ಅಂಬೇಡ್ಕರ್ ರನ್ನು ದ್ವೇಷಿಸಿದ್ದ ಸಂಘಪರಿವಾರ | ಹಿಂದುತ್ವವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ಅಂಬೇಡ್ಕರ್

ಸ್ವಾತಂತ್ರ್ಯ ಹೋರಾಟದ ಒಂದು ಹಂತದಲ್ಲಿ ಅಂಬೇಡ್ಕರ್ ಅವರು ಸಮುದಾಯದ ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಜೊತೆಗೆ ಸೇರಿ ಸಂವಿಧಾನ ರಚನೆಯ ಭಾಗವಾದ ಉದಾಹರಣೆ ಸಿಕ್ಕುತ್ತದೆ. ಆದರೆ ಎಲ್ಲಿಯೂ ಮತ್ತು ಎಂದಿಗೂ ಬ್ರಾಹ್ಮಣವಾದಿ ಹಿಂದುತ್ವವಾದಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಜೊತೆಗೆ ‘ಕೈಕುಲುಕಿದ’ ಉದಾಹರಣೆಯೂ ಸಿಗುವುದಿಲ್ಲ. ಆದರೂ ಈಗ ಮೋದಿ ಸರಕಾರ ಅಂತಹ ಹಲವಾರು ಸುಳ್ಳುಗಳ ಇತಿಹಾಸವನ್ನು ಬರೆಯಲು ಹೊರಟಿದೆ. ಆದರೆ ಅಂಬೇಡ್ಕರ್ ಅವರ ಬರಹಗಳನ್ನು ಓದಿದರೆ ಅವೆಲ್ಲವೂ ಎಷ್ಟು ಸುಳ್ಳುಗಳೆಂಬುದು ತಾನಾಗಿಯೇ ಅರ್ಥವಾಗುತ್ತದೆ.

Update: 2024-04-24 05:01 GMT
Editor : Safwan | Byline : ಶಿವಸುಂದರ್,

ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಹಾಗೂ ಮನುಸ್ಮತಿ ಆಧಾರಿತ ಹಿಂದೂ ಧರ್ಮ ಈ ಆಂತರಿಕ ವಸಾಹತುಶಾಹಿಯ ಗಂಗೋತ್ರಿಯಾಗಿದ್ದು ಎಲ್ಲಿಯತನಕ ಈ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆ ನಾಶವಾಗಿ ಮನುಷ್ಯರನ್ನು ಮನುಷ್ಯರಾಗಿ ಗುರುತಿಸುವ ಪ್ರಜಾತಾಂತ್ರಿಕ ಮೌಲ್ಯಗಳುಳ್ಳ ವ್ಯವಸ್ಥೆ ನಿರ್ಮಾಣವಾಗುವುದಿಲ್ಲವೋ ಅಲ್ಲಿಯ ತನಕ ಈ ದೇಶದ ಬಹುಜನರಿಗೆ ವಿಮೋಚನೆ ಸಾಧ್ಯವಿಲ್ಲವೆಂದು ಅತ್ಯಂತ ಸ್ಪಷ್ಟ ನಿಲುವಿಗೆ ಬಂದಿದ್ದರು.

ಹೀಗಾಗಿಯೇ ಅಂಬೇಡ್ಕರ್ ಅವರು ಕಾಂಗ್ರೆಸ್ನ ಹಿಂದೂ-ಬ್ರಾಹ್ಮಣ ವಾದಿ ರಾಜಕಾರಣವನ್ನು ಒಪ್ಪಲಿಲ್ಲ. ಅದರ ವಿರುದ್ಧ ದಲಿತ-ಬಹುಜನ ಅಸ್ಮಿತೆಯ ರಾಜಕಾರಣ ಮಾಡಿದರು.

ಅದೇ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರ ಸಾವರ್ಕರ್ವಾದಿ ರಾಜಕೀಯ-ಸಿದ್ಧಾಂತಗಳನ್ನು ಆಮೂಲಾಗ್ರವಾಗಿ ತಿರಸ್ಕರಿಸಿದರು.

ಸ್ವಾತಂತ್ರ್ಯ ಹೋರಾಟದ ಒಂದು ಹಂತದಲ್ಲಿ ಅಂಬೇಡ್ಕರ್ ಅವರು ಸಮುದಾಯದ ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಜೊತೆಗೆ ಸೇರಿ ಸಂವಿಧಾನ ರಚನೆಯ ಭಾಗವಾದ ಉದಾಹರಣೆ ಸಿಕ್ಕುತ್ತದೆ. ಆದರೆ ಎಲ್ಲಿಯೂ ಮತ್ತು ಎಂದಿಗೂ ಬ್ರಾಹ್ಮಣವಾದಿ ಹಿಂದುತ್ವವಾದಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಜೊತೆಗೆ ‘ಕೈಕುಲುಕಿದ’ ಉದಾಹರಣೆಯೂ ಸಿಗುವುದಿಲ್ಲ.

ಆದರೂ ಈಗ ಮೋದಿ ಸರಕಾರ ಅಂತಹ ಹಲವಾರು ಸುಳ್ಳುಗಳ ಇತಿಹಾಸವನ್ನು ಬರೆಯಲು ಹೊರಟಿದೆ. ಆದರೆ ಅಂಬೇಡ್ಕರ್ ಅವರ ಬರಹಗಳನ್ನು ಓದಿದರೆ ಅವೆಲ್ಲವೂ ಎಷ್ಟು ಸುಳ್ಳುಗಳೆಂಬುದು ತಾನಾಗಿಯೇ ಅರ್ಥವಾಗುತ್ತದೆ.

ಆದರೂ ಆರೆಸ್ಸೆಸ್-ಬಿಜೆಪಿಗರು ದಲಿತರಿಗೆ ಕಾಂಗ್ರೆಸ್ ಪ್ರಧಾನ ಶತ್ರುವೇ ವಿನಾ ಬಿಜೆಪಿಯಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ ಮತ್ತು ತಮ್ಮ ಎಂದಿನ ಚಾಳಿಯಂತೆ ತಮ್ಮ ವಾದದ ಸಮರ್ಥನೆಗೆ ಹಲವಾರು ಅರ್ಧ ಸತ್ಯಗಳನ್ನು ಮತ್ತು ಸುಳ್ಳುಗಳನ್ನು ಹರಿಬಿಟ್ಟಿದ್ದಾರೆ.

ಆ ಸುಳ್ಳುಗಳಿಗೆ ಬಲಿಬಿದ್ದಿರುವ ಹಲವರು ಈ ಶತ್ರುಗಳನ್ನೇ ಮಿತ್ರರೆಂದೋ ಅಥವಾ ಕಡಿಮೆ ಶತ್ರುಗಳೆಂದೋ ನಂಬಿಕೊಳ್ಳುವ, ನಂಬಿಸುವ ಹರಾಕಿರಿಯಲ್ಲಿ ತೊಡಗಿದ್ದಾರೆ.

ಹೀಗಾಗಿ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯ ವಿನಾಶವನ್ನು ಗುರಿಯಾಗಿಟ್ಟುಕೊಂಡು ನಡೆಸುವ ವಿಮೋಚನಾ ಸಮರದಲ್ಲಿ ಕಾಂಗ್ರೆಸ್ ರಾಜಕೀಯ ಇಂದಿಗೂ ಮಿತ್ರಶಕ್ತಿಯಾಗದು ಎಂಬ ಎಚ್ಚರವನ್ನಿಟ್ಟುಕೊಳ್ಳುತ್ತಲೇ, ಈ ಸಮಾಜದ ಶೋಷಿತ-ದಮನಿತರಿಗೆ ಸಾವರ್ಕರ್-ಬಿಜೆಪಿ-ಆರೆಸ್ಸೆಸ್ಗಳು ಮಿತ್ರರಾಗುವುದಿರಲಿ ಅತ್ಯಂತ ದೊಡ್ಡ ಅಪಾಯಕಾರಿ ಶತ್ರುಗಳು ಎನ್ನುವ ಸತ್ಯವನ್ನು ಮರೆಯಕೂಡದು.

‘ಅಯೋಗ್ಯ ಹಿಂದೂ ಮಹಾಸಭಾ ಮತ್ತು

ಅಪ್ರಾಮಾಣಿಕ ಕಾಂಗ್ರೆಸ್’

ವಾಸ್ತವದಲ್ಲಿ ಅಂಬೇಡ್ಕರ್ ಆಗ ತಮ್ಮ ಪ್ರಧಾನ ರಾಜಕೀಯ ಶತ್ರುವೆಂದು ಪರಿಗಣಿಸಿದ್ದ ಕಾಂಗ್ರೆಸ್ನ ವಿರುದ್ಧ ಹೋರಾಡುತ್ತಿದ್ದಾಗಲೂ ಅಪಾಯಕಾರಿ ಹಿಂದುತ್ವವಾದಿ ಶಕ್ತಿಗಳ ಬಗ್ಗೆ ಅತ್ಯಂತ ನಿಷ್ಠುರ ಸ್ಪಷ್ಟತೆಯನ್ನು ಇಟ್ಟುಕೊಂಡಿದ್ದರು.

ಉದಾಹರಣೆಗೆ ಕಾಂಗ್ರೆಸ್ ಒಂದು ಸಿದ್ಧಾಂತವಾಗಿ ಮತ್ತು ರಾಜಕೀಯ ಪಕ್ಷವಾಗಿ ಅಸ್ಪಶ್ಯರಿಗೆ ಹೇಗೆ ಮೋಸ ಮಾಡಿತು ಎಂದು ವಿವರಿಸುವ ಅವರ ‘WHAT CONGRESS AND GANDHI HAVE DONE TO THE UNTOUCHABLES’ ಎಂಬ ದೀರ್ಘ ಬರಹದಲ್ಲೂ ಅಂಬೇಡ್ಕರ್ ಅವರು ಕಾಂಗ್ರೆಸ್ ಅಸ್ಪಶ್ಯರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಾವರ್ಕರ್-ಮೂಂಜೆ ನೇತೃತ್ವದ ಹಿಂದೂ ಮಹಾಸಭಾದಂತಹ ಅಯೋಗ್ಯ ಸಂಘಟನೆಗೆ ವಹಿಸಿದ್ದನ್ನು ಅಸ್ಪಶ್ಯರ ಬಗೆಗೆ ಅದಕ್ಕೆ ಇರುವ ತಾತ್ಸಾರಕ್ಕೆ ಒಂದು ಉದಾಹರಣೆಯೆಂದು ಪ್ರತಿಪಾದಿಸುತ್ತಾರೆ.

ಮುಂದುವರಿದು:

‘‘ಕಾಂಗ್ರೆಸ್ ಅಸ್ಪಶ್ಯರ ಸಮಸ್ಯೆಯನ್ನು ನಿವಾರಿಸುವ ಜವಾಬ್ದಾರಿಯಿಂದ ಜಾರಿಕೊಂಡಿದ್ದು ಮಾತ್ರವಲ್ಲದೆ ಆ ಜವಾಬ್ದಾರಿಯನ್ನು ಹಿಂದೂ ಮಹಾಸಭಾಗೆ ವಹಿಸಿ ಗಾಯದ ಮೇಲೆ ಉಪ್ಪು ಸವರಿತು.’’

‘‘ಅಸ್ಪಶ್ಯರ ಉದ್ಧಾರದ ಜವಾಬ್ದಾರಿಯನ್ನು ಹೊರಲು ಅತ್ಯಂತ ಅಯೋಗ್ಯವಾಗಿರುವ ಸಂಸ್ಥೆಯೊಂದು ಇದ್ದರೆ ಅದು ಹಿಂದೂ ಮಹಾಸಭಾ. ಹಿಂದೂ ಮಹಾ ಸಭಾ ಒಂದು ಉಗ್ರ ಹಿಂದೂ ಸಂಘಟನೆ. ಅದರ ಉದ್ದೇಶ ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದೂ ಎಂದು ಇರುವುದೆಲ್ಲವನ್ನೂ ಕಾಪಿಟ್ಟುಕೊಳ್ಳುವುದೇ ಆಗಿದೆ. ಅದು ಒಂದು ಸಾಮಾಜಿಕ ಸುಧಾರಣೆಯ ಸಂಘಟನೆಯೂ ಅಲ್ಲ. ಅದೊಂದು ರಾಜಕೀಯ ಸಂಘಟನೆಯಾಗಿದ್ದು ಅದರ ಪ್ರಮುಖ ಧ್ಯೇಯ ಭಾರತದ ರಾಜಕೀಯದಲ್ಲಿ ಮುಸ್ಲಿಮ್ ಪ್ರಭಾವದ ವಿರುದ್ಧ ಘರ್ಷಣೆ ಹುಟ್ಟುಹಾಕುವುದೇ ಆಗಿದೆ. ತನ್ನ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಅದು ಸಾಮಾಜಿಕ ಸೌಹಾರ್ದವನ್ನು ಉಳಿಸಿಕೊಳ್ಳಲು ಬಯಸುತ್ತದೆ ಹಾಗೂ ಅದಕ್ಕಾಗಿ ಅದು ಅನುಸರಿಸುವ ಮಾರ್ಗ ಜಾತಿ ಮತ್ತು ಅಸ್ಪಶ್ಯತೆಯ ಬಗ್ಗೆ ಮಾತಾಡದೇ ಮೌನವಾಗಿದ್ದುಬಿಡುವುದು. ಅಂತಹ ಸಂಘಟನೆಯನ್ನು ಅಸ್ಪಶ್ಯರ ನಡುವೆ ಕೆಲಸ ಮಾಡಲು ಕಾಂಗ್ರೆಸ್ ಹೇಗೆ ಆಯ್ಕೆ ಮಾಡಿತು ಎಂಬುದು ನನ್ನ ಗ್ರಹಿಕೆಗೆ ಮೀರಿದ ವಿಷಯವಾಗಿದೆ. ಕಾಂಗ್ರೆಸ್ ಹೀಗೇಕೆ ಮಾಡುತ್ತಿದೆ? ತನಗೆ ಅಹಿತಕರವಾಗಿರುವ ಈ ವಿಷಯವನ್ನು ಮತ್ತೊಬ್ಬರಿಗೆ ದಾಟಿಸಿಬಿಡುವ ಧೋರಣೆಯನ್ನು ಬಿಟ್ಟರೆ ಇದಕ್ಕೇ ಬೇರೆ ಕಾರಣಗಳು ಇಲ್ಲ. ಹಿಂದೂ ಮಹಾಸಭಾ ಕೂಡ ಈ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಉತ್ಸುಕತೆ ಹೊಂದಿರಲಿಲ್ಲ ಹಾಗೂ ಇದಕ್ಕಾಗಿ ಕಾಂಗ್ರೆಸ್ ಯಾವುದೇ ವಿಶೇಷ ನಿಧಿಯನ್ನೂ ಎತ್ತಿಟ್ಟಿರಲಿಲ್ಲ. ಹೀಗಾಗಿ ಈ ಯೋಜನೆ ಅತ್ಯಂತ ಅವಮಾನಕಾರಿಯಾದ ಸಾವನ್ನಪ್ಪಿತು’’

(DR. BABASAHEB AMBEDKAR : WRITINGS AND SPEECHES, Vol. 9- p.23)

ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ಗಳು ಮೊದಲಿಂದಲೂ ದಲಿತೋದ್ಧಾರಕ್ಕಾಗಿ ಪಣತೊಟ್ಟು ಕೆಲಸ ಮಾಡುತ್ತಿವೆ ಎಂಬ ಅವರ ಪ್ರಚಾರಗಳು ಎಷ್ಟು ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ.

‘‘ಅಂಬೇಡ್ಕರ್ಗೆ ಸಹಾಯ ಮಾಡುವುದೆಂದರೆ

ಹಾವಿಗೆ ಹಾಲೆರದಂತೆ!’’- ಹಿಂದೂ ಮಹಾಸಭಾ

ಅಂಬೇಡ್ಕರ್ ಅವರು ಈ ಅಭಿಪ್ರಾಯಕ್ಕೆ ಬರಲು ಸಾಕಷ್ಟು ಕಾರಣಗಳಿವೆ. ೧೯೩೫ರಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆಯುತ್ತೇನೆ ಎಂದು ಘೋಷಿಸುವ ತನಕ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಅಸ್ಪಶ್ಯರನ್ನು ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಯಾವಾಗ ೧೯೩೨ರ ದುಂಡು ಮೇಜಿನ ಪರಿಷತ್ತಿನ ಒಪ್ಪಂದಗಳು ಶಾಸನ ಸಭೆಗಳಲ್ಲಿ ಕೋಮುವಾರು ಜನಸಂಖ್ಯಾಧಾರಿತ ಪ್ರಾತಿನಿಧ್ಯವನ್ನು ಘೋಷಿಸಿತೋ, ಆಗ ಹಿಂದೂಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಯಿತು.

ಅಸ್ಪಶ್ಯರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಸಭಾ ಎರಡನ್ನೂ ಸಮಾನವಾಗಿ ಆವರಿಸಿಕೊಂಡಿತ್ತು. ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದದ್ದು ಸಹ ಹಿಂದೂ ಮಹಾಸಭಾದ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಒಲ್ಲದ ಮನಸ್ಸಿನಿಂದ ಸಾವರ್ಕರ್ ಮತ್ತು ಮೂಂಜೆಯಂಥ ಹಿಂದೂ ಮಹಾಸಭಾದ ನಾಯಕರು ಯಾವ ಕಾರಣಕ್ಕೂ ಅಂಬೇಡ್ಕರ್ ಅವರು ಇಸ್ಲಾಮನ್ನು ಸೇರಬಾರದೆಂದು ಮನಒಲಿಸಲು ಮುಂದಾಗುತ್ತಾರೆಯೇ ವಿನಾ ದಲಿತರ ಮೇಲಿನ ಕಾಳಜಿಯಿಂದಲ್ಲ.

ಏಕೆಂದರೆ ಈ ಅನಿವಾರ್ಯತೆ ಸೃಷ್ಟಿಯಾಗುವ ಕೇವಲ ಎರಡು ವಾರಗಳ ಮುನ್ನವೂ ಹಿಂದೂ ಸಭಾದ ನಾಯಕ ಮೂಂಜೆ ಅವರು ತಮ್ಮ ಡೈರಿಯಲ್ಲಿ ಹೀಗೆ ಬರೆದುಕೊಂಡಿರುತ್ತಾರೆ:

‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ’

ಹಾಗೆ ನೋಡಿದರೆ ೧೯೩೨ರ ಪೂನಾ ಒಪ್ಪಂದದಲ್ಲಿ ಗಾಂಧಿ ನೀಡಿದ ದಲಿತೋದ್ಧಾರದ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರು. ಆದರೂ ಅವರು ಅಸ್ಪಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು ೧೯೩೫ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು:

‘‘....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು

(Moonje Diary, Nehru Memorial Museum and Library, ಕೀತ್ ಮೇದೋಕ್ರಾಫ್ಟ್ ಅವರ the Moonje-Ambedkar Pact ಎಂಬ ಉಲ್ಲೇಖ)

ಅಂಬೇಡ್ಕರ್ ಅವರು ತಮ್ಮ ‘ಜಾತಿ ವಿನಾಶ’ ಕೃತಿಯಲ್ಲಿ ಕೆಲವು ಹಿಂದೂ ನಾಯಕರು ತನ್ನನ್ನು ದೇವತೋಟದ ಹಾವೆಂದು ಪರಿಗಣಿಸುತ್ತಾರೆ ಎಂದು ಉಲ್ಲೇಖಿಸುವುದು ಇದೇ ಪ್ರಸಂಗವನ್ನೇ.. ಇದೇ ಮೂಂಜೆಯವರೇ ಸಾವರ್ಕರ್ ಅವರ ಅಣ್ಣ ಮತ್ತು ಹೆಡಗೇವಾರ್ ಅವರ ಜೊತೆ ಸೇರಿ ೧೯೨೫ರಲ್ಲಿ ಆರೆಸ್ಸೆಸನ್ನು ಹುಟ್ಟುಹಾಕಿದರು. ೧೯೩೨ರಲ್ಲಿ ಇಟಲಿಗೆ ಹೋಗಿ ಮುಸ್ಸೋಲಿನಿಯನ್ನು ಭೇಟಿಯಾಗಿ ಬಂದು ಭಾರತದಲ್ಲಿ ಹಿಂದೂಗಳನ್ನು ಅದೇ ಮಾದರಿಯಲ್ಲಿ ಸೈನಿಕವಾಗಿ ಸಂಘಟಿಸಬೇಕೆಂದೂ, ಆರ್ಯ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಜಾತಿ ಶ್ರೇಷ್ಠತೆಯನ್ನು ಉಳಿಸಿಕೊಳ್ಳಬೇಕೆಂಬ ‘ದರ್ಶನ’ವನ್ನು ಒದಗಿಸಿದವರು.

ಸಾವರ್ಕರ್ ಮತ್ತವರ ಅಸ್ಪಶ್ಯ ದೇವಸ್ಥಾನ

ಸಾವರ್ಕರ್ ಅವರ ವಿಚಾರ ಮತ್ತು ಆಚಾರಗಳು ಸಹ ಇಷ್ಟೇ ದಲಿತ ವಿರೋಧಿಯಾಗಿದ್ದರೂ ಮೋದಿ ಸರಕಾರ ಬಂದಮೇಲೆ ಅಂಬೇಡ್ಕರ್ಗೆ ಮುಂಚಿನಿಂದಲೂ ಸಾವರ್ಕರ್ ಜಾತಿ ವಿನಾಶಕ್ಕೆ ಪ್ರಯತ್ನಿಸುತ್ತಿದ್ದ ದಲಿತೋದ್ಧಾರಕ ಎಂಬ ಪ್ರಭಾವಳಿಯನ್ನು ಕಟ್ಟಿಕೊಡಲಾಗುತ್ತಿದೆ.

ಸಾವರ್ಕರ್ ಅವರು ೧೯೨೪ರಲ್ಲಿ ರತ್ನಗಿರಿಯಲ್ಲಿ ಗೃಹಬಂಧನದಲ್ಲಿ ಇದ್ದಾಗಲೇ ಪತಿತ-ಪಾವನ ದೇವಸ್ಥಾನವನ್ನು ಕಟ್ಟಿ ಅಸ್ಪಶ್ಯರಿಗೆ ಪ್ರವೇಶವನ್ನು ಕೊಟ್ಟಿದ್ದರೆಂದೂ, ಅಸ್ಪಶ್ಯತೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದರೆಂದೂ, ಅಂಬೇಡ್ಕರ್ ಕೂಡಾ ಅವರ ಪ್ರಯತ್ನಗಳನ್ನು ಪ್ರಶಂಸಿದ್ದರೆಂದು ಅರ್ಧ ಸತ್ಯ ಹಾಗೂ ಸುಳ್ಳುಗಳಿಂದ ಕೂಡಿದ ಪ್ರಚಾರವನ್ನು ಮಾಡುತ್ತಿದ್ದಾರೆ.

ಮೊದಲಿಗೆ ಮನುಸ್ಮತಿಯ ಬಗ್ಗೆ ಸಾವರ್ಕರ್ ಅವರ ಧೋರಣೆ ಯೇನಾಗಿತ್ತು ಎಂದು ಪರಿಶೀಲಿಸೋಣ.

ಅದರ ಬಗ್ಗೆ ಸಾವರ್ಕರ್ ಅವರು ನಿಖರವಾಗಿ ೧೯೩೨ರಲ್ಲಿ ‘ಕಿರ್ಲೋಸ್ಕರ್’ ಎಂಬ ಪತ್ರಿಕೆಗೆ ಬರೆದ ಸರಣಿ ಲೇಖನದಲ್ಲಿ ಹಾಗೂ ಆ ನಂತರ ೧೯೫೬ರ ಬರಹಗಳಲ್ಲಿ ಹೇಳಿಕೊಂಡಿದ್ದಾರೆ.

ಇವೆಲ್ಲವನ್ನು ಆಧರಿಸಿ ಪ್ರೊ. ಶಂಸುಲ್ ಇಸ್ಲಾಮ್ ಅವರು ‘SAVARKAR-MYTHS AND FACTS’ ಎಂಬ ಪುಸ್ತಕದಲ್ಲಿ ಸಾವರ್ಕರ್ ಬಗೆಗಿನ ಕಥನಗಳನ್ನು ಕೂಲಂಕಶವಾಗಿ ವಿಶ್ಲೇಷಿಸಿದ್ದಾರೆ. ಇಸ್ಲಾಮ್ ಅವರ ಬರಹಗಳನ್ನು ಖಂಡಿಸಿ ಸಂಘಪರಿವಾರದವರು ಈವರೆಗೆ ಹಲವಾರು ಲೇಖನಗಳನ್ನು ಬರೆದಿದ್ದರೂ ಸಾವರ್ಕರ್ ಅವರ ಅಭಿಪ್ರಾಯಗಳ ಬಗ್ಗೆ ಅವರು ಮಾಡಿರುವ ಉಲ್ಲೇಖವನ್ನು ಸುಳ್ಳೆಂದು ಹೇಳಿಲ್ಲ!

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಶಿವಸುಂದರ್,

contributor

Similar News