ಪಂಜಾಬ್ ನಿಂದ ದೂರ ಸರಿಯಲು ಹೇಳಿದ್ದೇ ರಾಜೀನಾಮೆಗೆ ಕಾರಣ: ಸಿಧು
ಹೊಸದಿಲ್ಲಿ, ಜು.25: ಪಂಜಾಬ್ನ ಯಾವುದೇ ವ್ಯವಹಾರಗಳಲ್ಲಿ ತಲೆ ಹಾಕದಂತೆ ಬಿಜೆಪಿ ನಾಯಕರು ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ತಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದಾಗಿ ಬಿಜೆಪಿ ಧುರೀಣ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ರಾಜೀನಾಮೆ ಬಳಿಕ ಮೊದಲಬಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಧು " ಪಂಜಾಬ್ ನನ್ನ ಮನೆಯಾಗಿದೆ. ನನಗೆ ಮತ ನೀಡಿದ್ದ ಜನತೆಯನ್ನು ನಾನು ಮರೆಯಲಿ ? ಎಂದು ಪ್ರಶ್ನಿಸಿದರು.
ಮೂರು ತಿಂಗಳ ಹಿಂದೆಯಷ್ಟೇ ರಾಜ್ಯಸಭೆಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಸಿಧು ಜುಲೈ 18ರಂದು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರು ತಾನು ಪಂಜಾಬ್ ನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿದ್ದರೆ ಪಂಜಾಬ್ನಿಂದಲೇ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ತೊರೆದು ಸಿಧು ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂಬ ವದಂತಿಯ ಬಗ್ಗೆ ಸಿಧು ಏನನ್ನು ಹೇಳಿಲ್ಲ. ಸಿಧು ಪತ್ನಿ ನವಜೋತ್ ಕೌರ್ ಪಂಜಾಬ್ ವಿಧಾನಸಭೆಯ ಶಾಸಕಿ. ಅವರು ಸಿಧು ಬಿಜೆಪಿ ತೊರೆಯುವ ಬಗ್ಗೆ ಇತ್ತೀಚೆಗೆ ಸುಳಿವು ನೀಡಿದ್ದರು.