×
Ad

ಇತರರಿಗೆ ನೋವಾಗದಂತೆ ತಮ್ಮ ಆದರ್ಶಗಳನ್ನು ಪ್ರಚಾರ ಮಾಡಲು ಎಲ್ಲಾ ಧರ್ಮದವರಿಗೂ ಹಕ್ಕಿದೆ: ಎ.ಪಿ. ಉಸ್ತಾದ್

Update: 2026-01-02 14:25 IST

ಕಾಸರಗೋಡು: ಇಸ್ಲಾಂ ಎಂದರೆ ಪ್ರೀತಿ. ಜಗತ್ತಿನಲ್ಲಿ ಎಲ್ಲಾ ಧರ್ಮದವರಿಗೂ ಬದುಕಲು ಮತ್ತು ಇತರರಿಗೆ ನೋವಾಗದಂತೆ ತಮ್ಮ ಆದರ್ಶಗಳನ್ನು ಪ್ರಚಾರ ಮಾಡಲು ಹಕ್ಕಿದೆ ಎಂದು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.

ಕೇರಳ ಮುಸ್ಲಿಂ ಜಮಾಅತ್ ನೇತೃತ್ವದಲ್ಲಿ ಜ.1 ರಂದು ಆರಂಭವಾದ ‘ಕೇರಳ ಯಾತ್ರೆ’ಗೆ ಚೆರ್ಕಳದ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ನಗರದಲ್ಲಿ ನೀಡಲಾದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. 

ಎಲ್ಲರೊಂದಿಗೂ ಒಳಿತಿನಿಂದ ವರ್ತಿಸುವುದೇ ಇಸ್ಲಾಂನ ಬೋಧನೆಯಾಗಿದೆ. ನಾವೆಲ್ಲರೂ ಮನುಷ್ಯರು ಎಂಬ ಪರಿಗಣನೆಯನ್ನು ಕೈಬಿಡಬಾರದು. ಶಾಂತಿಯುತ ಜೀವನ ಪ್ರತಿಯೊಬ್ಬರ ಹಕ್ಕು. ಒಂದು ನಾಡಿಗೆ ಅತ್ಯಂತ ಅಗತ್ಯವಿರುವುದು ಪ್ರಗತಿ ಮತ್ತು ಶಾಂತಿ. ಶಾಂತಿಯ ಸಂದೇಶಗಳನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಬಡವರನ್ನು ಅಪ್ಪಿಕೊಳ್ಳಲು ಪ್ರವಾದಿಯವರು ಕಲಿಸಿದ್ದಾರೆ ಎಂದು ಹೇಳಿದರು. 

ಕೇರಳ ಮುಸ್ಲಿಂ ನವೋದಯವನ್ನು ನಿರ್ಧರಿಸಿರುವುದು ಸಮಸ್ತ. ನೈಜ ದಿಕ್ಕಿನಲ್ಲಿ ಮುಸ್ಲಿಮರನ್ನು ಸಂಘಟಿತ ಸಮುದಾಯವಾಗಿ ಮುನ್ನಡೆಸಿದ ಸಮಸ್ತದ ಕರ್ಮಫಲಗಳನ್ನು ಇತರ ಸಮುದಾಯಗಳು ವಿವಿಧ ರೀತಿಯಲ್ಲಿ ಅನುಭವಿಸಲು ಸಾಧ್ಯವಾಯಿತು. ಈ ಸಾಧನೆಗಳು ಮತ್ತು ಪ್ರಗತಿಯನ್ನು ಉಳಿಸಿಕೊಳ್ಳಲು ಒಗ್ಗಟ್ಟಿನ ಕಾರ್ಯಚಟುವಟಿಕೆಗಳು ಅನಿವಾರ್ಯವಾಗಿವೆ. ಸಮಸ್ತ ಮತ್ತು ಅದರ ಪೂರ್ವ ಮಾದರಿಗಳ ಕಾರ್ಯಚಟುವಟಿಕೆಗಳ ಮೂಲಕವೇ ಕೇರಳೀಯರು ಇಸ್ಲಾಂ ಧರ್ಮವನ್ನು ಅರ್ಥಮಾಡಿಕೊಂಡು ಸ್ವೀಕರಿಸಿದರು. ಅರೇಬಿಯಾದಿಂದ ಬಂದ ಮಾಲಿಕ್ ಇಬ್ನ್ ದೀನಾರ್ ಮತ್ತು ಅವರ ತಂಡವು ಪ್ರಾಮಾಣಿಕರು ಮತ್ತು ಸದಾಚಾರಿಗಳಾಗಿದ್ದರು. ಇಲ್ಲಿನ ಆಡಳಿತಗಾರರು ಅವರನ್ನು ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸಿದ್ದರು. ಕಾಸರಗೋಡಿನ ಇತಿಹಾಸವು ಆ ಸ್ಮರಣೆಗಳನ್ನು ಒಳಗೊಂಡಿದೆ ಎಂದರು.


ಸಮಸ್ತದ ಶತಮಾನೋತ್ಸವವನ್ನು ಸ್ಮರಣೀಯವಾಗಿಸಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಸ್ಲಾಮಿಕ್ ಜ್ಞಾನ ಮತ್ತು ಆಧುನಿಕ ಶಿಕ್ಷಣವನ್ನು ಸಮನ್ವಯಗೊಳಿಸುವ ಇಸ್ಲಾಮಿಕ್ ವಿಶ್ವವಿದ್ಯಾಲಯ ‘ಜಾಮಿಅತುಲ್ ಹಿಂದ್’ ಸೇರಿದಂತೆ ಹಲವು ಯೋಜನೆಗಳನ್ನು ಸಮಸ್ತದ ಅಡಿಯಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ. ಸಾಮಾಜಿಕ ಕ್ಷೇತ್ರದಲ್ಲೂ ಸಮಸ್ತ ಗಮನಾರ್ಹ ಕಾರ್ಯಗಳನ್ನು ಮಾಡುತ್ತಿದೆ ಎಂದು ಕಾಂತಪುರಂ ಉಸ್ತಾದ್ ಹೇಳಿದರು.

ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಲ್ ವಹಿಸಿದ್ದರು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಿದರು. ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಶಾಸಕರಾದ ಎಂ. ರಾಜಗೋಪಾಲನ್, ಎನ್.ಎ. ನೆಲ್ಲಿಕುನ್ನು, ಅಡ್ವಕೇಟ್ ಸಿ.ಎಚ್. ಕುಞಂಬು, ಇ. ಚಂದ್ರಶೇಖರನ್, ಎ.ಕೆ.ಎಂ. ಅಶ್ರಫ್, ಚಿನ್ಮಯ ಮಿಷನ್ ಕೇರಳ ಘಟಕದ ಅಧ್ಯಕ್ಷ ವಿವೇಕಾನಂದ ಸರಸ್ವತಿ, ಫಾದರ್ ಮ್ಯಾಥ್ಯೂ ಬೇಬಿ ಮಾರ್ತೋಮ, ಎಂ. ಅಬ್ದುಲ್ ರಹಿಮಾನ್, ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಹರ್ಷಾದ್ ವರ್ಕಾಡಿ, ಅಜೀಜ್ ಕಡಪ್ಪುರಂ ಮುಂತಾದವರು ಉಪಸ್ಥಿತರಿದ್ದರು. ಸಿ. ಮುಹಮ್ಮದ್ ಫೈಝಿ, ರಹಮತುಲ್ಲಾ ಸಖಾಫಿ ಎಳಮರಂ ವಿಷಯ ಮಂಡಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿದರು ಮತ್ತು ಕಾಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ ವಂದಿಸಿದರು.

ಯಾತ್ರೆಯ ವೇಳಾಪಟ್ಟಿ:

ಜನವರಿ 2: ಕಣ್ಣೂರು ಕಲೆಕ್ಟರೇಟ್ ಮೈದಾನ

ಜನವರಿ 3: ನಾದಾಪುರಂ

ಜನವರಿ 4: ಕೋಝಿಕ್ಕೋಡ್ ಮುದಲಕ್ಕುಳಂ

ಜನವರಿ 5: ಕಲ್ಪೆಟ್ಟಾ

ಜನವರಿ 6: ಗೂಡಲ್ಲೂರು

ಜನವರಿ 7: ಅರೀಕ್ಕೋಡ್

ಜನವರಿ 8: ತಿರೂರ್

ಜನವರಿ 9: ಒಟ್ಟಪ್ಪಾಲಂ

ಜನವರಿ 10: ಚಾವಕ್ಕಾಡ್

ಜನವರಿ 11: ಎರ್ನಾಕುಲಂ ಮರೈನ್ ಡ್ರೈವ್

ಜನವರಿ 12: ತೊಡುಪುಝ

ಜನವರಿ 13: ಕೋಟ್ಟಯಂ

ಜನವರಿ 14: ಬೆಳಿಗ್ಗೆ 10 ಕ್ಕೆ ಪತ್ತನಂತಿಟ್ಟ, ಸಂಜೆ 5 ಕ್ಕೆ ಕಾಯಂಕುಳಂ

ಜನವರಿ 15: ಕೊಲ್ಲಂ

ಜನವರಿ 16: ಸಂಜೆ 5 ಗಂಟೆಗೆ ತಿರುವನಂತಪುರದ ಪುತ್ತರಿಕ್ಕಂಡಂ ಮೈದಾನದಲ್ಲಿ ಸಮಾರೋಪ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News