ರಾಷ್ಟ್ರಧ್ವಜಕ್ಕೆ ಬದಲು ಕೇಸರಿ ಧ್ವಜ: ಆರೆಸ್ಸೆಸ್ ವಿವಾದಾತ್ಮಕ ಹೇಳಿಕೆ
ಮುಂಬೈ,ಎ.2: ದೇಶದ ರಾಷ್ಟ್ರಧ್ವಜ ಕೇಸರಿ ಧ್ವಜಕ್ಕಿಂತ ಭಿನ್ನವೇನಲ್ಲ.ಕೇಸರಿ ಧ್ವಜವನ್ನು ರಾಷ್ಟಧ್ವಜ ಎಂದು ಗೌರವಿಸಬಹುದು ಎಂದು ಆರೆಸ್ಸೆಸ್ನ ಪ್ರಧಾನ ಕಾರ್ಯದರ್ಶಿ ಭೈಯ್ಯೆಜಿ ಜೋಷಿ ಹೇಳಿಕೆ ನೀಡಿ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಶುಕ್ರವಾರ ಇಲ್ಲಿಯ ದೀನದಯಾಳ್ ಉಪಾಧ್ಯಾಯ ಸಂಶೋಧನಾ ಸಂಸ್ಥೆಯಲ್ಲಿ ಮಾತನಾಡುತ್ತಿದ್ದ ಅವರು, ತ್ರಿವರ್ಣ ಧ್ವಜವು ಕೇಸರಿ ಧ್ವಜಕ್ಕಿಂತ ಭಿನ್ನವೇನಲ್ಲ ಎಂದು ಹೇಳಿದರು.
ಸಂವಿಧಾನವು ಕಡ್ಡಾಯಗೊಳಿಸಿರುವ ಜನ ಗಣ ಮನಕ್ಕೆ ಹೋಲಿಸಿದರೆ ‘ವಂದೇ ಮಾತರಂ’ ನಿಜವಾದ ರಾಷ್ಟ್ರಗೀತೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಜನ ಗಣ ಮನ ಇಂದು ನಮ್ಮ ರಾಷ್ಟ್ರಗೀತೆಯಾಗಿದೆ. ಅದನ್ನು ಗೌರವಿಸಬೇಕು. ಅದು ಇತರ ಯಾವುದೇ ಭಾವನೆಗಳನ್ನು ಕೆದಕಲು ಕಾರಣವೇ ಇಲ್ಲ ಎಂದ ಅವರು, ಆದರೆ ಅದು ಸಂವಿಧಾನವು ನಿರ್ಧರಿಸಿರುವ ರಾಷ್ಟ್ರಗೀತೆಯಾಗಿದೆ. ಅದರ ನಿಜವಾದ ಅರ್ಥವನ್ನು ಪರಿಗಣಿಸಿದರೆ ವಂದೇ ಮಾತರಂ ರಾಷ್ಟ್ರಗೀತೆಯಾಗಿದೆ ಎಂದು ಹೇಳಿದರು.
ಜನ ಗಣ ಮನದಲ್ಲಿ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ. ಆದರೆ ವಂದೇ ಮಾತರಂನಲ್ಲಿ ರಾಷ್ಟ್ರೀಯ ಭಾವನೆಗಳು ವ್ಯಕ್ತಗೊಂಡಿವೆ. ಇದು ಇವೆರಡೂ ಗೀತೆಗಳ ನಡುವಿನ ವ್ಯತ್ಯಾಸವಾಗಿದೆ. ಎರಡೂ ಗೀತೆಗಳು ಗೌರವಕ್ಕೆ ಅರ್ಹವಾಗಿವೆ ಎಂದು ಹೇಳಿದರು.
ಆರೆಸ್ಸೆಸ್ ಈ ಹೇಳಿಕೆಯೊಂದಿಗೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಆರೆಸ್ಸೆಸ್ನ್ನು ತರಾಟೆಗೆತ್ತಿಕೊಂಡಿರುವ ಸಾಮಾಜಿಕ ಕಾರ್ಯಕರ್ತರು, ಇದು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ ಮತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅವಮಾನಿಸಿದ್ದಕ್ಕಾಗಿ ಸಂಬಂಧಿತ ವ್ಯಕ್ತಿಯ ವಿರುದ್ಧ ಐಪಿಸಿಯಡಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಶ್ಮೀರಿ ಪ್ರತ್ಯೇಕತಾವಾದಿಗಳು ಮತ್ತು ಆರೆಸ್ಸೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಜೆಡಿಯು ಕುಟುಕಿದೆ. ಕಾಶ್ಮೀರಿ ಪ್ರತ್ಯೇಕತಾವಾದಿಗಳು ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ, ಅದೇ ರೀತಿ ಜೋಷಿಯವರ ಹೇಳಿಕೆಯೂ ರಾಷ್ಟ್ರಧ್ವಜಕ್ಕೆ ಅಷ್ಟೇ ಅವಮಾನವನ್ನು ಮಾಡಿದೆ ಎಂದು ಅದು ಹೇಳಿದೆ.