ಪನಾಮ ಪೇಪರ್ಸ್ ನಲ್ಲಿ ಹೆಸರಿಸಿದವರ ಕುರಿತು ಏಕೆ ಈ ಮೌನ ಸ್ವಾಮೀ ?

Update: 2016-04-06 11:57 GMT

ಇಡೀ ದೇಶ ಕಾದು ಕುಳಿತಿದೆ. ಇಡೀ ದೇಶಕ್ಕೆ ದೇಶವೇ ಪ್ರಶ್ನೆ ಕೇಳುತ್ತಿದೆ. ಎಲ್ಲಿದ್ದಾರೆ ಅರ್ನಬ್ ಗೋಸ್ವಾಮಿ ? The Nation Wants to know, where is Mr Arnab Goswami ? ಪನಾಮ ಪೇಪರ್ಸ್ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಗಣ್ಯರ ವೇಷದಲ್ಲಿರುವ , ದೇಶಭಕ್ತರ ಸೋಗಿನಲ್ಲಿರುವ ಹಲವರ ' ಬಂಡವಾಳ' ಬಯಲಾಗಿದೆ. ಭಾರತದಲ್ಲಿ ಕ್ರಿಕೆಟ್ ಮ್ಯಾಚಿಗೆ ಮುನ್ನ ಗಂಭೀರವಾಗಿ ರಾಷ್ಟ್ರಗೀತೆ ಹಾಡುವವರು ತಮ್ಮ ತೆರಿಗೆ ಕಟ್ಟದ ಕೋಟಿಗಟ್ಟಲೆ ಹಣವನ್ನು ತಮ್ಮ ಪ್ರೀತಿಯ ತಾಯ್ನಾಡಲ್ಲಿ ಇಟ್ಟು ಮೈಲಿಗೆ ಮಾಡದೆ ತೆರಿಗೆ ಸ್ವರ್ಗ ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ಇದುವ ಸತ್ಯ ಬಹಿರಂಗವಾಗಿದೆ. ಆದರೆ ಇಷ್ಟು ದೊಡ್ಡ ಖುಲಾಸ ಆಗಿರುವಾಗ ನಮ್ಮ ಪ್ರಶ್ನೋತ್ತರ ವೀರ ಅರ್ನಬ್ ಎಲ್ಲಿದ್ದಾರೆ ? ಅವರ ಆರ್ಭಟದಿಂದ ಏಕೆ ಈ ತೆರಿಗೆ ಕಳ್ಳರೆಲ್ಲ ನಡುಗಿ ಕಂಗಾಲಾಗುತ್ತಿಲ್ಲ ? ಅವರ ಬೊಬ್ಬೆಗೆ ಏಕೆ ಟಿವಿ ಸ್ಟುಡಿಯೋ ಕಂಪಿಸುತ್ತಿಲ್ಲ ? ಇದು ಇಡೀ ದೇಶ ಕೇಳುತ್ತಿರುವ ಪ್ರಶ್ನೆ ! 

ಎಲ್ಲಿ ಏನು ನಡೆದರೂ ಅಂದಿನ  ಅರ್ನಬ್ ರ  ನ್ಯೂಸ್ ಅವರ್ ನಲ್ಲಿ ಆ ಘಟನೆ ರಾಷ್ಟ್ರೀಯ ಇಶ್ಯೂ ಆಗುತ್ತದೆ. ಆಗ ಅವರ ಪ್ರಶ್ನೆಗಳಿಗೆ , ಅವರೇ ಬಯಸಿದಂತೆ ಉತ್ತರಿಸದಿದ್ದರೆ ಇಡೀ " ದೇಶವೇ ಸಿತ್ತಿಗೇಳು ತ್ತದೆ" . ಆದರೆ ದೇಶಾದ್ಯಂತ ಏಕೆ ಜಾಗತಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿರುವ ಪನಾಮ ಪೇಪರ್ಸ್ ಮಾತ್ರ ಟೈಮ್ಸ್ ನೌ ಹಾಗು ಅರ್ನಬ್ ಗೋಸ್ವಾಮಿಗೆ ಚರ್ಚಿಸಲು ಅರ್ಹ ಇಶ್ಯೂ ಆಗಿ ಕಂಡು ಬಂದಿಲ್ಲ. ಪ್ರಕರಣದಲ್ಲಿ ಕೇಳಿ ಬಂದ ಗಣ್ಯರಿಗೆ ಅರ್ನಬ್ ಪ್ರಶ್ನೆಗಳ ಸುರಿಮಳೆಗರೆದಿಲ್ಲ. ಯಾಕೆ ಹೀಗೆ ದೇಶಕ್ಕೆ ತೆರಿಗೆ ವಂಚನೆ ಮಾಡಿದಿರಿ ಎಂದು ಕೇಳಲಿಲ್ಲ.  ಅದೆಲ್ಲ ಬಿಡಿ  , ಸರಿಯಾಗಿ ಆ ವಿಷಯದ ಸುದ್ದಿಯನ್ನೇ ಟೈಮ್ಸ್ ನೌ ಪ್ರಕಟಿಸಿಲ್ಲ. ಇದೆಂತಹಾ ಪತ್ರಿಕೋದ್ಯಮ ಅರ್ನಬ್ ? ಇದು ಇಡೀ ದೇಶ ಕೇಳುತ್ತಿರುವ ಪ್ರಶ್ನೆ ! 

ಟೈಮ್ಸ್ ಆಫ್ ಇಂಡಿಯಾದ ಪ್ರತಿಸ್ಪರ್ಧಿ ಇಂಡಿಯನ್ ಎಕ್ಸ್ ಪ್ರೆಸ್ ಈ ಸುದ್ದಿಯನ್ನು ಭಾರತದಲ್ಲಿ ಪ್ರಕಟಿಸಿತು ಎಂಬ ಕಾರಣಕ್ಕೆ ಹೀಗೆ ಸುದ್ದಿಯನ್ನೇ ಬಿಟ್ಟು ಬಿಟ್ಟಿರಾ ? ಹೀಗಾಗುವ ಸಾಧ್ಯತೆ ಕಡಿಮೆ. ಏಕೆಂದರೆ ಈ ಹಿಂದೆಯೂ ಬೇರೆ ಪತ್ರಿಕೆಗಳು , ಚಾನೆಲ್ ಗಳು ಮೊದಲು ಸುದ್ದಿ ಪ್ರಕಟಿಸಿದ ವಿಷಯವನ್ನು ಟೈಮ್ಸ್ ನೌ ಚರ್ಚೆ ಮಾಡಿಯೇ ಇಲ್ಲ ಎಂದು ಹೇಳುವಂತಿಲ್ಲ. ಆದರೆ ಈ ವಿಷಯ ಮಾತ್ರ ಏಕೆ ಹೀಗೆ ?  ಯಾವ ಕಾರಣಕ್ಕಾಗಿ ಇಷ್ಟು ದೊಡ್ಡ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು ? ಏನಾದರೂ ಬಹಳ ಮುಖ್ಯ ಕಾರಣ ಇಲ್ಲದೆ ಹೀಗಾಗಲು ಸಾಧ್ಯವಿಲ್ಲ.  ಏನದು ಅಷ್ಟು ದೊಡ್ಡ ಕಾರಣ ? ಇದು ಇಡೀ ದೇಶ ಕೇಳುತ್ತಿರುವ ಪ್ರಶ್ನೆ ! 

Similar News