ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ದೇಶದಾದ್ಯಂತ ದೀಪ ಆರಿಸಿ ಮೌನ ಪ್ರತಿಭಟನೆ; ಕಗ್ಗತ್ತಲಾದ ಹಲವು ನಗರಗಳು
PC : X
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಕರೆ ನೀಡಿರುವಂತೆ ಬುಧವಾರ, ಎಪ್ರಿಲ್ 30 ರಂದು ರಾತ್ರಿ 9 ಗಂಟೆಗೆ 'ಬತ್ತಿ ಗುಲ್' ಎಂಬ ಹೆಸರಿನಲ್ಲಿ ದೇಶಾದ್ಯಂತ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ 15 ನಿಮಿಷಗಳ ಕಾಲ ದೀಪಗಳನ್ನು ಆರಿಸಲಾಯಿತು.
ದೇಶದ ಬಹುತೇಕ ನಗರಗಳ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ʼಬತ್ತಿ ಗುಲ್ʼ ಗೆ ಬೆಂಬಲ ವ್ಯಕ್ತವಾಯಿತು. ಅದರಂತೆ ಮುಂಬೈ, ಹೈದರಾಬಾದ್, ದಿಲ್ಲಿ, ಬೆಂಗಳೂರಿನ ಸೇರಿದಂತೆ ದೇಶದಾದ್ಯಂತ ಬಹುತೇಕ ಪ್ರದೇಶಗಳು 15 ನಿಮಿಷ ಮೌನ ಪ್ರತಿಭಟನೆಯಲ್ಲಿ ಭಾಗಿಯಾದವು.
ಸಮುದಾಯದ ಜನರು ತಮ್ಮ ಮನೆಗಳಲ್ಲಿ ದೀಪ ಆರಿಸಿದರು. ಮಸೀದಿಗಳ ದೀಪವೂ 15 ನಿಮಿಗಳ ಕಾಲ ಆರಿತು. ಹಾದಿ ಬೀದಿಗಳಲ್ಲಿ ಕಗ್ಗತ್ತಲೆ ಆವರಿಸಿತು. ವಾಣಿಜ್ಯ ಮಳಿಗೆಗಳೂ ಇರುಳಲ್ಲಿ ಕಳೆದವು.
ದೇಶದ ಪ್ರಮುಖ ರಾಜಕೀಯ ನಾಯಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯ ಭಾಗವಾಗಿ AIMIM ಮುಖ್ಯಸ್ಥ ಅಸದುದ್ದೀನ್ ಉವೈಸಿ ತಮ್ಮ ನಿವಾಸದಲ್ಲಿ ದೀಪಗಳನ್ನು ಆರಿಸಿ ಬೆಂಬಲಿಸಿದರು.