×
Ad

ವಿಜ್ಞಾನ ಕಾಂಗ್ರೆಸ್ ಆರೆಸ್ಸೆಸ್ ಬೆಂಬಲಿತ ಕಾರ್ಯಸೂಚಿ: ಶರದ್ ಯಾದವ್ ಟೀಕೆ

Update: 2016-01-09 22:33 IST

ಹೊಸದಿಲ್ಲಿ, ಜ.9: ಮೈಸೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಕೆಲವು ಪ್ರಬಂಧಗಳ ಮಂಡನೆಯ ಕುರಿತು ಜೆಡಿಯು ಇಂದು ಕೇಂದ್ರ ಸರಕಾರದ ವಿರುದ್ಧ ಭಾರೀ ವಾಗ್ದಾಳಿ ನಡೆಸಿದೆ. ಇದು ಅತ್ಯಂತ ಜುಗುಪ್ಸಿತ, ಹಾಸ್ಯಾಸ್ಪದ ಹಾಗೂ ಅಪಾಯಕಾರಿಯಾಗಿರುವ ‘ಆರೆಸ್ಸೆಸ್ ಬೆಂಬಲಿತ ಕಾರ್ಯಸೂಚಿಯ’ ವಾಸನೆ ಹೊಂದಿದೆಯೆಂದು ಅದು ಟೀಕಿಸಿದೆ.
1914ರಿಂದ ಪ್ರತಿ ವರ್ಷ ಭಾರತೀಯ ವಿಜ್ಞಾನ ಕಾಂಗ್ರೆಸನ್ನು ನಡೆಸಲಾಗುತ್ತಿದೆ. ಆದರೆ, ಮೈಸೂರಿನಲ್ಲಿ ಕಂಡಂತಹ ನಾಟಕೀಯ ಪರಿಸ್ಥಿಯನ್ನು ತಾವೆಂದೂ ಕಂಡಿಲ್ಲ.ಅಲ್ಲಿ, ವಿಜ್ಞಾನಕ್ಕೆ ಉತ್ತೇಜನ ನೀಡುವ ಪ್ರಧಾನ ಉದ್ದೇಶವೇ ಕಾಣೆಯಾಗಿತ್ತು. ಅಂತಹ ಸ್ಥಳದಲ್ಲಿ ಆರೆಸ್ಸೆಸ್ ಬೆಂಬಲಿತ ಕಾರ್ಯಸೂಚಿ ಕಂಡು ಬಂತು. ಇದು ದೇಶದ ಏಕತೆ ಮತ್ತು ಸಮಗ್ರತೆಗೆ ಅತ್ಯಂತ ರೇಜಿಗೆಯ, ನಗೆಪಾಟಲಿನ ಹಾಗೂ ಅಪಾಯಕಾರಿ ಸಂಗತಿಯಾಗಿದೆ. ಅಂತಹ ಕಾರ್ಯಕ್ರಮದಲ್ಲಿ ಒಂದು ಧರ್ಮದ ಕುರಿತು ಮಾತನಾಡುವುದು,ಇತರ ಧರ್ಮಗಳ ಭಾವನೆಗಳನ್ನು ಉದ್ರೇಕಿಸುವುದಲ್ಲದೆ ಬೇರಲ್ಲವೆಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಹೇಳಿಕೆಯೊಂದರಲ್ಲಿ ಕಿಡಿಕಾರಿದ್ದಾರೆ.
ವಿಜ್ಞಾನ ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಶಿವನು ಪರಿಸರವಾದಿಯೆಂಬುದನ್ನು ಜನರು ಕೇಳಿದ್ದಾರೆ. ಒಬ್ಬರು ಶಂಖ ಊದುವುದರಿಂದಾಗುವ ವೈದ್ಯಕೀಯ ಪರಿಣಾಮಗಳ ಬಗ್ಗೆ ಪ್ರಬಂಧ ಮಂಡಿಸಿದ್ದರೆಂದು ಅವರು ಬೆಟ್ಟು ಮಾಡಿದ್ದಾರೆ.
ಯಾದವ್, ಮೈಸೂರಿನಲ್ಲಿ ಗುರುವಾರ ಮುಕ್ತಾಯಗೊಂಡ 103ನೆ ಭಾರತೀಯ ವಿಜ್ಞ್ಞಾನ ಕಾಂಗ್ರೆಸ್‌ನ ಕುರಿತು ಉಲ್ಲೇಖಿಸಿದ್ದಾರೆ. ಸಮ್ಮೇಳನದಲ್ಲಿ ಖಾಸಗಿ ವಿವಿ ನಿಯಂತ್ರಣ ಆಯೋಗದ ಅಧ್ಯಕ್ಷ ಮಂಡಿಸಿದ ಪ್ರಬಂಧದಲ್ಲಿ, ಶಿವನು ವಿಶ್ವದಲ್ಲೇ ಅತಿ ದೊಡ್ಡ ಪರಿಸರವಾದಿಯೆಂದು ಹೊಗಳಿದ್ದರು.
ಕೈಲಾಸ ಪರ್ವತದ ಒಡೆಯನೆಂದು ಶಿವನನ್ನು ಕರೆದಿದ್ದ ಪ್ರಬಂಧವು, ಮಾನವರಿಗೆ ಶುದ್ಧ ನೀರನ್ನು ಒದಗಿಸುವ ಆತನ ಶಕ್ತಿಯ ಕುರಿತು ಹೇಳಿತ್ತು.
ಕಾನ್ಪುರದ ಹೆಚ್ಚುವರಿ ಆಯುಕ್ತರೊಬ್ಬರ ಪ್ರಬಂಧವು ಆರೋಗ್ಯ ಮತ್ತು ಸೌಖ್ಯಕ್ಕಾಗಿ ಶಂಖ ಊದುವ ಕುರಿತು ತಿಳಿಸಿತ್ತು.
ಕಾರ್ಯಕ್ರಮದಲ್ಲಿ ಅಂತಹ ಪ್ರಬಂಧಗಳನ್ನು ಮಂಡಿಸಬಾರದಿತ್ತು ಹಾಗೂ ಚರ್ಚಿಸಬಾರದಿತ್ತೆಂದು ಯಾದವ್ ಅಭಿಪ್ರಾಯಿಸಿದ್ದಾರೆ.
ಒಬ್ಬರು ನೊಬೆಲ್ ವಿಜೇತರೆಂದಂತೆ ಈ ಸಮ್ಮೇಳನವು ‘ಸರ್ಕಸ್‌ನಂತೆ’ ಕಾಣಿಸಿತು. ಅವರು ಮುಂದೆಂದೂ ತಾನು ವಿಜ್ಞಾನ ಕಾಂಗ್ರೆಸ್‌ನಲ್ಲಿ ಭಾಗವಹಿಸುವುದಿಲ್ಲವೆಂದೂ ಹೇಳಿದ್ದಾರೆಂದು ಜೆಡಿಯು ಅಧ್ಯಕ್ಷ ಹೇಳಿದ್ದಾರೆ.
ಕಳೆದ ವರ್ಷ ಮುಂಬೈಯಲ್ಲಿ ನಡೆದಿದ್ದ ವಿಜ್ಞಾನ ಕಾಂಗ್ರೆಸ್‌ನ ‘ಸಂಸ್ಕೃತದ ಮೂಲಕ ಪುರಾತನ ವಿಜ್ಞ್ಞಾನ’ ಎಂಬ ಗೋಷ್ಠಿಯಲ್ಲಿ ವೈಮಾನಿಕ ತಂತ್ರಜ್ಞಾನದ ಕುರಿತು ಹೇಳಲಾಗಿತ್ತೆಂದು ಅವರು ಜ್ಞಾಪಿಸಿದ್ದಾರೆ.

ಗ್ರಹಗಳಿಗೆ ಪ್ರಯಾಣಿಸಬಹುದಾಗಿದ್ದ ವಿಮಾನದ ಕುರಿತು ಮಾತನಾಡಿದ್ದ ಪ್ರಬಂಧಕಾರ, ರೈಟ್ ಸೋದರರಿಗಿಂತ ಮೊದಲೇ ಭಾರತೀಯ ವಿಮಾನ ಹಾರಿಸಿದ್ದರೆಂದು ಹೇಳಿದ್ದರು. ಇದು ‘ಹಾಸ್ಯಾಸ್ಪದ’ ಎಂದು ಯಾದವ್ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ವಿಜ್ಞಾನ ಕಾಂಗ್ರೆಸ್‌ನಂತಹ ಪ್ರತಿ ವರ್ಷ ನಡೆಯುವ ಸೂಕ್ಷ್ಮ ಸಮ್ಮೇಳನದಲ್ಲಿ ಯಾವ ಪ್ರಬಂಧಗಳನ್ನು ಮಂಡಿಸಲಾಗುತ್ತದೆ, ಯಾರು ಮಂಡಿಸುತ್ತಾರೆ ಹಾಗೂ ಇತರ ಅನೇಕ ವಿಚಾರಗಳ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗುತ್ತದೆ. ಆದರೆ, ಮೈಸೂರಿನ ಸಮ್ಮೇಳನದಲ್ಲಿ ಯಾವುದೇ ಪರಿಶೀಲನೆ ನಡೆದಂತೆ ತೋರುವುದಿಲ್ಲ. ಅದು ಈಗಿನ ಸರಕಾರದ ಬೇರೆಯೇ ಉದ್ದೇಶಗಳೊಂದಿಗೆ ನಡೆದಿದೆ. ತಾನು ಈ ರೀತಿಯ ಕ್ರಮವನ್ನು ವಿರೋಧಿಸುತ್ತೇನೆ. ಭವಿಷ್ಯದಲ್ಲಿ ಅಂತಹುದು ನಡೆಯದಂತೆ ಸರಕಾರವು ಪ್ರಬಲ ಹೇಳೆಕೆಯೊಂದರೊಂದಿಗೆ ಮುಂದೆ ಬರಬೇಕೆಂದು ಯಾದವ್ ಆಗ್ರಹಿಸಿದ್ದಾರೆ.


..............................................

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News