×
Ad

ಕೊಲ್ಲಂ ಪಟಾಕಿ ದುರಂತ:ನಿಯಮಗಳ ಸಾರಾಸಗಟು ಉಲ್ಲಂಘನೆ?

Update: 2016-04-11 19:48 IST

ಕೊಲ್ಲಂ,ಎ.11: ಇಲ್ಲಿಯ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ರವಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತದ ಬಗ್ಗೆ ಕೈಗೊಳ್ಳಲಾದ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ನಿಯಮಾವಳಿಗಳನ್ನು ಸಾರಾಸಗಟಾಗಿ ಉಲ್ಲಂಘಿಸಲಾಗಿತ್ತು ಮತ್ತು ಮೂಲಭೂತ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಲಾಗಿತ್ತು,ಜೊತೆಗೆ ನಿಷೇಧ ಆದೇಶವನ್ನೂ ಉಲ್ಲಂಘಿಸಲಾಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.

ಅವಘಡ ಸಂಭವಿಸಿದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಸುದರ್ಶನ ಕಮಲ್ ಅವರು ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು. ಸುಡುಮದ್ದು ಪ್ರದರ್ಶನದಲ್ಲಿ ಬಳಕೆಯಾದ ಸ್ಫೋಟಕಗಳ ಬಗ್ಗೆ ನಾವು ತನಿಖೆ ಕೈಗೊಂಡಿದ್ದೇವೆ ಎಂದ ಅವರು, ಪಟಾಕಿಗಳ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕಗಳನ್ನು ಉಪಯೋಗಿಸಲಾಗಿತ್ತು ಎಂದರು.

ಸುಡುಮದ್ದು ಪ್ರದರ್ಶನಕ್ಕೆ ಪರವಾನಿಗೆಯನ್ನು ನೀಡಲು ಅಥವಾ ನಿರಾಕರಿಸಲು ತನ್ನ ಮೇಲೆ ಯಾವುದೇ ಒತ್ತಡವಿರಲಿಲ್ಲ ಎಂದು ಸ್ಪಷ್ಟಪಡಿಸಿದ ಕೊಲ್ಲಂ ಜಿಲ್ಲಾಧಿಕಾರಿ ಎ.ಶೈನಾಮೋಳ್ ಅವರು, ಪೊಲೀಸರು ಮತ್ತು ತಹಶೀಲ್ದಾರರಿಂದ ಕೆಲವು ವರದಿಗಳನ್ನು ಕೋರಿದ್ದೆವು. ಸುಡುಮದ್ದು ಪ್ರದರ್ಶನದ ಸ್ಪರ್ಧೆಯನ್ನು ನಡೆಸಲು ದೇವಸ್ಥಾನದ ಆಡಳಿತವು ಉದ್ದೇಶಿಸಿದ್ದು, ಜಾಗದ ಕೊರತೆ ಮತ್ತು ಇತರ ಕಾರಣಗಳಿಂದಾಗಿ ಅನುಮತಿ ನೀಡದಂತೆ ಅವರು ಶಿಫಾರಸು ಮಾಡಿದ್ದರು. ಆದರೆ ಯಾರೋ ಕೆಲವರು ಇದನ್ನು ಲೆಕ್ಕಿಸದೆ ಮುಂದುವರಿದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ತಾನು ಸೂಚಿಸಿದ್ದೇನೆ ಎಂದು ತಿಳಿಸಿದರು.

ನಿಷೇಧ ಆದೇಶವನ್ನು ಉಲ್ಲಂಘಿಸಲಾಗಿದೆ ಮತ್ತು ಅದನ್ನು ಉಲ್ಲಂಘಿಸಿದವರು ಯಾರು ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಾಗಿದೆ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಶಾನವಾಝ್ ತಿಳಿಸಿದರು. ತನ್ಮಧ್ಯೆ, ಸುಡುಮದ್ದು ಪ್ರದರ್ಶನಕ್ಕೆ ಅನುಮತಿ ಕೋರಿ ಪುಟ್ಟಿಂಗಲ್ ದೇವಸ್ವಂ ಆಡಳಿತ ಸಮಿತಿಯ ಕಾರ್ಯದರ್ಶಿ ಜೆ.ಕೃಷ್ಣನ್‌ಕುಟ್ಟಿ ಪಿಳ್ಳೈ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎಂದು ತಿಳಿಸಿರುವ ಎಡಿಎಂ ಹೊರಡಿಸಿದ್ದ ಆದೇಶದ ಪ್ರತಿಯು ಬಹಿರಂಗಗೊಂಡಿದೆ. ಇದು ಸುಡುಮದ್ದು ಪ್ರದರ್ಶನವಲ್ಲ,ಸ್ಪರ್ಧೆಯಾಗಿರುವುದರಿಂದ ಅನುಮತಿಯನ್ನು ನಿರಾಕರಿಸಲಾಗಿತ್ತು ಎಂದು ಆದೇಶದಲ್ಲಿ ಹೇಳಲಾಗಿದ್ದು, ನಿಷೇಧವನ್ನು ಉಲ್ಲಂಘಿಸಿದವರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯ ಕಲಂ 208ರಡಿ ಕ್ರಮವನ್ನು ಜರುಗಿಸಲಾಗುವುದು ಎಂದು ಅದು ತಿಳಿಸಿದೆ. ದೇವಸ್ಥಾನದ ಅಧಿಕಾರಿಗಳು ಆದೇಶವನ್ನು ಉಲ್ಲಂಘಿಸುತ್ತಾರೆಯೇ ಎನ್ನುವುದರ ಮೇಲೆ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿತ್ತು. ದೇವಸ್ಥಾನಕ್ಕೆ ಹೊಂದಿಕೊಂಡೇ ವಾಸವಿರುವ ಪಂಕಜಾಕ್ಷಿಯಮ್ಮ(80) ಅವರ ದೂರಿನ ಮೇರೆಗೆ ಎ.8ರಂದು ಈ ಆದೇಶವನ್ನು ಹೊರಡಿಸಲಾಗಿತ್ತು.

ಪ್ರತಿವರ್ಷ ದೇವಸ್ಥಾನದಲ್ಲಿ ನಡೆಯುವ ಸುಡುಮದ್ದು ಪ್ರದರ್ಶನ ಸ್ಪರ್ಧೆಯಿಂದಾಗಿ ತನ್ನ ಮನೆಗೆ ಹಾನಿಯಾಗುತ್ತಿದೆ ಎಂದು ದೂರಿಕೊಂಡಿದ್ದ ಅವರು,ಇದನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದರು. ತನ್ಮಧ್ಯೆ ಇಲ್ಲಿಗೆ ಸಮೀಪದ ಅಟ್ಟಿಂಗಲ್‌ನಲ್ಲಿ ಕನಿಷ್ಠ 100 ಕೆ.ಜಿ.ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು,ಸುಡುಮದ್ದು ಪ್ರದರ್ಶನದ ಗುತ್ತಿಗೆದಾರನ ಪುತ್ರ ಉಮೇಶ ಎಂಬಾತನನ್ನು ಬಂಧಿಸಿದ್ದಾರೆ.

ಕೊಲ್ಲಂ ಮತ್ತು ತಿರುವನಂತಪುರದ ಹಲವಾರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News