ತೆರಿಗೆಪಾವತಿದಾರರ ಮೇಲ್ಮನವಿಗಳ ಇತ್ಯರ್ಥಕ್ಕೆ ‘ವಿವಾದ್ ಸೆ ವಿಶ್ವಾಸ್’
ರವಿ ಅಗ್ರವಾಲ್ | PC : PTI
ಹೊಸದಿಲ್ಲಿ : ಬಾಕಿಯುಳಿದಿರುವ ನೇರತೆರಿಗೆ ಮೇಲ್ಮನವಿಗಳನ್ನು ಇತ್ಯರ್ಥಗೊಳಿಸಲು ನೂತನ ಬಜೆಟ್ ನಲ್ಲಿ ಘೋಷಿಸಲಾದ‘ವಿವಾದ್ ಸೆ ವಿಶ್ವಾಸ್’ ಕಾರ್ಯಕ್ರಮವನ್ನು ಈ ವರ್ಷ ಆರಂಭಿಸಲಾಗುವುದು ಹಾಗೂ ಶೀಘ್ರದಲ್ಲೇ ಈ ಸಂಬಂಧ ಅಧಿಸೂಚನೆಯನ್ನು ಹಾಗೂ ಸಮರ್ಪಕವಾದ ಪ್ರಶ್ನೋತ್ತರಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ನೇರ ತೆರಿಗೆಯ ಮಂಡಳಿಯ ಚೇರ್ಮನ್ ರವಿ ಅಗ್ರವಾಲ್ ತಿಳಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ವಿವಿಧ ವೇದಿಕೆಗಳಲ್ಲಿ ಗಣನೀಯ ಸಂಖ್ಯೆಯ ಆದಾಯ ತೆರಿಗೆ ಅಪೀಲುಗಳು ಮೇಲ್ಮನವಿಯ ಹಂತದಲ್ಲಿದೆ ಹಾಗೂ ಯೋಗ್ಯ ಸಂಖ್ಯೆಯ ತೆರಿಗೆದಾರರು ನೂತನ ಕಾರ್ಯಕ್ರಮದ ಸೌಲಭ್ಯವನ್ನು ಪಡೆಯಲಿದ್ದಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲ ‘ವಿವಾದ್ ಸೆ ವಿಶ್ವಾಸ್’ ಕಾರ್ಯಕ್ರಮವು 2020ರಲ್ಲಿ ಕೇಂದ್ರ ಸರಕಾರವು ಜಾರಿಗೊಳಿಸಿದ್ದು, ಅದು ಆದಾಯ ತೆರಿಗೆ ಶ್ರೇಣಿಗಳು ಅಥವಾ ನೇರ ತೆರಿಗೆಗಳಡಿ ಬರುವ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದ್ದಾಗಿತ್ತು. ಈ ಯೋಜನೆಯಿಂದಾಗಿ ಸುಮಾರು 75 ಸಾವಿರ ಕೋಟಿ ರೂ. ಆದಾಯವನ್ನು ಸಂಗ್ರಹಿಸಲಾಗಿದೆ ಹಾಗೂ ಸುಮಾರು ಒಂದು ಲಕ್ಷ ತೆರಿಗೆ ಪಾವತಿದಾರರರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿದ್ದಾರೆಂದು ರವಿ ಅಗ್ರವಾಲ್ ತಿಳಿಸಿದರು.