ಯೋಗದಿಂದ ಕ್ಯಾನ್ಸರ್ ಗುಣಪಡಿಸಬಹುದು ! : ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಸಂಶೋಧನೆ
ಪಣಜಿ, ಮಾ.26: ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಯೋಗವು ಗುಣಪಡಿಸಬಲ್ಲದೆಂಬುದನ್ನು ಸಂಶೋಧನೆಯೊಂದು ಸಾಬೀತುಪಡಿಸಿದೆಯೆಂದು ತಿಳಿಸಿದ ಕೇಂದ್ರ ಸಚಿವ ಶ್ರೀಪಾದ ನಾಯಕ್, ಪರ್ಯಾಯ ವೈದ್ಯ ಪದ್ಧತಿಯಾಗಿ ಆಯುಷ್ ಬಳಕೆಯನ್ನು ಬೆಂಬಲಿಸಿದ್ದಾರೆ.
ಯೋಗದಿಂದ ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಗುಣಪಡಿಸಬಹುದೆಂಬುದನ್ನು ಬೆಂಗಳೂರು ಮೂಲದ ಸಂಸ್ಥೆಯೊಂದು ಸಾಬೀತುಪಡಿಸಿದೆಯೆಂದು ಗೋವಾದಲ್ಲಿಂದು ರಾಷ್ಟ್ರೀಯ ಆರೋಗ್ಯ ಮೇಳವನ್ನು ಉದ್ಘಾಟಿಸುತ್ತ ಹೇಳಿದರಾದರೂ, ಸಂಸ್ಥೆಯ ಹೆಸರನ್ನು ಉಲ್ಲೇಖಿಸಲಿಲ್ಲ.
ಪರ್ಯಾಯ ಔಷಧಗಳಾಗಿ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯೂನಾನಿ, ಸಿದ್ಧ ಹಾಗೂ ಹೋಮಿಯೊಪತಿಗಳನ್ನು ಬಳಸುವಂತೆ ನಾಯಕ್ ಜನರಿಗೆ ಕರೆ ನೀಡಿದರು.
ಜೂ.21ರಂದು ನಡೆಯುವ ವಿಶ್ವ ಯೋಗ ದಿನಕ್ಕೆ ಮಾರ್ಗ ಸೂಚಿಯಾಗಿರುವ ಸಾಮಾನ್ಯ ಯೋಗ ಶಿಷ್ಟಾಚಾರ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಸಹ ಅದೇ ರೀತಿಯ ಪ್ರತಿಪಾದನೆ ಮಾಡಿದರು.
ಏಡ್ಸ್ ಹಾಗೂ ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಆಯುರ್ವೇದದಿಂದ ಗುಣಪಡಿಸಬಹುದೆನ್ನಲಾಗುತ್ತಿದೆ. ಈ ಮಗ್ಗುಲಲ್ಲಿ ನಾವು ಅಗತ್ಯ ಸಂಶೋಧನೆ ನಡೆಸಬೇಕು. ಭಾರತವು ವಿಶ್ವದ ಆರೋಗ್ಯ ವಲಯದಲ್ಲಿ ಕ್ರಾಂತಿಯಾಗುವಂತೆ ಮಾಡಬೇಕಂದು ಅವರು ಕರೆ ನೀಡಿದರು.