ತ್ರಿಪುರ | ಬಿಜೆಪಿ ಬೆಂಬಲಿತ ಗೂಂಡಾಗಳು ಪಕ್ಷದ ಕಚೇರಿಗೆ ಹಾನಿ ಮಾಡಿದ್ದಾರೆ : ಪ್ರತಿಪಕ್ಷ ಸಿಪಿಎಂ ಆರೋಪ
PC : @cpimspeak
ಅಗರ್ತಲಾ,ಸೆ.20: ಪಶ್ಚಿಮ ತ್ರಿಪುರಾದ ಪ್ರತಾಪಗಢ ಪ್ರದೇಶದಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳು ತನ್ನ ಪಕ್ಷದ ಕಚೇರಿಗೆ ಬುಲ್ಡೋಝರ್ನಿಂದ ಹಾನಿ ಮಾಡಿದ್ದಾರೆಂದು ಪ್ರತಿಪಕ್ಷ ಸಿಪಿಎಂ ಶನಿವಾರ ಆಪಾದಿಸಿದೆ.
ಸಿಪಿಎಂ ಸ್ಥಳೀಯ ಸಮಿತಿಯ ಕಚೇರಿಗೆ , ಶುಕ್ರವಾರ ನಸುಕಿನಲ್ಲಿ 1.30ರ ವೇಳೆಗೆ ಬುಲ್ಡೋಝರ್ನೊಂದಿಗೆ ಆಗಮಿಸಿದ ಗೂಂಡಾಗಳು ಕಟ್ಟಡಕ್ಕೆ ಹಾನಿ ಮಾಡಿದ್ದಾರೆಂದು ತ್ರಿಪುರಾ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಿತೇಂದ್ರ ಚೌಧರಿ ಆಪಾದಿಸಿದ್ದಾರೆ.
No halt to RSS-BJP's assault on the democratic institutions in Tripura. Today, between 2-3 AM, BJP goons bulldozed the CPI(M)'s Pratapgarh LC Office at the outskirts of Agartala city. pic.twitter.com/UjyFhJLJms
— CPI (M) (@cpimspeak) September 20, 2025
ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಬಿಜೆಪಿ ಹಾಗೂ ಆರೆಸ್ಸೆಸ್ಗೆ ಇರುವ ‘ಗೌರವ’ವನ್ನು ಈ ವಿಧ್ವಂಸ ಕೃತ್ಯ ತೋರಿಸಿಕೊಡುತ್ತದೆ ಎಂದು ಚೌಧುರಿ ಹೇಳಿದ್ದಾರೆ.
‘‘ಹುಸಿ ಭರವಸೆಗಳೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು, ಸಾರ್ವಜನಿಕ ನಿಧಿಗಳನ್ನು ದೋಚುತ್ತಿದೆ ಹಾಗೂ ರಾಜ್ಯದ ಪ್ರಜಾತಾಂತ್ರಿಕ ಮೌಲ್ಯಗಳನ್ನು ನಾಶಪಡಿಸುತ್ತಿದೆ ’’ ಎಂದವರು ಆಪಾದಿಸಿದರು.
ಕಗ್ಗತ್ತಲೆಯ ಮರೆಯಲ್ಲಿ ಈ ಹೇಡಿತನದ ಕೃತ್ಯವನ್ನು ನಡೆಸಲಾಗಿದೆ. ಈ ಬಗ್ಗೆ ಪೊಲೀಸರು ದೂರು ನೀಡಿದ್ದರೂ ಅವರು ಕಾರ್ಯಪ್ರವೃತ್ತರಾಗಿಲ್ಲ ಮತ್ತು ಯಾರನ್ನೂ ಬಂಧಿಸಿಲ್ಲವೆಂದು ಚೌಧುರಿ ಆಪಾದಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಪಿಎಂ ಪಕ್ಷದ ಕಚೇರಿಯ ಮೇಲೆ ದಾಳಿ ನಡೆದಿರುವುದು ಇದು ಏಳನೇ ಸಲವಾಗಿದೆ ಎಂದವರು ಆಪಾದಿಸಿದ್ದಾರೆ.
ಈ ಮಧ್ಯೆ ಪೊಲೀಸರು ಹೇಳಿಕೆಯೊಂದನ್ನು ನೀಡಿದ್ದು, ದಾಳಿಗೆ ಬಳಸಲಾದ ಜೆಸಿಬಿಯನ್ನು ಮುಟ್ಟುಗೋಲು ಹಾಕಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ ಎಂದು ಪೂರ್ವ ಅಗರ್ತಲಾ ಪೊಲೀಸ್ ಠಾಣಾ ಉಸ್ತುವಾರಿ ಸುಬ್ರತ ದೇಬನಾಥ್ ತಿಳಿಸಿದ್ದಾರೆ.