128 ವರ್ಷದ ಯೋಗ ಗುರು, ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದ ನಿಧನ
Update: 2025-05-04 12:46 IST
ಸ್ವಾಮಿ ಶಿವಾನಂದ (Photo: PTI)
ವಾರಣಾಸಿ: 128 ವರ್ಷದ ಯೋಗ ಗುರು, ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದ ಅವರು ಶನಿವಾರ ರಾತ್ರಿ ನಿಧನರಾದರು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಾರಣಾಸಿಯ ಬಿಎಚ್ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರವಿವಾರ ಹರಿಶ್ಚಂದ್ರ ಘಾಟ್ನಲ್ಲಿ ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಯೋಗ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಇಂದಿನ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯಲ್ಲಿ ಆ. 8, 1896 ರಂದು ಜನಿಸಿದ್ದ ಬಾಬಾ ಶಿವಾನಂದ ಅವರು ಆರು ವರ್ಷದವನಿದ್ದಾಗ ತಮ್ಮ ಪೋಷಕರನ್ನು ಕಳೆದುಕೊಂಡರು. ಆ ಬಳಿಕ, ಓಂಕಾರಾನಂದ ಸ್ವಾಮಿ ಎನ್ನುವವರು ಅವರನ್ನು ನೋಡಿಕೊಳ್ಳುತ್ತಿದ್ದರು.