ದಲಿತರು, ಹಿಂದುಳಿದ ವರ್ಗಗಳು ಹಾಗೂ ಮುಸ್ಲಿಮರಿಲ್ಲದ ಎಡರಂಗಕ್ಕೆ ಸೋಲು ಖಚಿತ

Update: 2016-05-30 11:06 GMT

ಈ ಚುನಾವಣೆಯ ಸುತ್ತು ಮುಖ್ಯವಾಹಿನಿ ಸಂಸದೀಯ ಎಡಪಂಥವು ಸಂಪೂರ್ಣ ಕುಸಿತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಸಮಾನತೆ ಮತ್ತು ಆಧುನಿಕ ಸಮಾಜಕ್ಕಾಗಿ ಬಡವರ ಧ್ವನಿಯಾಗಬೇಕಿದ್ದ ಎಡಪಂಥವು ಮೊದಲಿನಿಂದಲೇ ರಾಷ್ಟ್ರೀಯ ರಾಜಕೀಯದಲ್ಲಿ ಅಸಮ ಪ್ರಭಾವ ಹೊಂದಿತ್ತು ಮತ್ತು ಸಂಸತ್ತಿನಲ್ಲಿ ನಿರ್ಣಾಯಕ ಅಸ್ತಿತ್ವವನ್ನು ಗಳಿಸಿತ್ತು. ಈಗ ಅದು ಕೇವಲ ತ್ರಿಪುರ ಮತ್ತು ಕೇರಳಕ್ಕೆ ಸೀಮಿತವಾಗಿದೆ. ಎಡಪಕ್ಷಗಳ ಬೆಂಬಲಿಗರು ಕೇರಳದಲ್ಲಿ ಹೊಸ ಸರ್ಕಾರ ಅಧಿಕಾರ ಸ್ವೀಕರಿಸುತ್ತಿರುವ ಬಗ್ಗೆ ಸಂಭ್ರಮ ಆಚರಿಸುತ್ತಿದ್ದಾರೆ. ಅವು ಪಶ್ಚಿಮ ಬಂಗಾಳದಲ್ಲಿ ಕೇವಲ 24 ಶಾಸಕರಿಗೆ ಸೀಮಿತವಾಗಿರುವ ಅವಹೇಳನಕಾರಿ ಸೋಲನ್ನು ಮರೆಯುತ್ತಿದ್ದಾರೆ.

ಎಡಪಕ್ಷಗಳ ಕುಸಿತವನ್ನು ಬಲಪಂಥೀಯರ ಏಳಿಗೆಯ ಅಂದಾಜಿನಿಂದ ಮಾಡಬೇಕಾಗುತ್ತದೆ. ಮೊದಲ ಲೋಕಸಭೆಯಲ್ಲಿ ಅವಿಭಜಿತ ಕಮ್ಯುನಿಸ್ಟ್ ಪಕ್ಷವು 19 ಸಂಸದರನ್ನು ಹೊಂದುವ ಮೂಲಕ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾಗಿತ್ತು. ಬಿಜೆಪಿಯ ಹಿಂದಿನ ಆವೃತ್ತಿಯಾಗಿದ್ದ ಜನಸಂಘವು ಕೇವಲ ಮೂರು ಸ್ಥಾನಗಳನ್ನು ಪಡೆದಿತ್ತು. ಎಕೆ ಗೋಪಾಲನ್ ಅತೀ ಪ್ರಭಾವೀ ವಿಪಕ್ಷ ನಾಯಕರಾಗಿದ್ದರು ಮತ್ತು ನಿಜವಾದ ವಿಪಕ್ಷವಾದ ಎಡಪಕ್ಷದ ಧ್ವನಿಯನ್ನು ಆಲಿಸಲು ನೆಹರು ಕೂಡ ನಿಂತಿದ್ದರು. 1964ರಲ್ಲಿ ಕಮ್ಯುನಿಸ್ಟ್ ಪಕ್ಷವು ಸಿಪಿಎಂ ಮತ್ತು ಸಿಪಿಐ ಎಂದು ವಿಭಜನೆಯಾದಾಗ ವಿಪಕ್ಷದ ಸ್ಥಾನದ ಏಕಮೇವ ಹಕ್ಕನ್ನು ಸ್ವತಂತ್ರ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಹಾಗಿದ್ದರೂ 1967ರಲ್ಲಿ ಸಿಪಿಎಂ ಮತ್ತು ಸಿಪಿಐನ ಒಟ್ಟು ಬಲವು 11 ಸ್ಥಾನಗಳಾಗಿದ್ದು, ಜನಸಂಘಕ್ಕಿಂತ ಹೆಚ್ಚೇ ಇತ್ತು.

ಸಿಪಿಎಂ ಸಂಸತ್ತಿನಲ್ಲಿ 30-40 ಸ್ಥಾನಗಳನ್ನು ಗಳಿಸುತ್ತಾ ಹೋಗಿದ್ದರೂ, ಕಾಂಗ್ರೆಸ್ ಜೊತೆಗಿನ ಸಿಪಿಐನ ಸಂಬಂಧವು ಅದರ ಬಲವನ್ನು ಕುಗ್ಗಿಸಿತು. 2004ರಲ್ಲಿ ಸಿಪಿಎಂ ಕಾಂಗ್ರೆಸ್ ಜೊತೆಗೆ ಮತ್ತು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇತರ ವಿಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಇಳಿದಾಗ ಅತ್ಯಧಿಕ 44 ಸ್ಥಾನಗಳನ್ನು ಗೆದ್ದಿತ್ತು. ಅಲ್ಲಿಂದ ನಂತರ ಪಕ್ಷದ ಕುಸಿತ ಆರಂಭವಾಯಿತು. ಈಗ ಸಿಪಿಎಂ ಲೋಕಸಭೆಯಲ್ಲಿ ಕೇವಲ 9 ಸಂಸದರನ್ನು ಹೊಂದಿದ್ದರೆ, ಸಿಪಿಐ ಒಬ್ಬ ಸದಸ್ಯನನ್ನು ಹೊಂದಿದೆ.

ಪಶ್ಚಿಮ ಬಂಗಾಳದಲ್ಲಿ ಹೀನಾಯ ಸೋಲು ಅದರ ಕುಸಿತವನ್ನು ವಿವರಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂನ ಹೀನಾಯ ಪ್ರದರ್ಶನಕ್ಕೆ ಕೇಂದ್ರೀಯ ನಾಯಕತ್ವವನ್ನು ವಿರೋಧಿಸಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ ರಾಜ್ಯ ಘಟಕವನ್ನು ಮಾತ್ರ ದೂರಿದರೆ ಸಾಲದು. ಪಕ್ಷದ ನಾಯಕತ್ವದ ಶೈಲಿಯೂ ಕಾರಣವಾಗಿದೆ. ಕೇರಳದಂತೆ ಅಲ್ಲದೆ, ಬಂಗಾಳದ ಸಿಪಿಎಂ ರಾಜ್ಯ ಶಾಖೆಯಲ್ಲಿ ಉನ್ನತ ವರ್ಗದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಬ್ರಾಹ್ಮಣರಾದ ಸೂರ್ಜ್ಯ ಕಾಂತ ಮಿಶ್ರಾ ವಿಪಕ್ಷ ನಾಯಕರು ಮತ್ತು ರಾಜ್ಯ ಕಾರ್ಯದರ್ಶಿ. ಮಿಶ್ರಾ ಮಾತ್ರವೇಕೆ, ಪ್ರಮೋದ್ ದಾಸಗುಪ್ತ, ಜ್ಯೋತಿ ಬಸು, ಸೈಲನ್ ದಾಸಗುಪ್ತಾ, ಅನಿಲ್ ಬಿಸ್ವಾಸ್, ಬಿಮನ್ ಬೋಸ್, ಸರೋಜ್ ಮುಖರ್ಜೀ ಮತ್ತು ಬುದ್ಧದೇಬ್ ಭಟ್ಟಾಚಾರ್ಯ ಮೊದಲಾದ ಎಲ್ಲಾ ನಾಯಕರು ಉನ್ನತ ವರ್ಗದವರೇ. ಮುಜಫರ್ ಅಹ್ಮದ್ ಒಬ್ಬರೇ ಇದಕ್ಕೆ ಹೊರತಾದವರು.

ಬಂಗಾಳದಲ್ಲಿ ಶೇ.23 ದಲಿತರಿದ್ದಾರೆ. ದೇಶದ ದಲಿತರ ಸಂಖ್ಯೆಯಲ್ಲಿ ಎರಡನೇ ಅತೀ ದೊಡ್ಡ ಸಂಖ್ಯೆಯಲ್ಲಿ ಬಂಗಾಳದಲ್ಲಿದ್ದಾರೆ. ಭೂರಹಿತ ಕಾರ್ಮಿಕರು ಮತ್ತು ರೈತರ ಯಾವುದೇ ನೈಜ ಚಳುವಳಿಯು ಕನಿಷ್ಟ ಡಜನ್ ರಾಷ್ಟ್ರೀಯ ನಾಯಕರನ್ನು ಸೃಷ್ಟಿಸಬಹುದಾಗಿತ್ತು. ಬದಲಾಗಿ ಸಿಪಿಎಂ ಇತ್ತೀಚೆಗೆಯಷ್ಟೇ ಒಬ್ಬ ಬಂಗಾಳಿ ದಲಿತ ಸದಸ್ಯ ರಾಂಚಂದ್ರ ಡೋಮ್‌ರನ್ನು ಕೇಂದ್ರೀಯ ಸಮಿತಿಗೆ ಸೇರಿಸಿಕೊಂಡಿದೆ. ಮುಸ್ಲಿಮರ ಸಂಖ್ಯೆ ಶೇ.26ರಷ್ಟಿದ್ದು, ಅವರಿಗೆ ಸ್ಪೀಕರ್ ಹುದ್ದೆ ಕೊಟ್ಟದ್ದೇ ದೊಡ್ಡ ಅಧಿಕಾರ.

ಎಡಪಕ್ಷದ ಅಧ್ಯಕ್ಷ ಅಥವಾ ಮುಖ್ಯಮಂತ್ರಿಗಳು, ಪಕ್ಷದ ಕಾರ್ಯದರ್ಶಿಗಳಲ್ಲಿ ಒಬ್ಬ ದಲಿತ ಅಥವಾ ಮುಸ್ಲಿಮರೂ ಇಲ್ಲ. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಇವರು ಶೇ.50ರಷ್ಟಿದ್ದಾರೆ. ಎಡಪಕ್ಷಗಳು ಆಸ್ಮಿತೆಯ ರಾಜಕೀಯದಲ್ಲಿ ನಂಬಿಕೆ ಹೊಂದಿಲ್ಲ ಎನ್ನುವುದು ನಿಜ.

ಹಾಗೆ ನೋಡಿದರೆ ಕೇವಲ ಮೇಲ್ವರ್ಗದವರು ಮಾತ್ರ ದಲಿತರು, ಮುಸ್ಲಿಮರು ಮತ್ತು ಒಬಿಸಿಗಳನ್ನು ಪ್ರತಿನಿಧಿಸುತ್ತಾರೆಯೇ? ಹಾಗೇ ಆಗಿದ್ದರೆ, ಎಷ್ಟು ಸಮಯ? ಇದಕ್ಕೆ ತದ್ವಿರುದ್ಧವಾಗಿ ಕೇರಳದಲ್ಲಿ ಕಮ್ಯುನಿಸ್ಟ್ ಚಳವಳಿಯ ಮೂಲಕವೇ ಒಬಿಸಿ ಈಳವ ಮಹಿಳೆ ಕೆ.ಆರ್.ಗೌರಿ ನೇತೃತ್ವದ 1987ನ ಚುನಾವಣಾ ಅಭಿಯಾನ. (ನಂತರ ಅವರನ್ನು ಬದಿಗೆ ತಳ್ಳಿ ಪಕ್ಷದಿಂದ ಹೊರಗಟ್ಟಿದ್ದು ಬೇರೆ ವಿಷಯ). ನಂತರ ನಾಯಕತ್ವದ ಹೊಣೆ ವಿಎಸ್ ಅಚ್ಯುತಾನಂದನ್ ಮೇಲೆ ಬಂತು. ಅವರೂ ಈಳವ ಜಾತಿಯವರು. ಈ ಬಾರಿಯೂ ಎಡಪಕ್ಷಗಳ ಗೆಲುವಿಗೆ ಅವರೇ ಕಾರಣ.

ಹೊಸ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಬಿಸಿ ತೀಯಾ ಸಮುದಾಯದ ವ್ಯಕ್ತಿಯ ಮಗ. ಈಳವರು ಕೇರಳದ ಏಕೈಕ ಅತೀ ದೊಡ್ಡ ಸಮುದಾಯ. (ದಲಿತರು ಇಲ್ಲಿ ಶೇ.9ರಷ್ಟಿದ್ದಾರೆ). ಕೇರಳದಲ್ಲಿ ಎಡಪಕ್ಷಗಳು ಹಿಂದುಳಿದ ಸಮುದಾಯಗಳಲ್ಲಿ ಬಲಿಷ್ಠ ನಾಯಕರನ್ನು ಸೃಷ್ಟಿಸಲು ಸಾಧ್ಯವಾದಲ್ಲಿ ಬಂಗಾಳದಲ್ಲಿ ಎಲ್ಲಿ ತಪ್ಪಾಗಿದೆ? ಆದರೆ ಸಿಪಿಎಂ ಸಮರ್ಥನೆಗೆ ಟಿಎಂಸಿ ಕೂಡ ಟಾಪ್ ಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದವರನ್ನೇ ಹೊಂದಿದೆ.

ಕೃಪೆ: blogs.economictimes.indiatimes.com

Writer - ರಾಜೇಶ್ ರಾಮಚಂದ್ರನ್

contributor

Editor - ರಾಜೇಶ್ ರಾಮಚಂದ್ರನ್

contributor

Similar News