ಕೇಂದ್ರದ ಕುಡಿಯುವ ನೀರಿನ ನಿಧಿ ಬಳಕೆ: ಕರ್ನಾಟಕ ಸೇರಿದಂತೆ 13 ಬರಪೀಡಿತ ರಾಜ್ಯಗಳು ವಿಫಲ
ಹೊಸದಿಲ್ಲಿ,ಎ.14: ಬರಪೀಡಿತ ರಾಜ್ಯಗಳ ಸಂಕಷ್ಟವನ್ನು ತಗ್ಗಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಟೀಕೆಗೆ ಕೇಂದ್ರ ಸರಕಾರವು ಗುರಿಯಾಗಿದೆ. ಆದರೆ ಇದೇ ವೇಳೆ ಈ ಬೃಹತ್ ಬಿಕ್ಕಟ್ಟಿಗೆ ರಾಜ್ಯ ಸರಕಾರಗಳೂ ಹೊಣೆಯಾಗಿವೆ ಎನ್ನುವುದನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ಬಯಲುಗೊಳಿಸಿವೆ.
ನೀರಿನ ತೀವ್ರ ಅಭಾವಕ್ಕೆ ಸಿಲುಕಿರುವ 13 ರಾಜ್ಯಗಳು ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರವು ತಮಗೆ ಹಂಚಿಕೆ ಮಾಡಿದ ಹಣಕಾಸನ್ನು ಬಳಸಿಕೊಂಡೇ ಇಲ್ಲ.
ಕೇಂದ್ರವು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಬಜೆಟ್ ಮೀಸಲಾತಿ ಮೂಲಕ ರಾಜ್ಯಗಳಿಗೆ ಹಣಕಾಸು ಒದಗಿಸುತ್ತದೆ.
ಕೇಂದ್ರವು ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಕಳೆದ ರವಿವಾರಕ್ಕೆ ಇದ್ದಂತೆ ಮಹಾರಾಷ್ಟ್ರಕ್ಕೆ ಕುಡಿಯುವ ನೀರಿಗಾಗಿ ಒದಗಿಸಿದ್ದ 322 ಕೋ.ರೂ.ಬಳಕೆಯಾಗದೇ ಹಾಗೆಯೇ ಉಳಿದುಕೊಂಡಿದೆ. ಈ ರಾಜ್ಯದ ಮರಾಠವಾಡಾ ಪ್ರದೇಶವು ದಶಕಗಳಲ್ಲಿಯೇ ಕಂಡರಿಯದ ಅತ್ಯಂತ ಭೀಕರ ಬರದ ದವಡೆಗೆ ಸಿಲುಕಿದೆ.
500 ಗ್ರಾಮಗಳು ಟ್ಯಾಂಕರ್ಗಳ ಮೂಲಕ ಪೂರೈಸಲಾಗುತ್ತಿರುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕರ್ನಾಟಕದಲ್ಲಿ 200 ಕೋ.ರೂ.ಬಳಕೆಯಾಗಿಲ್ಲ. ಉತ್ತರ ಪ್ರದೇಶದಲ್ಲಿ 332 ಕೋ.ರೂ.ಕೊಳೆಯುತ್ತಿದ್ದರೆ ತೆಲಂಗಾಣದಲ್ಲಿ ಸುಮಾರು 20 ಕೋ.ರೂ.ಬಳಕೆಯಾಗದೆ ಉಳಿದುಕೊಂಡಿದೆ.
ರಾಜ್ಯಗಳು ತಕ್ಷಣದ ಪರಿಹಾರವನ್ನೊದಗಿಸಲು ತುರ್ತುಕ್ರಮಗಳಿಗೆ ಬಳಸಿಕೊಳ್ಳಲು ಕೇಂದ್ರವು ಅವುಗಳಿಗೆ ‘ಫ್ಲೆಕ್ಸಿ ಫಂಡ್’ನ್ನು ಕೂಡ ಒದಗಿಸುತ್ತದೆ, ತನ್ಮೂಲಕ ಈ ರಾಜ್ಯಗಳು ಹಂಚಿಕೆಯಾದ ಒಟ್ಟು ಮೊತ್ತದ ಶೇ.10ರಷ್ಟನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಆದರೆ ಬರದ ದವಡೆಯಲ್ಲಿ ಸಿಲುಕಿರುವ ರಾಜ್ಯಗಳ ಪೈಕಿ ಒಂದಾದರೂ ಈವರೆಗೆ ಈ ಸೌಲಭ್ಯವನ್ನೂ ಬಳಸಿಕೊಂಡಿಲ್ಲ.
ಕೊನೆಗೂ ಎ.11ರಂದು ರಾಜಸ್ಥಾನ ಸರಕಾರವು ಯೋಜನೆಗಳ ವಿವರಗಳು ಮತ್ತು ಕೇಂದ್ರದ ಹಣವನ್ನು ತಾನು ಹೇಗೆ ಬಳಸಿಕೊಳ್ಳುತ್ತಿದ್ದೇನೆ ಎಂಬ ಬಗ್ಗೆ ವರದಿಯನ್ನು ಸಲ್ಲಿಸಿದೆ. ಇತರ ರಾಜ್ಯಗಳು ಈವರೆಗೂ ಇಂತಹ ವರದಿಗಳನ್ನು ಸಲ್ಲಿಸಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಚಿವಾಲಯದ ಬಳಿ ಲಭ್ಯ ಮಾಹಿತಿಗಳಂತೆ ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್ ಮತ್ತು ತೆಲಂಗಾಣ ಸೇರಿದಂತೆ 13 ರಾಜ್ಯಗಳು ಕೇಂದ್ರವು ತಮಗೆ ಒದಗಿಸಿದ್ದ ಹಣವನ್ನು ಬಳಕೆ ಮಾಡಿಕೊಂಡಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬೀರೇಂದ್ರ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು. ನೀರಿನ ತೀವ್ರ ಕೊರತೆಯನ್ನೆದುರಿಸುತ್ತಿರುವ ಜಿಲ್ಲೆಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಸುಮಾರು 1,500 ಕೋ.ರೂ. ಕೊಳೆಯುತ್ತಿವೆ ಎಂದರು.