ಪಿಎಫ್ಐ ನಾಯಕನ ಮಧ್ಯಂತರ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ವೈದ್ಯಕೀಯ ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಾಯಕ ಎ.ಎಸ್. ಇಸ್ಮಾಯೀಲ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಸೌಲಭ್ಯಗಳು ಲಭ್ಯವಿವೆ ಮತ್ತು ವೈದ್ಯರ ಸಲಹೆಯಂತೆ ಅವರಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು ಎಂಬುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಸರ್ವೋಚ್ಛ ನ್ಯಾಯಾಲಯ ಈ ಕ್ರಮ ತೆಗೆದುಕೊಂಡಿದೆ.
ಇಸ್ಮಾಯೀಲ್ ರನ್ನು ಭಾರತ ಸರಕಾರದ ವಿರುದ್ಧ ಮುಸ್ಲಿಮ್ ಯುವಕರನ್ನು ಎತ್ತಿಕಟ್ಟಿದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿತ್ತು.
ಇದಕ್ಕೂ ಮುನ್ನ, ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಇಸ್ಮಾಯೀಲ್ ರ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು ಹಾಗೂ ಜೈಲು ಆವರಣದಲ್ಲೇ ಅಗತ್ಯ ವೈದ್ಯಕೀಯ ಶುಶ್ರೂಷೆ ನೀಡಬಹುದೇ ಎಂಬುದಾಗಿ ಸರಕಾರವನ್ನು ಕೇಳಿತ್ತು.
ದಿಲ್ಲಿ ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲೆ ಅರ್ಚನಾ ಪಾಠಕ್ ದವೆ, ತಿಹಾರ್ ಜೈಲ್ ಒಂದರಲ್ಲಿ ಇಸ್ಮಾಯೀಲ್ ಕೋರಿರುವ ಫಿಸಿಯೋತೆರಪಿ ಲಭ್ಯವಿದೆ ಮತ್ತು ಅಗತ್ಯ ಬಿದ್ದರೆ, ಅಧಿಕೃತ ವೈದ್ಯರ ಸಲಹೆಯ ಆಧಾರದಲ್ಲಿ, ಅದನ್ನು ತಿಹಾರ ಜೈಲು ಮೂರರಲ್ಲೂ ಒದಗಿಸಬಹುದಾಗಿದೆ ಎಂದು ತಿಳೀಸಿದರು.