ಸೋನಂ ವಾಂಗ್ಚುಕ್ ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ, ಜೋಧಪುರ್ ಜೈಲಿಗೆ ಸ್ಥಳಾಂತರಿಸಲಾಗಿದೆ: ಲಡಾಖ್ ಆಡಳಿತ
Photo credit: PTI
ಲಡಾಖ್: ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದನ್ನು ಶನಿವಾರ ಸಮರ್ಥಿಸಿಕೊಂಡಿರುವ ಲಡಾಖ್ ಆಡಳಿತ, ಅವರನ್ನು ಜೋಧಪುರ್ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.
ನೇಪಾಳ ದಂಗೆ ಹಾಗೂ ಅರಬ್ ಸ್ಪ್ರಿಂಗ್ಸ್ ಅನ್ನು ಉಲ್ಲೇಖಿಸಿ ಸೋನಂ ವಾಂಗ್ಚುಕ್ ಸರಣಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದರ ಪರಿಣಾಮ ಹಿಂಸಾಚಾರ ನಡೆದು ನಾಲ್ಕು ಮಂದಿ ಮೃತಪಟ್ಟು, ಹಲವರು ಗಾಯಗೊಳ್ಳಲು ಕಾರಣವಾಯಿತು ಎಂದು ಲಡಾಖ್ ಆಡಳಿತ ಆರೋಪಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಲೇಹ್ ಆಡಳಿತ, “ಲಡಾಖ್ ನ ಶಾಂತಿಪ್ರಿಯ ಲೇಹ್ ನಲ್ಲಿ ಸಹಜ ಸ್ಥಿತಿ ಮರುಸ್ಥಾಪಿಸುವುದು ಮುಖ್ಯವಾಗಿದೆ. ಈ ಹಿನ್ನಲೆ ಪೂರ್ವಗ್ರಹಪೀಡಿತ ರೀತಿಯಲ್ಲಿ ವರ್ತಿಸುತ್ತಿರುವ ವಾಂಗ್ಚುಕ್ ರನ್ನು ತಡೆಯುವುದು ಮುಖ್ಯವಾಗಿದೆ. ನಿರ್ದಿಷ್ಟ ಮಾಹಿತಿಗಳನ್ನು ಆಧರಿಸಿ ವಾಂಗ್ಚುಕ್ ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ, ಅವರನ್ನು ಜೋಧಪುರ್ ಜೈಲಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು” ಎಂದು ಹೇಳಿದೆ.
ವಾಂಗ್ಚುಕ್ ಪ್ರಚೋದನಾಕಾರಿ ಭಾಷಣ ಮತ್ತು ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಲಡಾಖ್ ಆಡಳಿತ, “ ಅವರನ್ನು ಲೇಹ್ ಜಿಲ್ಲೆಯಲ್ಲಿಟ್ಟುಕೊಳ್ಳುವುದು ಉಚಿತವಲ್ಲ” ಎಂದೂ ಪ್ರಕಟನೆಯಲ್ಲಿ ತಿಳಿಸಿದೆ.