ದಯಾಮರಣದ ಅರ್ಜಿ ಹಾಕಿದ ಮೇಲೆ ದಯೆ ತೋರಿದ ಸರಕಾರ
ಹೈದರಾಬಾದ್: ಅಪರೂಪದ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ತಮ್ಮ 8 ತಿಂಗಳ ಹಸುಳೆಗೆ ದಯಾಮರಣ ನೀಡಬೇಕೆಂದು ಚಿತ್ತೂರು ಜಿಲ್ಲೆಯ ಆರ್ ಎಸ್ ಕೋತಪಳ್ಳಿಯ ದಂಪತಿಗೆ ಆಂಧ್ರ ಪ್ರದೇಶ ಸರಕಾರ ಸಹಾಯ ಹಸ್ತ ಚಾಚಿದೆ ಹಾಗೂ ಮಗುವಿನ ಚಿಕಿತ್ಸೆಗೆ ನೆರವು ನೀಡುವ ಆಶ್ವಾಸನೆ ನೀಡಿದೆ.
ಮಗುವಿನ ಹೆತ್ತವರಾದ ರಮಣಪ್ಪ ಹಾಗೂ ಸರಸ್ವತಿ ಕೃಷಿ ಕಾರ್ಮಿಕರಾಗಿದ್ದು, ಇತ್ತೀಚೆಗೆ ತಂಬಲ್ಲಪಲ್ಲೆ ಸಿವಿಲ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ ತಮ್ಮ ಮಗು ಗ್ನಾನ ಸಾಯಿಗೆ ದಯಾಮರಣ ಪಾಲಿಸಬೇಕೆಂದು ಮನವಿ ಮಾಡಿದ್ದರು. ಮಗುವಿಗೆ ಬೆಂಗಳೂರಿನಲ್ಲಿ ಐದು ತಿಂಗಳುಗಳ ಕಾಲ ಚಿಕಿತ್ಸೆ ನೀಡಿ ಶಸ್ತ್ರಕ್ರಿಯೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂಬುದು ದಂಪತಿಗಳ ಅಳಲಾಗಿದೆ. ಮಗುವಿನ ನೋವನ್ನು ನೋಡಲಾರದೆ ಹಾಗೂ ಆಕೆಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ದಂಪತಿಗಳು ಆಕೆಗೆ ದಯಾಮರಣ ನೀಡುವಂತೆ ಕೋರಿದ್ದರು.
ರಾಜ್ಯ ಆರೋಗ್ಯ ಸಚಿವ ಕಾಮನಿನೇನಿ ಶ್ರೀನಿವಾಸ್ ಈ ವಿಚಾರವನ್ನು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಗಮನಕ್ಕೆ ತಂದಿದ್ದು ಅವರು ಮಗುವಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಗುವನ್ನು ಕೂಡಲೇ ಲಿವರ್ ಸ್ಪೆಷಲಿಸ್ಟ್ ವೈದ್ಯರಾದ ಮೊಹಮ್ಮದ್ ರೇಲಾ ಅವರ ಬಳಿ ಕೊಂಡೊಯ್ದಾಗ ಮಗುವಿಗೆ ಕೂಡಲೇ ಲಿವರ್ ಕಸಿ ನಡೆಸಬೇಕಾಗಿ ಹೇಳಿದ್ದು ಮಗುವಿನ ತಂದೆ ತನ್ನ ಲಿವರ್ ಭಾಗವನ್ನು ಮಗುವಿಗೆ ಕೊಡಲಿದ್ದು ಮುಂದಿನ ಸೋಮವಾರ ಶಸ್ತ್ರಕ್ರಿಯೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ನಡೆಯಲಿದೆ.