×
Ad

ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳನ್ನು ಉದ್ದೇಶಪೂರ್ವಕವಾಗಿ ಹುದ್ದೆಗೆ 'ಸೂಕ್ತರಲ್ಲ' ಎಂದು ಘೋಷಿಸಲಾಗಿದೆ: ರಾಹುಲ್ ಗಾಂಧಿ ಆರೋಪ

Update: 2025-05-27 13:51 IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಹೊಸದಿಲ್ಲಿ: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಅರ್ಹ ಅಭ್ಯರ್ಥಿಗಳನ್ನು ಶಿಕ್ಷಣ ಮತ್ತು ನಾಯಕತ್ವದಿಂದ ದೂರವಿಡಲು ಉದ್ದೇಶಪೂರ್ವಕವಾಗಿ 'ಸೂಕ್ತರಲ್ಲ' ಎಂದು ಘೋಷಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಂವಾದದ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಈ ಹೇಳಿಕೆ ನೀಡಿದ್ದಾರೆ.

"'ಸೂಕ್ತರಲ್ಲ' ಎಂಬುದು ಈಗಿನ ಹೊಸ ಮನುವಾದದ ರೂಪ. ಎಸ್‌ಸಿ/ಎಸ್‌ಟಿ/ಒಬಿಸಿಯ ಅರ್ಹ ಅಭ್ಯರ್ಥಿಗಳನ್ನು ಉದ್ದೇಶಪೂರ್ವಕವಾಗಿ 'ಸೂಕ್ತರಲ್ಲ' ಎಂದು ಘೋಷಿಸಲಾಗುತ್ತಿದೆ. ಆ ಮೂಲಕ ಅವರನ್ನು ಶಿಕ್ಷಣ ಮತ್ತು ನಾಯಕತ್ವದಿಂದ ದೂರವಿಡಲಾಗುತ್ತದೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಮನುವಾದ' ಎಂಬುದು ಮನುಸ್ಮೃತಿಯಿಂದ ನಿಯಂತ್ರಿಸಲ್ಪಡುವ ಸಮಾಜದ ನೀತಿಯಾಗಿದೆ. ಸಮಾನತೆಗೆ ಶಿಕ್ಷಣವೇ ದೊಡ್ಡ ಅಸ್ತ್ರವೆಂದ ಡಾ.ಬಿ ಆರ್ ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆರೆಸ್ಸೆಸ್ ಅಧಿಕಾರವನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದರು. ಮೋದಿ ಸರ್ಕಾರವು ಆ ಆಯುಧವನ್ನು ಮೊಂಡಾಗಿಸುವಲ್ಲಿ ನಿರತವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

'Not Found Suitable (NFS)' ಕಾರ್ಯವಿಧಾನವನ್ನು ಬಳಸಿಕೊಂಡು ಶೇ. 60 ಕ್ಕೂ ಹೆಚ್ಚು ಪ್ರೊಫೆಸರ್ ಮತ್ತು ಶೇ. 30 ಕ್ಕೂ ಹೆಚ್ಚು ಅಸೋಸಿಯೇಟ್ ಪ್ರೊಫೆಸರ್ ಮೀಸಲಾತಿ ಹುದ್ದೆಗಳನ್ನು ಖಾಲಿ ಇಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

"ಇದು ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ. ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಎಲ್ಲೆಡೆ ಅದೇ ಪಿತೂರಿ ನಡೆಯುತ್ತಿದೆ. NFS ಸಂವಿಧಾನದ ಮೇಲಿನ ದಾಳಿ. NFS ಸಾಮಾಜಿಕ ನ್ಯಾಯಕ್ಕೆ ದ್ರೋಹ" ಎಂದು ರಾಹುಲ್ ಗಾಂಧಿ ಕಿಡಿಕಾರಿದರು.

ಮೀಸಲಾತಿ ಪಡೆಯುವುದೆಂದರೆ ಹಕ್ಕುಗಳು, ಗೌರವ, ಭಾಗವಹಿಸುವಿಕೆ, ಗೌರವಕ್ಕಾಗಿನ ಹೋರಾಟ ಎಂದು ಕಾಂಗ್ರೆಸ್ ನಾಯಕ ರಾಹುಲ್ ಹೇಳಿದರು.

"ನಾನು DUSU ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ಈಗ ನಾವೆಲ್ಲರೂ ಒಟ್ಟಾಗಿ ಬಿಜೆಪಿ/ಆರೆಸ್ಸೆಸ್ ನ ಪ್ರತಿಯೊಂದು ಮೀಸಲಾತಿ ವಿರೋಧಿ ಕ್ರಮಕ್ಕೂ ಸಂವಿಧಾನದ ಬಲದಿಂದ ಉತ್ತರಿಸುತ್ತೇವೆ" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News