ಪಾರಾದೀಪ್ ರಿಫೈನರಿ ಅಗ್ನಿ ಅವಘಡ - ಉನ್ನತ ಮಟ್ಟದ ತನಿಖೆಗೆ ಆದೇಶ
Update: 2016-01-31 14:17 GMT
ಪಾರಾದೀಪ್(ಒಡಿಶಾ),ಜ.31: ಶನಿವಾರ ಸಂಜೆ ಇಲ್ಲಿಯ ಐಒಸಿಎಲ್ನ ರಿಫೈನರಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಕುರಿತು ಇಂದು ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ಕೇಂದ್ರವು,ಈ ಘಟನೆಯು 35,000 ಕೋ.ರೂ.ವೆಚ್ಚದ ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಫೆ.7ರಂದು ಇಲ್ಲಿಗೆ ನೀಡಲಿರುವ ಭೇಟಿಯ ಮೇಲೆ ಯಾವುದೇ ಪರಿಣಾಮವನ್ನು ಬೀರದು ಎಂದು ಹೇಳಿದೆ.
ಘಟನೆಯ ಕುರಿತು ವಿಚಾರಣೆ ನಡೆಸಿ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ತೈಲ ಕೈಗಾರಿಕೆ ಸುರಕ್ಷಾ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ ಎಂದು ರವಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ತೈಲ ಸಚಿವ ಧಮೇಂದ್ರ ಪ್ರಧಾನ ಅವರು ತಿಳಿಸಿದರು.
ಬೆಂಕಿಯಿಂದ ಯಾರೂ ಗಾಯಗೊಂಡಿಲ್ಲ ಮತ್ತು ಹಾನಿಯೂ ಅಲ್ಪ ಪ್ರಮಾಣದ್ದಾಗಿದೆ. ಇಂತಹ ಅವಘಡಗಳನ್ನು ನಿಭಾಯಿಸಲು ರಿಫೈನರಿಯು ಸರ್ವ ಸಜ್ಜಿತವಾಗಿದೆ ಎಂದರು.