ಭಾರತದಲ್ಲಿ ಸರಣಿ ಸ್ಫೋಟಕ್ಕೆ ಸಂಚು: ಸರ್ದಾನಾ ಇ-ಮೇಲ್ನಿಂದ ಬಹಿರಂಗ
ಪಣಜಿ: ಭಾರತ ಸೇನೆಯ ಮಾಜಿ ಮೇಜರ್ ಜನರಲ್ ಅವರ ಪುತ್ರ ಸಮೀರ್ ಸರ್ದಾನಾ ದೇಶದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದರೇ ಎಂಬ ಬಗ್ಗೆ ಭಯೋತ್ಪಾದಕ ನಿಗ್ರಹ ಪಡೆ ತನಿಖೆ ನಡೆಸುತ್ತಿದೆ. ಅವರ ಲ್ಯಾಪ್ಟಾಪ್ನಿಂದ ಪಡೆದ ಒಂದು ಇ-ಮೇಲ್ ಪತ್ರದಲ್ಲಿ, ಭಾರತದಲ್ಲಿ ಸರಣಿ ಸ್ಫೋಟ ನಡೆಸುವ ಬಗ್ಗೆ ವಿವರಗಳು ಇರುವ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಗೋವಾ ಪೊಲೀಸ್ ಮಹಾನಿರ್ದೇಶಕ ಟಿ.ಎನ್.ಮೋಹನ್ ಹೇಳಿದ್ದಾರೆ.
ಈಗಾಗಲೇ ಪೊಲೀಸ್ ವಶದಲ್ಲಿರುವ ಸರ್ದಾನಾ (44) ಇದನ್ನು ನಿರಾಕರಿಸಿದ್ದು, ತಾನು ಯಾವುದೇ ಇಂಥ ಪತ್ರ ಬರೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ಆ ಇ-ಮೇಲ್ ಸಂದೇಶ ಸಿಕ್ಕಿದೆ. ಆದರೆ ಅದು ಯಾರಿಗೆ ಹೋದ ಪತ್ರ ಎನ್ನುವ ಮಾಹಿತಿ ಸಿಗುತ್ತಿಲ್ಲ ಎಂದು ಮೋಹನ್ ವಿವರಿಸಿದರು.
ಹಿಂದಿನ ಬಾಂಬ್ದಾಳಿಗಳ ಬಗ್ಗೆ ಸರ್ದಾನಾ ಅವರಲ್ಲಿ ಮಾಹಿತಿಗಳಿವೆ. ಅಂತೆಯೇ ಭವಿಷ್ಯದಲ್ಲಿ ನಡೆಯುವ ಸ್ಫೋಟಗಳ ಬಗ್ಗೆಯೂ ಇದರಲ್ಲಿ ವಿವರಗಳಿವೆ. ಸರ್ದಾನಾ ಕಳೆದ ಒಂದು ವರ್ಷದಲ್ಲಿ ಮುಂಬೈ, ಪುಣೆ ಹಾಗೂ ಗೋವಾದಲ್ಲಿ ಸಾಕಷ್ಟು ತಿರುಗಾಡಿದ್ದಾನೆ. ಹಲವು ಆಯಕಟ್ಟಿನ ಸ್ಥಳಗಳ ನಕ್ಷೆಯನ್ನೂ ಆತನ ಲ್ಯಾಪ್ಟಾಪ್ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ, ವಿಚಕ್ಷಣಾ ಪಡೆ ಹಾಗೂ ಗೋವಾ ಪೊಲೀಸರು ಆರು ದಿನಗಳಿಂದ ಈತನ ವಿಚಾರಣೆ ನಡೆಸುತ್ತಿದ್ದಾರೆ.