ಮಸೂದ್ ಅಝರ್ ವಿಷಯದಲ್ಲಿ ಭಾರತ ಪಾಕ್ ನೇರ ಚರ್ಚೆ ನಡೆಸಲಿ: ಚೀನಾ
Update: 2016-04-27 09:44 GMT
ಹೊಸದಿಲ್ಲಿ,ಎಪ್ರಿಲ್ 27: ಜೈಷೆ ಮುಹಮ್ಮದ್ ಮುಖಂಡ ಮಸೂದ್ ಅಝರ್ ಸಂಬಂಧಿಸಿದ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ನೇರ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಚೀನಾ ಹೇಳಿರುವುದಾಗಿ ವರದಿಯಾಗಿದೆ.
ಮಸೂದ್ ಅಝರ್ಗೆ ಸಂಬಂಧಿಸಿದ ಎಲ್ಲ ಚರ್ಚೆಗಳನ್ನು ನಾವು ಸ್ವಾಗತಿಸುತ್ತೇವೆ. ಸಮಸ್ಯೆ ಪರಿಹರಿಸಲು ಭಾರತ ಪಾಕಿಸ್ತಾನ ಪರಸ್ಪರ ನೇರ ಆಶಯ ವಿನಿಮಯ ಮಾಡಿಕೊಳ್ಳಬೇಕು ಹಾಗೂ ಗಂಭೀರವಾದ ಸಮಾಲೋಚನೆ ನಡೆಸುವುದು ಅಗತ್ಯವಿದೆ. ಸಮಸ್ಯೆ ಶೀಘ್ರ ಪರಿಹರಿಸಲು ಸಾಧ್ಯವಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಚೀನಾದ ವಿದೇಶ ಸಚಿವಾಲಯದ ಪ್ರತಿನಿಧಿ ಹೇಳಿದ್ದಾರೆ. ಪಠಾಣ್ ಕೋಟ್ ಭಯೋತ್ಪಾದನಾ ದಾಳಿಯ ಸೂತ್ರಧಾರ ಮಸೂದ್ ಅಝರ್ ಎಂದೂ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂದೂ ಭಾರತ ನಡೆಸಿದ ಪ್ರಯತ್ನಕ್ಕೆ ತಡೆಯೊಡ್ಡಿದ ನಂತರ ಚೀನಾ ಈ ಸ್ಪಷ್ಟೀಕರಣ ನೀಡಿದೆ.