ಸ್ಮತಿ ಇರಾನಿ ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ಸೂಕ್ತ ಅಭ್ಯರ್ಥಿ: ಸುಬ್ರಮಣಿಯನ್ ಸ್ವಾಮಿ
ಲಕ್ನೊ, ಫೆ.29: ಕೇಂದ್ರ ಸಚಿವೆ ಸ್ಮತಿ ಇರಾನಿ ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಬಿಜೆಪಿಯ ಹಿರಿಯನಾಯಕ ಸುಬ್ರಮಣಿಯನ್ ಸ್ವಾಮೀ ಪತ್ರಕರ್ತರಿಗೆ ಸೂಚನೆ ನೀಡಿದ್ದಾರೆ.
ಸದ್ಯ ಕೇಂದ್ರದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆಯಾಗಿರುವ ಇರಾನಿಯನ್ನು ಅವರು ಚತುರ ನಾಯಕಿ ಎಂದು ಹೊಗಳಿದ್ದಾರೆ. ಪತ್ರಕರ್ತರೊಂದಿಗೆ ಮಾತಾಡಿದ ಸ್ವಾಮೀ ಸ್ಮತಿ ಕುಶಲ ನಾಯಕಿಯಾಗಿರುವುದು ಕಾಂಗ್ರೆಸ್ಹಾಗೂ ಇತರ ವಿರೋಧ ಪಕ್ಷಗಳಲ್ಲಿ ಅಸೂಯೆಯನ್ನುಂಟು ಮಾಡಿದೆ. ಇರಾನಿ ಮತ್ತು ಬಿಎಸ್ಪಿ ನಾಯಕಿ ಮಾಯವತಿಯವರ ನಡುವೆ ರಾಜ್ಯಸಭೆಯಲ್ಲಿ ನಡೆದಿರುವ ವಾಗ್ವಾದವನ್ನು ಉಲ್ಲೇಖಿಸಿ ಲೋಕಸಭಾಧ್ಯಕ್ಷರಿಗೂ ರಾಜ್ಯಸಭಾ ಸಭಾಪತಿಯವರಿಗೂ ಆಕ್ಷೇಪವಿಲ್ಲವೆಂದ ಮೇಲೆ ವಿರೋಧ ಪಕ್ಷಗಳೇಕೆ ಜಗಳಕ್ಕಿಳಿಯಬೇಕು ಎಂದು ಸ್ವಾಮಿ ಪ್ರಶ್ನಿಸಿದರು.
ಮಹಿಳೆಯೊಬ್ಬರು ಉತ್ತರಿಸಿರುವುದು ವಿಪಕ್ಷಗಳ ಹೊಟ್ಟೆ ಉರಿಸಿದೆ ಎಂದಸ್ವಾಮಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನಾಗಿ ಇರಾನಿಯವರನ್ನು ಬಿಜೆಪಿ ಬಿಂಬಿಸಲಿದೆಯೇ ಎಂದು ಪ್ರಶ್ನಿಸಿದಾಗ ಅಂತಹ ಸಾಧ್ಯತೆಯನ್ನು ಅವರು ನಿರಾಕರಿಸಲಿಲ್ಲ. ಈ ವಿಷಯದಲ್ಲಿ ಕೇಂದ್ರೀಯ ನಾಯಕತ್ವ ನಿರ್ಧರಿಸಲಿದೆ.
ಆದರೆ ಇರಾನಿ ಅತ್ಯುತ್ತಮ ಆಡಳಿತಗಾರ್ತಿಯಾಗಿ ಹಾಗೂ ಚತುರ ನಾಯಕಿಯಾಗಿಯೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ದೃಷ್ಠಿಯಲ್ಲಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೆಂದು ಸ್ವಾಮಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.