ದಿಲ್ಲಿ ಸ್ಫೋಟ | ಅಮಿತ್ ಶಾ ಏಕೆ ವಿಫಲರಾಗುತ್ತಿದ್ದಾರೆ: ಮಹುವಾ ಮೊಯಿತ್ರಾ ಪ್ರಶ್ನೆ
Photo: PTI
ಕೋಲ್ಕತ್ತಾ: ದಿಲ್ಲಿಯಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ, “ಭಾರತಕ್ಕೆ ಸಮರ್ಥ ಗೃಹ ಸಚಿವರು ಬೇಕಾಗಿದ್ದಾರೆಯೇ ಹೊರತು, ಪೂರ್ಣಾವಧಿಯ ದ್ವೇಷ ಪ್ರಚಾರಕ ಸಚಿವರಲ್ಲ. ನಮ್ಮ ಗಡಿಗಳು ಹಾಗೂ ನಗರಗಳೆರಡನ್ನೂ ರಕ್ಷಿಸುವ ಕರ್ತವ್ಯ ಅಮಿತ್ ಶಾ ಅವರದ್ದಲ್ಲವೆ? ಅವರ ಎಲ್ಲ ವಿಧದಲ್ಲೂ ಯಾಕಿಷ್ಟು ದಯನೀಯವಾಗಿ ವಿಫಲರಾಗುತ್ತಿದ್ದಾರೆ?” ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸಂಜೆ ದಿಲ್ಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಹಲವು ಮಂದಿ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡ ಘಟನೆ ನಡೆದ ಬಳಿಕ ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದ್ದು, ಪೊಲೀಸ್ ಹಾಗೂ ಗುಪ್ತಚರ ವ್ಯವಸ್ಥೆಯ ಲೋಪಗಳ ಕುರಿತೂ ಅವರು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ, ಕೃಷ್ಣಾನಗರ್ ಸಂಸದೆಯೂ ಆದ ಮಹುವಾ ಮೊಯಿತ್ರಾ, ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಸರಕಾರದ ನಡೆ, ಕಾನೂನು ಮತ್ತು ಸುವ್ಯವಸ್ಥೆ, ಒಕ್ಕೂಟ ವ್ಯವಸ್ಥೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದರು.