ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಫಲಿತಾಂಶ: ಜೂನ್ 11-15ರವರೆಗೆ ‘ಧನ್ಯವಾದ ಯಾತ್ರೆ’ ನಡೆಸಲಿರುವ ಕಾಂಗ್ರೆಸ್
Update: 2024-06-08 17:28 IST
PC : PTI
ಹೊಸ ದಿಲ್ಲಿ: ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ ತೋರಿರುವ ಅಭೂತಪೂರ್ವ ಪ್ರದರ್ಶನದಿಂದ ರೋಮಾಂಚನಗೊಂಡಿರುವ ಕಾಂಗ್ರೆಸ್, ಜೂನ್ 11-15ರವರೆಗೆ ಉತ್ತರ ಪ್ರದೇಶದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ‘ಧನ್ಯವಾದ ಯಾತ್ರೆ’ ನಡೆಸಲಿರುವುದಾಗಿ ಪ್ರಕಟಿಸಿದೆ.
ಈ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಜನರಿಗೆ ಸಂವಿಧಾನದ ಪ್ರತಿಯನ್ನು ನೀಡುವ ಮೂಲಕ, ಅವರನ್ನು ಗೌರವಿಸಲಾಗುತ್ತದೆ ಎಂದು ಹೇಳಲಾಗಿದೆ.
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಅದರ ಮಿತ್ರಪಕ್ಷವಾದ ಸಮಾಜವಾದಿ ಪಕ್ಷವು 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕೇವಲ 33 ಸ್ಥಾನ ಗಳಿಸಲಷ್ಟೆ ಶಕ್ತವಾಗಿರುವ ಬಿಜೆಪಿಗೆ ಎರಡೂ ಪಕ್ಷಗಳು ಆಘಾತ ನೀಡಿವೆ.