ಮಥುರಾ ಹಿಂಸಾಚಾರ:ಪ್ರಮುಖ ಆರೋಪಿ ಸೆರೆ
Update: 2016-06-15 16:52 GMT
ಬಸ್ತಿ(ಉ.ಪ್ರ),ಜೂ.15: ಮಥುರಾ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಚಂದನ ಬೋಸ್ ಮತ್ತು ಆತನ ಪತ್ನಿಯನ್ನು ಇಂದು ಇಲ್ಲಿಯ ಪರಶುರಾಮಪುರ ಪ್ರದೇಶದ ಕೈತವಾಲಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಕೃಪಾಶಂಕರ ಸಿಂಗ್ ಅವರು ತಿಳಿಸಿದರು. ಬೋಸ್ ಹಿಂಸಾಚಾರದ ಹಿಂದಿದ್ದ ಆಝಾದ್ ಭಾರತ್ ವಿಧಿಕ್ ವೈಚಾರಿಕ ಕ್ರಾಂತಿ ಸತ್ಯಾಗ್ರಹಿ ಸಂಘಟನೆಯಲ್ಲಿ ರಾಮವೃಕ್ಷ ಯಾದವ್ ನಂತರದ ಅತ್ಯುಚ್ಚ ನಾಯಕನಾಗಿದ್ದ. ಯಾದವ್ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟಿದ್ದಾನೆ.
ರಾಮವೃಕ್ಷ ಯಾದವ್,ಚಂದನ ಬೋಸ್,ಗಿರೀಶ ಯಾದವ್, ಮತ್ತು ರಾಕೇಶ ಗುಪ್ತಾ ಪ್ರಕರಣದಲ್ಲಿ ಮುಖ್ಯ ಆರೋಪಿಗಳಾಗಿದ್ದಾರೆಂದು ಉತ್ತರ ಪ್ರದೇಶದ ಹೆಚ್ಚುವರಿ ಡಿಜಿಪಿ ದಲ್ಜೀತ್ ಸಿಂಗ್ ಅವರು ಈ ಮೊದಲು ತಿಳಿಸಿದ್ದರು.
ಜೂ.2ರಂದು ಮಥುರಾದ ಜವಾಹರಬಾಗ್ನಲ್ಲಿ ಪೊಲೀಸರು ಮತ್ತು ಅತಿಕ್ರಮಣದಾರರ ನಡುವೆ ಘರ್ಷಣೆಯಲ್ಲಿ ಎಸ್ಪಿ ಮುಕುಲ್ ದ್ವಿವೇದಿ ಮತ್ತು ಫರ್ಹಾ ಠಾಣಾಧಿಕಾರಿ ಸಂತೋಷ ಯಾದವ್ ಸೇರಿದಂತೆ 29 ಜನರು ಕೊಲ್ಲಲ್ಪಟ್ಟಿದ್ದರು.