ಪಶ್ಚಿಮ ಬಂಗಾಳ| ಇಬ್ಬರು ಯುವಕರ ಮೃತದೇಹ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
PC : PTI
ಕೋಲ್ಕತಾ, ಜ. 24: ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪ್ನಗರ ಪ್ರದೇಶದಲ್ಲಿ ಇಬ್ಬರು ಯುವಕರ ಮೃತದೇಹ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮೃತಪಟ್ಟ ಯುವಕರನ್ನು ರಾಜ ಭದ್ರ (19) ಹಾಗೂ ರಕಿಬುಲ್ ಮಂಡಲ್ (20) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಗೆಳೆಯರು. ದತ್ತಪಾರಾ ಪ್ರದೇಶದ ನಿವಾಸಿಗಳು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ರಾಜಾ ಮತ್ತು ರಕೀಬುಲ್ ಸರಸ್ವತಿ ಪೂಜೆಗಾಗಿ ಶುಕ್ರವಾರ ಬೆಳಗ್ಗೆ ತಮ್ಮ ನಿವಾಸಗಳಿಂದ ಒಟ್ಟಿಗೆ ತೆರಳಿದ್ದರು ಎಂದು ಅವರು ಕುಟಂಬದ ಸದಸ್ಯರು ಹೇಳಿದ್ದಾರೆ.
ಅಪರಾಹ್ನ ಇಬ್ಬರೂ ತಮ್ಮ ಕುಟುಂಬಗಳ ಜೊತೆಗೆ ಫೋನ್ನಲ್ಲಿ ಮಾತನಾಡಿದ್ದಾರೆ. ಆದರೆ, ಅಪರಾಹ್ನದ ನಂತರ ಕುಟುಂಬದ ಸದಸ್ಯರಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಸಂಜೆವರೆಗೆ ಇಬ್ಬರು ಯುವಕರೊಂದಿಗೆ ಫೋನ್ ಮೂಲಕ ಸಂಪರ್ಕಿಸಲು ಸಾಧ್ಯವಾಗದೇ ಇದ್ದಾಗ, ಕುಟುಂಬಗಳ ಸದಸ್ಯರು ಆತಂಕಗೊಂಡಿದ್ದಾರೆ. ರಾಜ ಭದ್ರನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಕೀಬುಲ್ ಮಂಡಲ್ ಫೋನ್ ಕೇವಲ ರಿಂಗ್ ಆಗುತ್ತಿತ್ತು.
ಶನಿವಾರ ಬೆಳಗ್ಗೆ ಅವರಿಬ್ಬರ ಮೃತದೇಹಗಳು ದತ್ತಪಾರದ ಮಾವಿನ ಮರವೊಂದರಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಸ್ಥಳೀಯರು ಗಮನಿಸಿದರು.
ರಾಜಾ ಮತ್ತು ರಕೀಬುಲ್ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಅವರ ಕುಟುಂಬಗಳು ಮಾಹಿತಿ ನೀಡಿದ ಬಳಿಕ ಹತ್ತಿರದ ಸ್ವರೂಪ್ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ತಮ್ಮ ಪುತ್ರರನ್ನು ಹತ್ಯೆಗೈದು ಮರಕ್ಕೆ ನೇಣು ಹಾಕಲಾಗಿದೆ ಎಂದು ರಾಜಾ ಹಾಗೂ ರಕಿಬುಲ್ ಅವರ ತಂದೆಯಂದಿರು ಆರೋಪಿಸಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.