಉತ್ತರ ಪ್ರದೇಶದ ಪ್ರತಾಪ್ಗಢದ ಕಂಧೈ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವ್ಯಕ್ತಿಯೊಬ್ಬರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ ಠಾಣಾಧಿಕಾರಿ ಗುಲಾಬ್ ಸಿಂಗ್ ಸೋಂಕರ್ ಅರ್ಜಿದಾರರನ್ನು ಅವರ ಕೆಲಸದ ಸ್ಥಳದಿಂದ ಎಳೆದೊಯ್ದು, ಬಂಧಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅರ್ಜಿದಾರರ ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ತೋರಿಸಿದರೂ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರಾಕರಿಸಿದ್ದರು.
ನ್ಯಾಯಾಲಯದ ಆದೇಶ ಪಾಲಿಸಲು ನಿರಾಕರಿಸಿದ SHO, ಸ್ಥಳೀಯ ಭಾಷೆಯಲ್ಲಿ ನಾನು ಯಾವುದೇ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದಿಲ್ಲ; ನಿಮ್ಮ ಇಡೀ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅನ್ನು ಇಂದು ತೆಗೆದುಹಾಕುತ್ತೇನೆ ಎಂದು ಹೇಳಿದ್ದರು.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠ ಈ ಕುರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದೆ.