ಮಲೆನಾಡು ಗಾಂಧಿ ಗೋವಿಂದೇ ಗೌಡ ವಿಧಿವಶ
ಚಿಕ್ಕಮಗಳೂರು, ಜ.6: ಶಿಕ್ಷಣರಂಗದಲ್ಲಿ ಕ್ರಾಂತಿಕಾರಕ ಸುಧಾರಣೆ ತರುವ ಮೂಲಕ ‘ಮಲೆನಾಡ ಗಾಂಧಿ’ ಎನ್ನುವ ಹೆಗ್ಗಳಿಕೆ ಗಳಿಸಿಕೊಂಡ ಸರಳ, ಸಜ್ಜನ, ಮಾಜಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡ ಬುಧವಾರ ಮಧ್ಯಾಹ್ನ 2:55ಕ್ಕೆ ಕೊಪ್ಪ ಪಟ್ಟಣದ ಹೊರ ವಲಯದ ಮಣಿಪುರದಲ್ಲಿ ವಿಧಿವಶರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜ. 4ರಂದು ಬೆಳಗ್ಗೆ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ಕೊಪ್ಪ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಜಿ.ನೀಲಕಂಠಪ್ಪ ಪರೀಕ್ಷೆ ನಡೆಸಿ, ಔಷಧಿ ನೀಡಿದ ಬಳಿಕ ಕೊಂಚ ಚೇತರಿಕೆ ಕಂಡು ಬಂದಿತ್ತು. ಅನಂತರ ಅದೇ ದಿನ ಸಂಜೆ ವೇಳೆಗೆ ತೀವ್ರ ಅಸ್ವಸ್ಥರಾಗಿದ್ದರು. ಕೃತಕ ಉಸಿರಾಟದೊಂದಿಗೆ ಈತನಕ ಅವರು ಬದುಕಿ ಉಳಿದಿದ್ದರಾದರೂ ದೇಹದಲ್ಲಿ ಅಂತಹ ಯಾವುದೇ ಚಲನೆಯೂ ಕಾಣಿಸಿಕೊಂಡಿರಲಿಲ್ಲ. 2 ವರ್ಷಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಗೋವಿಂದೇಗೌಡರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅನಂತರ ಅವರಲ್ಲಿ ಸಂಪೂರ್ಣ ಚೇತರಿಕೆ ಕಾಣಿಸಿಕೊಂಡಿರಲಿಲ್ಲ. ಆಹಾರ ಸೇವನೆಯಲ್ಲಿ ವ್ಯತ್ಯಯ ಜೊತೆಗೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕಳೆದ ಹದಿನೈದು ದಿನಗಳಿಂದಲೂ ಗೋವಿಂದೇಗೌಡರು ಅನ್ನಾಹಾರ ಸೇವನೆ ಇಲ್ಲದೇ ಕೇವಲ ಗ್ಲೂಕೋಸ್ ಹಾಗೂ ಕೃತಕ ಉಸಿರಾಟದ ಮೂಲಕ ಬದುಕಿ ಉಳಿದಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಕಾಂತ, ಪುತ್ರ ಎಚ್.ಜಿ.ವೆಂಕಟೇಶ್, ಐದು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
1926ರ ಮೇ 25ರಂದು ಎನ್.ಆರ್.ಪುರ ತಾಲೂಕಿನ ಕಾನೂರು ಗ್ರಾಮದ ಹಿಣಚಿ ಎಂಬಲ್ಲಿ ಗಿಡ್ಡೇಗೌಡ ಮತ್ತು ಬೋಬಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಗೋವಿಂದೇಗೌಡರು, ಹುಟ್ಟೂರು ಕಾನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಬಳಿಕ ಚಿಕ್ಕಮಗಳೂರಿನಲ್ಲಿ ಪ್ರೌಡ ಶಿಕ್ಷಣದಲ್ಲಿ ಇಂಟರ್ ಮೀಡಿಯೇಟ್ ಪಡೆದರು. ಶಿವಮೊಗ್ಗದಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ ಅವರು, ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದರು. 1948ರಲ್ಲಿ ಕೊಪ್ಪದಲ್ಲಿ ಕಿರಾಣಿ ಅಂಗಡಿಯನ್ನು ತೆರೆದಿದ್ದರಾದರೂ ಗೋವಿಂದೇಗೌಡರು ರಾಜಕೀಯದ ಜೊತೆಗೆ ವ್ಯವಸಾಯದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು.
ಕೊಪ್ಪ ಪಟ್ಟಣ ಪಂಚಾಯತ್ಗೆ ತಮ್ಮ 24ನೆ ವಯಸ್ಸಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಗೋವಿಂದೇಗೌಡರು, ಅಲ್ಲಿಂದಲೇ ತಮ್ಮ ಕ್ರಾಂತೀಕಾರಣ ಬದಲಾವಣೆಗಳಿಗೆ ನಾಂದಿ ಹಾಡಿದರು. ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದಕ್ಕೆ ಗೋವಿಂದೇಗೌಡರು ತೋರಿಸಿಕೊಟ್ಟರು. ಅವರು ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ವಿದ್ಯುತ್ ಸೇರಿದಂತೆ ಅಭಿವೃದ್ಧಿಗೆ ಕೆಲಸಗಳಿಗೆ ಕೈ ಹಚ್ಚಿದ್ದರು. ಆದಾಯ ಸೋರಿಕೆಗೆ ತಡೆಗಟ್ಟಲು ಪ್ರಯತ್ನಿಸಿದ್ದರು.
ಅಧಿಕಾರದಲ್ಲಿ ಅರ್ಹ ಪ್ರದರ್ಶೀಸದೇ ಸರಳ, ಸಜ್ಜನರಾಗಿ ತಮ್ಮ ನಡೆ, ನುಡಿ ಸತ್ಯ ಶುದ್ಧ ಕಾಯಕಗಳಿಂದ ನಾಡಿನ ಜನತೆಯ ಗೌರವಕ್ಕೆ ಪಾತ್ರರಾಗುವ ಮೂಲಕ ಜನತೆಯ ಕಣ್ಮಣಿಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಶಾಲ್ಗೊಳ್ಳುವ ಮೂಲಕ ಅಪ್ಪಟ ಗಾಂಧಿವಾದಿಯಾಗಿ, ಆದರ್ಶ ಜೀವನ ವೌಲ್ಯಗಳನ್ನು ಅಳವಡಿಸಿಕೊಂಡಿದ್ದರು.
ಸಮೂಹ ಮಾಧ್ಯಮಗಳು, ಶಿಕ್ಷಕರು, ಸಾರ್ವಜನಿಕರು, ಮಠಾಧಿಪತಿಗಳು, ರಾಜಕಾರಣಿಗಳನ್ನು ತಮ್ಮತ್ತ ಸೆಳೆದುಕೊಂಡಿರುವ ಗೋವಿಂದೇಗೌಡರು, ತಮ್ಮ ಪ್ರಾಮಾಣಿಕತೆ, ಸೇವೆ, ನಿಷ್ಟೆ, ಶಿಸ್ತು, ಸಂಯಮಕ್ಕೆ ಹೆಸರಾಗಿ ಬಾಯಿಮಾತಾಗಿದ್ದರು. ಈ ಹಿಂದೆ ಶೃಂಗೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ಶ್ರೇಷ್ಠ ತತ್ವ, ನಿಷ್ಟೆ, ರಾಜಕಾರಣಕ್ಕೆ ಮನಸೋತು ಅವರಿಂದ ಪ್ರಭಾವಿತರಾಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದರು.
ಜಾತ್ಯತೀತ ಮನೊಭಾವನೆಯ ಗೌಡರು, ಸರ್ವಜನರು, ಸರ್ವ ಧರ್ಮದವರು, ಸಾಹಿತಿ, ಕಲಾವಿದರ ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದರು. ಶ್ರೀವಿನೋಬಾ ಭಾವೆಯವರ ಭೂದಾನ ಚಳವಳಿ ಹಾಗೂ ಜಯಪ್ರಕಾಶ್ ನಾರಾಯಣರವರ ಸರ್ವೋಧಯ ಚಳವಳಿಯಲ್ಲಿ ಅಚಲ ನಂಬಿಕೆ ನಿಷ್ಟೆ ಇರಿಸಿಕೊಂಡಿದ್ದರಲ್ಲದೇ ಸಕ್ರೀಯವಾಗಿ ಚಳುವಳಿಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಬದುಕಿನ ಬುತ್ತಿಯಾಗಿರಿಸಿಕೊಂಡಿದ್ದ ಅವರು, ಜಾತಿ ಮತ್ತು ಭ್ರಷ್ಟಾಚಾರದಿಂದ ದೂರವಿರುವ ಶುದ್ಧ ರಾಜಕಾರಣಿಯಾಗಿದ್ದರು. ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದರು. ಶಿಕ್ಷಕರ ನೇಮಕಾತಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಎಚ್.ಜಿ.ಗೋವಿಂದೇಗೌಡರು ಶಿಕ್ಷಕರ ಆಯ್ಕೆಗೆ ವಿಶೇಷ ಮಹತ್ವವನ್ನು ನಿಡಿದ್ದರು. ಅಂದು ಶಿಕ್ಷಕರ ನೇಮಕಾತಿಯಲ್ಲಿ ಪಾರದರ್ಶಕತೆ ತೋರುವ ಮೂಲಕ ಗಮನ ಸೆಳೆದಿದ್ದರು.
ಕೌನ್ಸ್ಸೆಲಿಂಗ್, ಮೆರೀಟ್, ರೋಸ್ಟರ್ ಆಧಾರದಲ್ಲಿ ಭರೋಬ್ಬರಿ 1.10 ಲಕ್ಷ ಶಿಕ್ಷಕರ ನೇಮಕಾತಿಯನ್ನು ನಡೆಸಿ ನಾಡಿನ ಜನರ ಪ್ರೀತ್ಯಾಧರಗಳಿಗೆ ಪಾತ್ರರಾಗಿದ್ದರು. ಈ ಪೈಕಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದರು. ಇಂತಹ ಕ್ರಾಂತಿಕಾರಕ ಹೆಜ್ಜೆ ಜನಮಾನಸದಲ್ಲಿ ಅಚ್ಚಳಿಯ ಪುಟವಾಗಿ ಉಳಿದಿದೆ. ಅಲ್ಲದೇ ಶಿಕ್ಷಣ ಇಲಾಖೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಮುನ್ನಡೆಸಿದ್ದರು.