ಲೋಕಸಭೆಯಲ್ಲಿ ಹಕ್ಕುಚ್ಯುತಿ ಸೂಚನೆಗಳ ಮುಖಾಮುಖಿ ಸಿಂದಿಯಾರನ್ನು ಗುರಿಯಾಗಿಸಿಕೊಂಡ ಬಿಜೆಪಿ

Update: 2016-03-01 13:08 GMT

ಹೊಸದಿಲ್ಲಿ,ಮಾ.1: ಹಕ್ಕುಚ್ಯುತಿ ಸೂಚನೆಯೊಂದಿಗೆ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರನ್ನು ಹಣಿಯಲು ಸಜ್ಜಾಗಿರುವ ಕಾಂಗ್ರೆಸ್‌ಗೆ ಮಂಗಳವಾರ ಲೋಸಸಭೆಯಲ್ಲಿ ತಿರುಗೇಟು ನೀಡಿದ ಬಿಜೆಪಿಯು,ಸಚಿವ ಬಂಡಾರು ದತಾತ್ರೇಯ ಅವರ ವಿರುದ್ಧ ‘‘ಮಾನಹಾನಿಕರ’’ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರತಿಪಕ್ಷದ ಮುಖ್ಯ ಸಚೇತಕ ಜ್ಯೋತಿರಾದಿತ್ಯ ಸಿಂದಿಯಾ ಅವರ ವಿರುದ್ಧವೂ ಇಂತಹುದೇ ಕ್ರಮಕ್ಕಾಗಿ ಆಗ್ರಹಿಸಿತು.

  ದತ್ತಾತ್ರೇಯ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ರೋಹಿತ ವೇಮುಲರನ್ನು ‘‘ದೇಶವಿರೋಧಿ,ಜಾತಿವಾದಿ ಮತ್ತು ಉಗ್ರ’’ಎಂದು ಕರೆದಿದ್ದರು ಎಂದು ಆರೋಪಿಸುವ ಮೂಲಕ ಸಿಂದಿಯಾ ಫೆ.24ರಂದು ಸದನದ ದಾರಿ ತಪ್ಪಿಸಿದ್ದರು ಎಂದು ಆಪಾದಿಸಿದ ಬಿಜೆಪಿಯ ಮುಖ್ಯ ಸಚೇತಕ ಅರ್ಜುನ ರಾಂ ಮೇಘವಾಲ್ ಅವರು,ತಾನು ಮತ್ತು ದತ್ತಾತ್ರೇಯ ಸೇರಿದಂತೆ ಇತರ ಹಲವು ಸದಸ್ಯರು ಸಿಂದಿಯಾ ವಿರುದ್ಧ ಹಕ್ಕುಚ್ಯುತಿಯ ಸೂಚನೆಯನ್ನು ನೀಡಿದ್ದೇವೆ ಎಂದರು.
ಮೇಘವಾಲ್ ಆರೋಪದಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯ ಬಳಿಗೆ ಧಾವಿಸಿ ತಾವು ಸಲ್ಲಿಸಿರುವ ಹಕ್ಕುಚ್ಯುತಿ ಸೂಚನೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಆಗ್ರಹಿಸಿದರು.

ವೇಮುಲ ಕುರಿತು ತಾನೆಂದೂ ಮಾಡಿರದ ಟೀಕೆಗಳನ್ನು ತನ್ನ ಬಾಯಿಯಲ್ಲಿ ಸೇರಿಸುವ ಮೂಲಕ ಸಿಂದಿಯಾ ತನ್ನನ್ನು ಅವಮಾನಿಸಿದ್ದಾರೆ ಮತ್ತು ತನ್ನ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ ದತ್ತಾತ್ರೇಯ ಅವರು,ತನ್ನ ತಾಯಿ ಈರುಳ್ಳಿಯನ್ನು ಮಾರುತ್ತಿದ್ದರು. ತಾನು ಸದಾ ಒಬಿಸಿಗಳು ಮತ್ತು ದಲಿತರಿಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ತನ್ನ ಬಡತನದ ಹಿನ್ನೆಲೆಯನ್ನು ನೆನಪಿಸಿಕೊಂಡರು.

ಕಾಂಗ್ರೆಸ್ ಆರೋಪಿಸುತ್ತಿರುವಂತೆ ತಾನು ಸಚಿವೆ ಸ್ಮತಿ ಇರಾನಿಯವರಿಗೆ ಬರೆದಿದ್ದ ಪತ್ರದಲ್ಲಿ ವೇಮುಲರ ಹೆಸರನ್ನು ಉಲ್ಲೇಖಿಸಿರಲಿಲ್ಲ,ಅವರ ವಿರುದ್ಧ ಇಂತಹ ಆರೋಪಗಳನ್ನೆಂದೂ ಮಾಡಿರಲಿಲ್ಲ ಎಂದು ಅವರು ಹೇಳಿದರು.

  ಕಾಂಗ್ರೆಸ್ ಸದಸ್ಯರ ಮುಂದುವರಿದ ಪ್ರತಿಭಟನೆಯ ನಡುವೆಯೇ ಕೆ.ಸಿ.ವೇಣುಗೋಪಾಲ ಅವರು ಸ್ಪೀಕರ್‌ಗೆ ನಿಯಮಾವಳಿಗಳ ಪುಸ್ತಕವನ್ನು ತೋರಿಸಿದಾಗ ಕಟುವಾಗಿ ಪ್ರತಿಕ್ರಿಯಿಸಿದ ಅವರು ‘‘ಅದನ್ನು ನನಗೆ ತೋರಿಸಬೇಡಿ, ನನಗೆ ಗೊತ್ತಿದೆ’’ಎಂದು ಹೇಳಿದರು.

ಎಲ್ಲ ಹಕ್ಕುಚ್ಯುತಿ ಸೂಚನೆಗಳು ತನ್ನ ಪರಿಶೀಲನೆಯಲ್ಲಿವೆ ಎಂದು ಹೇಳುವ ಮೂಲಕ ಸದಸ್ಯರನ್ನು ಸಮಾಧಾನಿಸಲು ಅವರು ಪದೇಪದೇ ವಿಫಲ ಪ್ರಯತ್ನ ನಡೆಸಿದರು.
ಕಾಂಗ್ರೆಸ್ ಸದಸ್ಯರೊಂದಿಗೆ ಏರ್‌ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಡಿಎಂಕೆ ಸದಸ್ಯರೂ ಕೋಲಾಹಲವನ್ನು ಎಬ್ಬಿಸಿದ್ದರಿಂದ ಸ್ಪೀಕರ್ ಸದನವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News