ಪರ್ಯಾಯಕ್ಕೆ ಇಬ್ರಾಹೀಮರ ಹೊರೆಕಾಣಿಕೆ...

Update: 2016-01-24 04:22 GMT

ಪಿ. ಲಂಕೇಶರ ಕಾಲದಲ್ಲಿ ಬೃಹನ್ನಳೆ ಎಂದು ಬಿರುದಾಂಕಿತರಾಗಿದ್ದ ನೃತ್ಯವಿಶಾರದರೂ, ಸಿದ್ದರಾಮಯ್ಯರ ಸರಕಾರದ ಭೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಇಬ್ರಾಹಿಂ ಸಾಹೇಬರನ್ನು ಪೇಜಾವರ ಶ್ರೀಗಳು ಪರ್ಯಾಯ ಉತ್ಸವಕ್ಕೆ ಆಹ್ವಾನಿಸಿದ್ದೇ ತಡ, ಇಬ್ರಾಹಿಂ ಸಾಹೇಬರು ರೋಮಾಂಚಿತರಾಗಿ, ತಲೆಯ ಮೇಲಿನ ಟೊಪ್ಪಿಯನ್ನು ಚಾಪೆಯಡಿಗೆ ತುರುಕಿ, ಕನ್ನಡಿಯ ಮುಂದೆ ಕೂತು ಅಳಿದುಳಿದ ಗಡ್ಡವನ್ನೂ ಶೇವ್ ಮಾಡಿಕೊಂಡರು.ಕಪಾಟಿನಲ್ಲಿ ಮುಚ್ಚಿಟ್ಟಿದ್ದ ಸೀರೆಯನ್ನು ಸಂಭ್ರಮದಿಂದ ತೆಗೆದೇ ಬಿಟ್ಟರು. ತಿಜೋರಿಯಲ್ಲಿದ್ದ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಂಡವರೇ, ದಿಲ್ಲಿಯಲ್ಲಿರುವ ಆಸ್ಕರ್‌ಗೆ ಫೋನಾಯಿಸಿದ ಇಬ್ರಾಹಿಮರು ‘‘ಫೆರ್ನಾಂಡಿಸರೇ ಎಲ್ಲಿದ್ದೀರಿ...?’’

‘‘ನಾನು ಸೀರೆ ಅಂಗಡಿಯಲ್ಲಿದ್ದೇನೆ. ಪೇಜಾವರರು ನನಗೂ ಪರ್ಯಾಯ ಉತ್ಸವಕ್ಕೆ ಕರೆದಿದ್ದಾರೆ...ಹಸಿರು ಜರತಾರಿ ಸೀರೆಯುಟ್ಟು, ಲಕ್ಷಣವಾಗಿ ಹಣೆಗೆ ಕುಂಕುಮ ಇಟ್ಟುಕೊಂಡು ಪರ್ಯಾಯದಲ್ಲಿ ಭಾಗವಹಿಸಬೇಕು ಎಂದಿದ್ದಾರೆ. ಮುತ್ತೈದೆಯರಿಗಷ್ಟೇ ಅವಕಾಶವಂತೆ...ಆದುದರಿಂದ ಸೋನಿಯಾಗಾಂಧಿಯವರ ಬದಲು ನಾನೇ ಹೋಗುತ್ತಾ ಇದ್ದೇನೆ...’’


‘‘ಓಹೋ ನೀವೂ ಬರುತ್ತಿದ್ದೀರಾ...ಸ್ವಾಮೀಜಿಗಳು ನನ್ನನ್ನು ಪರ್ಯಾಯದಲ್ಲಿ ನರ್ತಿಸುವುದಕ್ಕೆ ಕರೆದಿದ್ದಾರೆ. ನನ್ನ ಹಳೆಯ ಕೇಸರಿ ಜರತಾರಿ ಸೀರೆ ಹೊರತೆಗಿದಿದ್ದೇನೆ. ಸಿದ್ದರಾಮಯ್ಯ ಅವರ ಸರಕಾರ ಸೇರಿದ ಮೇಲೆ ಸೀರೆ ಉಡುವುದು ಮರೆತೇ ಬಿಟ್ಟಿದೆ...ಬೆಂಗಳೂರಿಗೆ ಬಂದರೆ, ನನಗೆ ಸೀರೆ ಉಡಿಸಿ ಬಿಡುತ್ತೀರಾ...’’ ಇಬ್ರಾಹೀಮರು ವಿನಂತಿ ಮಾಡಿದರು.


‘‘ಖಂಡಿತಾ ಬರುತ್ತೇನೆ...ನಿಮ್ಮ ನೃತ್ಯವನ್ನು ನಾನು ನೋಡಬೇಕೆಂದಿದ್ದೇನೆ. ನಾನು ಅಂದಿನ ಕಾರ್ಯಕ್ರಮದಲ್ಲಿ ಮಿಮಿಕ್ರಿ ಮಾಡಲಿದ್ದೇನೆ....ಮುಖ್ಯವಾಗಿ ಬೇರೆ ಬೇರೆ ಕಾಂಗ್ರೆಸ್ ನಾಯಕರ ಮಿಮಿಕ್ರಿಯನ್ನು ಮಾಡಿ ಪೇಜಾವರರನ್ನು ರಂಜಿಸಲಿದ್ದೇನೆ. ಬಳಿಕ ನಾನು ಯೋಗಾಸನ ಮಾಡುತ್ತಾ ಹಾರ್ಮೋನಿಯಂ ನುಡಿಸಲಿದ್ದೇನೆ....’’


‘‘ಪೇಜಾವರರು ನನ್ನ ಪಾಲಿಗೆ ನಡೆದಾಡುವ ದೇವರು ಇದ್ದ ಹಾಗೆ....ಪರ್ಯಾಯೋತ್ಸವಕ್ಕೆ ನನ್ನನ್ನೇನಾದರೂ ಆಹ್ವಾನಿಸಿದರೆ, ಅವರು ಉಂಡ ಎಂಜಲಲ್ಲಿ ಮಡೆಸ್ನಾನ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದೇನೆ. ದೇವೇಗೌಡರ ಸಹವಾಸದಿಂದ ನನಗೆ ಮೈ ತುಂಬಾ ತುರಿಕೆ ಶುರುವಾಗಿದ್ದಾಗ, ಕೃಷ್ಣ ಮಠದಲ್ಲಿ ಮಡೆಸ್ನಾನ ಮಾಡಿಯೇ ಗುಣವಾಗಿರುವುದು. ಈ ಬಾರಿ ಮತ್ತೆ ಮಡೆಸ್ನಾನ ಮಾಡಿ ನಾನು ಕೃತಾರ್ಥನಾಗುತ್ತೇನೆ...‘‘


‘‘ಹೌದೌದು...ಮಡೆಸ್ನಾನ ಮಾಡುವುದಕ್ಕೆ ನನಗೂ ಆಸೆಯಿದೆ...ಆದರೆ ಮ್ಲೇಚ್ಛರಿಗೆ ಆ ಸೌಲಭ್ಯ ಇಲ್ಲವಂತೆ....ಹೌದಾ?’’ಆಸ್ಕರ್ ದುಃಖದಿಂದ ಕೇಳಿದರು.


‘‘ಮ್ಲೇಚ್ಛರಿಗೆ ಮಡೆಸ್ನಾನಕ್ಕಾಗಿಯೇ ಪ್ರತ್ಯೇಕ ಪಂಕ್ತಿಯಿದೆ....ಆ ಪಂಕ್ತಿಯಲ್ಲಿ ಎಂಜಲೆಲೆಯ ಮೇಲೆ ಹೊರಳಾಡಬಹುದು. ಈ ಬಾರಿ, ಮೈಮೇಲೆ ಒಂದು ತುಂಡು ಬಟ್ಟೆಯನ್ನೂ ಹಾಕದೆ ಹೊರಳಾಡಬೇಕೆಂದಿದ್ದೇನೆ....’’ ಎನ್ನುತ್ತಾ ಇಬ್ರಾಹಿಂ ತಮ್ಮ ಆಸೆಯನ್ನು ತೋಡಿಕೊಂಡರು.


‘‘ಸರಿ...ನಿಮ್ಮ ಜೊತೆಗೆ ನಾನೂ ಈ ಬಾರಿ ಹೊರಳಾಡುತ್ತೇನೆ...ಅಂದ ಹಾಗೆ ನಿಮಗೆ ಪೇಜಾವರರು ದೀಕ್ಷೆ ಕೊಟ್ಟಿದ್ದಾರಂತೆ ಹೌದಾ...?’’ ಆಸ್ಕರರು ಕೇಳಿದರು.
‘‘ಹೌದೌದು...ಅವರು ದೀಕ್ಷೆ ಕೊಟ್ಟ ಮೇಲೆಯೇ ಅವರು ನನ್ನ ಪಾಲಿಗೆ ನಡೆದಾಡುವ ದೇವರಾಗಿದ್ದು.ನನ್ನ ಮನೆಯಲ್ಲಿ ದೇವರ ಕೋಣೆ ಉಂಟು ಗೊತ್ತುಂಟಾ.ಅದರಲ್ಲಿ ಅವರ ಪಾದ ತೊಳೆದ ನೀರು ತುಂಬಾ ಸ್ಟಾಕು ಉಂಟು. ಅದರಲ್ಲಿ ಅವರು ಕೊಟ್ಟ ಶಂಖ, ಜಾಗಟೆ ಇತ್ಯಾದಿಗಳಿವೆ. ನನಗೆ ಬಾಯಾರಿಕೆಯಾದಾಗಲೆಲ್ಲ ಅವರ ಪಾದ ತೊಳೆದ ನೀರನ್ನೇ ಕುಡಿಯುವೆ....ಅವರ ಪಾದಾರವಿಂದಗಳ ಭಾವಚಿತ್ರ ನನ್ನ ದೇವರ ಕೋಣೆಯಲ್ಲಿದೆ. ಅದಕ್ಕೆ ವಂದಿಸಿಯೇ ನಾನು ದೈನಂದಿನ ಕಾರ್ಯಕ್ರಮಗಳನ್ನು ಆರಂಭಿಸುವುದು....’’ ಇಬ್ರಾಹೀಮರು ಹೇಳಿದರು.


‘‘ಅಂದರೆ ಬಿರಿಯಾನಿ ತಿನ್ನುವುದನ್ನು ಬಿಟ್ಟೇ ಬಿಟ್ಟಿರಾ?’’ ಆಸ್ಕರ್ ಅಚ್ಚರಿಯಿಂದ ಕೇಳಿದರು.


‘‘ಛೀ...ಛೀ...ಬಿರಿಯಾನಿಯನ್ನು ನನ್ನ ಜೀವಮಾನದಲ್ಲೇ ಮುಟ್ಟಿ ನೋಡಿಲ್ಲ ಕಣ್ರೀ....ನನಗೆ ಬಾಲ್ಯದಿಂದಲೇ ಮಡಿ ಮೈಲಿಗೆ ಜಾಸ್ತಿ....ಎರಡು ವರ್ಷದವನಾಗಿರುವಾಗಲೇ ಕಣ್ಣಿಗೆ ಕಪ್ಪು ಕನ್ನಡಕ ಹಾಕುವುದಕ್ಕೆ ಶುರು ಮಾಡಿದೆ...ಕಣ್ಣಿಗೆ ಮೈಲಿಗೆ ಆಗಬಾರದಲ್ಲ ಅದಕ್ಕೆ....ನಾನು ಪ್ಯೂರ್ ವೆಜಿಟೇರಿಯನ್...ನೀರುಳ್ಳಿ, ಬೆಳ್ಳುಳ್ಳಿ ಕೂಡ ಉಪಯೋಗಿಸೋದಿಲ್ಲ ಗೊತ್ತಾ?’’


‘‘ಅದಿರಲಿ... ನೀವು ಪೇಜಾವರರ ಆಸ್ಥಾನದಲ್ಲಿ ಯಾವ ನೃತ್ಯ ಮಾಡಬೇಕೆಂದಿದ್ದೀರಿ...’’ ಆಸ್ಕರ್ ಕೇಳಿದರು.


‘‘ಅಹಿಂದ ತಾಳ, ಲಯದಲ್ಲಿ ಸಂಯೋಜನೆ ಗೊಂಡಿರುವ ಹೊಸ ನೃತ್ಯ ಇದು...ನಡೆದಾಡುವ ದೇವರಿಗೆ ವಿಶೇಷವಾಗಿ ಸಂಯೋಜಿಸಿದ ನೃತ್ಯ ಇದು....’’ ಎನ್ನುತ್ತಾ ಇಬ್ರಾಹೀಮರು ನಿಂತಲ್ಲೇ ಸೊಂಟವನ್ನು ಕುಲುಕಿದರು.


‘‘ಅದಿರಲಿ... ಅವರು ಬಾಬರೀ ಮಸೀದಿ ಧ್ವಂಸ ಮಾಡಿದ್ದಾರೆ....ಎಂದೆಲ್ಲ ಆರೋಪ ಇದೆಯಲ್ಲ...ನಿಮ್ಮವರಿಗೆ ಏನು ಹೇಳುತ್ತೀರಿ...’’ ಆಸ್ಕರ್ ರಾಜಕೀಯ ಪ್ರಶ್ನೆಯನ್ನು ಇಟ್ಟರು.


‘‘ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳು ಮಸೀದಿ ಧ್ವಂಸ ಮಾಡಿರೋದಲ್ಲ....ಮಸೀದಿ ಧ್ವಂಸವಾದಾಗ ಅವರು ಕಣ್ಣೀರಿಟ್ಟಿರುವುದರಿಂದಲೇ ನದಿಗಳಲ್ಲಿ ಪ್ರವಾಹ ಉಕ್ಕಿ ಹಲವು ರಾಜ್ಯಗಳು ಮುಳುಗಿ ಹೋಗಿರುವುದು.ಬಾಬರಿ ಮಸೀದಿ ನೆನೆದು ಅವರು ಆಗಾಗ ಕಣ್ಣೀರು ಇಡುತ್ತಾರೆ. ಮೊನ್ನೆ ಚೆನ್ನೈ ಪ್ರವಾಹ, ಶ್ರೀನಗರದಲ್ಲಿ ಪ್ರವಾಹ ಬಂದಿರುವುದೆಲ್ಲ ಅವರು ಕಣ್ಣೀರಿಟ್ಟ ಫಲ...ಇನ್ನು ಕಣ್ಣೀರು ಹಾಕದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ....ನಾವೆಲ್ಲ ಸೇರಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಕೊಡಬೇಕು.....ಅದರ ಉದ್ಘಾಟನಾ ಸಮಾರಂಭದಲ್ಲಿ ಒಂದು ಭರ್ಜರಿ ಭರತನಾಟ್ಯ ಮಾಡಬೇಕು ಎನ್ನುವುದು ನನ್ನ ಜೀವನದ ಕನಸು ಕಣ್ರೀ...’’ ಬಳುಕುತ್ತಾ ಹೇಳಿದರು.


ಅದನ್ನು ಕೇಳಿ ಅತ್ತಕಡೆಯಿಂದ ಆಸ್ಕರರು ರೋಮಾಂಚಿತರಾದರು ‘‘ನಾವಿಬ್ಬರೂ ಸೇರಿ ಡೋಲಾರೇ...ಡೋಲಾರೆ...ನೃತ್ಯವನ್ನು ಮಾಡೋಣ....ಐಶ್ವರ್ಯ ರೈ, ಮಾಧುರೀ ಧೀಕ್ಷಿತ್ ಮಾಡಿದರಲ್ಲ ಆ ನೃತ್ಯ....’’


ಇಬ್ರಾಹೀಮರೂ ಖುಷಿಯಾದರು ‘‘ನಾನು ಈಬಾರಿ ಪೇಜಾವರಶ್ರೀಗಳಿಗೆ ದೊಡ್ಡ ಹೊರೆಕಾಣಿಕೆ ನೀಡಲಿದ್ದೇನೆ. ನಾನೇ ನನ್ನ ದೊಡ್ಡಿಯಲ್ಲಿ ಸಾಕಿದ ಸಾವಿರಾರು ಅಲ್ಪಸಂಖ್ಯಾತ ಕುರಿಗಳಿದ್ದಾವೆ. ಅವುಗಳನ್ನೇ ಹೊರೆಕಾಣಿಕೆಯಾಗಿ ಕೊಡಬೇಕೆಂದಿದ್ದೇನೆ....’’


‘‘ಮಂಗಳೂರಿನಲ್ಲಿ ನಡೆದಿರುವ ಚರ್ಚ್‌ದಾಳಿಗಳಲ್ಲಿ ಪುಡಿಯಾಗಿರುವ ಶಿಲುಬೆ, ಮುರಿದ ಏಸುವಿನ ಕೈಕಾಲುಗಳನ್ನೆಲ್ಲ ಪರ್ಯಾಯಕ್ಕೆ ಹೊರೆಕಾಣಿಕೆ ಅರ್ಪಿಸಿ ಧನ್ಯನಾಗಲಿದ್ದೇನೆ...ಪದ್ಮಪ್ರಿಯ ಪ್ರಕರಣದಲ್ಲಿ ಭಟ್ಟರನ್ನು ರಕ್ಷಿಸಿದ್ದಕ್ಕಾಗಿ ನನಗೆ, ಆಪತ್ಪಾಂಧವ ಎನ್ನುವ ಬಿರುದನ್ನು ನೀಡಲಿದ್ದಾರೆ....’’ ಆಸ್ಕರ್ ಕೂಡ ಭಕ್ತಿ ಭಾವದಿಂದ ಹೇಳಿದರು.


ಕೊನೆಗೂ ಇಬ್ರಾಹೀಮರು ಆಸ್ಕರ್ ಜೊತೆಗೆ ಮಾತು ಮುಗಿಸಿ, ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದರು ‘‘ಸಿದ್ರಾಮಯ್ಯನವರೇ...ಪರ್ಯಾಯದಲ್ಲಿ ನರ್ತಿಸುವುದಕ್ಕೆ ನನಗೆ ಆಮಂತ್ರಣ ಬಂದಿದೆ...ಹೋಗಿ ಬರಲೇ...’’


‘‘ನೋಡ್ರೀ ಇಬ್ರಾಹೀಮರೇ...ಬೆಂಗಳೂರಿನಲ್ಲಿ ಬೇಕಾದಷ್ಟು ಲೇಡೀಸ್ ಬಾರ್‌ಗಳಿವೆ.ಅಲ್ಲಿ ನೀವು ಬೇಕಾದರೆ ನರ್ತಿಸುವುದಕ್ಕೆ ನನ್ನ ಅಡ್ಡಿಯೇನೂ ಇಲ್ಲ. ಅಬಕಾರಿ ಇಲಾಖೆಗೆ ಒಂದಿಷ್ಟು ಆದಾಯವಾದರೂ ಹೆಚ್ಚುತ್ತದೆ. ಹೋಗಿ ಹೋಗಿ ಪರ್ಯಾಯದಲ್ಲಿ ನರ್ತಿಸುವುದಕ್ಕೆ ಹೋಗುತ್ತಿದ್ದೀರಲ್ಲ....ನಾಚ್ಕೆ ಎನ್ನುವುದು ಇಲ್ವೇನ್ರಿ...?’’


ಇಬ್ರಾಹೀಮರು ಗೊಂದಲದಿಂದ ಕೇಳಿದರು ‘‘ನಾಚ್ಕೇ ಎಂದರೆ ಏನು ಸಾರ್?’’


ಸಿದ್ದರಾಮಯ್ಯ ಅತ್ತಕಡೆಯಿಂದ ಪೋನ್ ಕುಕ್ಕಿದರು. ಇಬ್ರಾಹೀಂ ನಿಜಕ್ಕೂ ಕಂಗಾಲಾಗಿ ಆಸ್ಕರ್‌ಗೆ ಫೋನ್ ಮಾಡಿದರು ‘‘ಆಸ್ಕರಣ್ಣ ನಿಮ್ಮತ್ರ ಅದು ಇದೆಯಾ?’’


‘‘ಯಾವುದು?’’


‘‘ಅದೇ ಅದೇನೋ ನಾಚ್ಕೆ ಇದೆಯಾ ಎಂದು ಸಿದ್ದರಾಮಯ್ಯ ಕೇಳಿದರು. ನಿಮ್ಮ ದಿಲ್ಲಿಯ ಬಜಾರ್‌ನಲ್ಲಿ ಅದೇನಾದರೂ ಇದ್ರೆ, ಒಂದಿಷ್ಟು ಕೊಂಡ್ಕೊಂಡು ಬನ್ನಿ..ಎಷ್ಟು ಬೆಲೆಕೊಟ್ಟಾದರೂ ಪರವಾಗಿಲ್ಲ....ಪಾಪ ಮುಖ್ಯಮಂತ್ರಿಯವರು ಪ್ರೀತಿಯಿಂದ ಕೇಳುತ್ತಾ ಇದ್ದಾರೆ....’’ ಇಬ್ರಾಹಿಂ ಮನವಿ ಮಾಡಿದರು.


‘‘ನನ್ನತ್ರ ಇತ್ತು ಕಣ್ರೀ...ಅದರೆ ಅದನ್ನು ಕೊಟ್ಟೇ ನಾನು ರಾಜ್ಯಸಭಾ ಸೀಟು ಪಡೆದುಕೊಂಡಿರುವುದು.ಈಗ ಎಲ್ಲಿಂದ ತರಲಿ?’’ ಆಸ್ಕರ್ ಕೇಳಿದರು.


‘‘ಅರೇ ಈ ನಾಚ್ಕೆ ಎಂದರೆ ಏನಾಗಿರಬಹುದು...ಅದೊಂದು ತಿಂಡಿಯ ಹೆಸರಾಗಿರಬಹುದೇ? ಅಥವಾ ಯಾವುದಾದರೂ ಫಾರಿನ್ ವಿಸ್ಕಿಯ ಹೆಸರಾಗಿರಬಹುದೇ?’’ಎಂದು ಇಬ್ರಾಹೀಂ ಅವರು ಇಡೀ ರಾತ್ರಿ ತಲೆಕೆಡಿಸಿಕೊಳ್ಳತೊಡಗಿದರು.

Full View

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News