×
Ad

ಇರೋಮ್ ಶರ್ಮಿಳಾ: ಮುತ್ಸದ್ದಿತನದ ನಿರ್ಧಾರ

Update: 2016-07-26 23:54 IST

ಕಾಶ್ಮೀರ ಮತ್ತು ಮಣಿಪುರದಾದ್ಯಂತ ಅನಿರೀಕ್ಷಿತ ಬೆಳವಣಿಗೆಗಳು ಸಂಭವಿಸುತ್ತಿರುವ ಸಮಯದಲ್ಲೇ ಇರೋಮ್ ಶರ್ಮಿಳಾ ಅವರು ತಮ್ಮ ಆಜೀವ ಉಪವಾಸದಿಂದ ಹಿಂದೆ ಸರಿಯುವ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇರೋಮ್ ಶರ್ಮಿಳಾ ಅವರು ಕಳೆದ 16 ವರ್ಷಗಳಿಂದ ಕಾಶ್ಮೀರ, ಮಣಿಪುರದಂತಹ ರಾಜ್ಯಗಳ ಜನರ ಧ್ವನಿಯಾಗಿ ದಿಲ್ಲಿಯ ನಾಯಕರಿಗೆ ಇರಿಸುಮುರುಸು ಉಂಟು ಮಾಡಿದ್ದರು. ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ಹಿಂದೆಗೆಯಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. 

ಸಶಸ್ತ್ರ ಪಡೆಗಳು ತಮ್ಮ ವಿಶೇಷಾಧಿಕಾರವನ್ನು ದುರುಪಯೋಗಪಡಿಸಿ, ಸ್ಥಳೀಯರ ಮೇಲೆ ನಡೆಸಿದ ದೌರ್ಜನ್ಯ, ಮಹಿಳೆಯರ ಮೇಲೆ ನಡೆಸಿದ ಬರ್ಬರ ಅತ್ಯಾಚಾರಗಳು ಅಂತಿಮವಾಗಿ ಆ ಭಾಗವೇ ದೇಶಕ್ಕೆ ಅನ್ಯ ಎನ್ನುವಂತಹ ಸನ್ನಿವೇಶ ಸೃಷ್ಟಿ ಮಾಡಿತು. ಒಂದೆಡೆ ಉಗ್ರರು ಮಗದೊಂದೆಡೆ ಸೈನಿಕರು ಇವರ ನಡುವೆ ಜನರು ತತ್ತರಿಸತೊಡಗಿದರು. ಒಂದಿಡೀ ರಾಜ್ಯವನ್ನು ಸೇನೆಯ ಕೋವಿಯ ಮೂಲಕವೇ ತಹಬದಿಯಲ್ಲಿಡುತ್ತೇನೆ ಎನ್ನುವ ಸರಕಾರದ ನಿಲುವು ಅಂತಿಮವಾಗಿ ಇನ್ನಷ್ಟು ಉಗ್ರರನ್ನು ಸೃಷ್ಟಿಸಿತೇ ವಿನಃ, ಆ ನೆಲವನ್ನು ಹೃದಯಪೂರ್ವಕವಾಗಿ ತನ್ನದಾಗಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ ಎನ್ನುವುದು ಅಷ್ಟೇ ಸತ್ಯ. ಆಫ್‌ಸ್ಪ್ಪಾವನ್ನು ಉಗ್ರರ ವಿರುದ್ಧ ಬಳಸಬಹುದೇನೋ ನಿಜ. ಅದನ್ನೇ ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕಲು ಬಳಸಿದರೆ ಏನಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಕಾಶ್ಮೀರ, ಮಣಿಪುರವಿದೆ. ಈ ಆಫ್‌ಸ್ಪ್ಪಾವನ್ನು ಹಿಂದೆಗೆಯಬೇಕು ಎಂದು ಒತ್ತಾಯಿಸಿಯೇ ಇರೋಮ್ ಶರ್ಮಿಳಾ ಆಜೀವ ಉಪವಾಸಕ್ಕೆ ತೊಡಗಿದ್ದರು. ಬರೇ ಪೈಪ್‌ಗಳ ಮೂಲಕ ದ್ರವಾಹಾರವನ್ನಷ್ಟೇ ಆಕೆಗೆ ಬಲವಂತವಾಗಿ ನೀಡುತ್ತಾ ಬರಲಾಗುತ್ತಿತ್ತು.

ಇದೀಗ ಇರೋಮ್ ಉಪವಾಸ ತ್ಯಜಿಸಿ, ಪ್ರಜಾಸತ್ತಾತ್ಮಕವಾದ ಹೋರಾಟದ ಇನ್ನೊಂದು ಮಗ್ಗುಲಿಗೆ ಇಳಿಯಲು ಹೊರಟಿದ್ದಾರೆ. ಇದು ಆಫ್‌ಸ್ಪ್ಪಾದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಕಾದು ನೋಡಬೇಕು. 1958ರಲ್ಲಿ ಆಗಷ್ಟೇ ಹುಟ್ಟಿಕೊಂಡಿದ್ದ ನಾಗಾ ಬಂಡಾಯವನ್ನು ಹತ್ತಿಕ್ಕುವ ಸಲುವಾಗಿ ಹುಟ್ಟಿಕೊಂಡ ಕಾಯ್ದೆಯೇ ಆಫ್‌ಸ್ಪ್ಪಾ. ಪ್ರಸ್ತುತ ಇದು ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ಇಂಫಾಲ ಹೊರತುಪಡಿಸಿದಂತೆ ಮಣಿಪುರದಲ್ಲಿ ಅಸ್ತಿತ್ವದಲ್ಲಿದೆ. ಅರುಣಾಚಲ ಪ್ರದೇಶದ ತಿರಪ್, ಚಂಗ್ಲಂಗ್ ಮತ್ತು ಲಾಂಗ್‌ಡಿಂಗ್ ಜಿಲ್ಲೆಗಳಲ್ಲಿ ಹಾಗೂ ಅಸ್ಸಾಂ ಗಡಿಗೆ ಹೊಂದಿಕೊಂಡಿರುವ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದು ಜಾರಿಯಲ್ಲಿದೆ. ಮೇಘಾಲಯದಲ್ಲೂ ಅಸ್ಸಾಂ ಗಡಿಯ 20 ಕಿಲೋಮೀಟರ್ ವ್ಯಾಪ್ತಿ ಈ ಕಾಯ್ದೆಯಡಿ ಬರುತ್ತದೆ.

ಈ ಕಾಯ್ದೆಯ ಅನ್ವಯ ಸೇನೆ, ರಾಜ್ಯ ಹಾಗೂ ಕೇಂದ್ರೀಯ ಪೊಲೀಸ್ ಪಡೆಗಳ ಸಿಬ್ಬಂದಿಗೆ ಕಂಡಲ್ಲಿ ಗುಂಡಿಕ್ಕುವ ಅಧಿಕಾರ ನೀಡಲಾಗಿದೆ. ಇದರ ಜತೆಗೆ ಮನೆಗಳನ್ನು ತಪಾಸಣೆ ಮಾಡಲು ಹಾಗೂ ಗೃಹ ಸಚಿವಾಲಯ ಪ್ರಕ್ಷುಬ್ಧ ಪ್ರದೇಶ ಎಂದು ಘೋಷಿಸಿದ ಸ್ಥಳಗಳಲ್ಲಿರುವ ದಂಗೆಕೋರರಿಗೆ ಸೇರಿದ ಆಸ್ತಿಗಳನ್ನು ನಾಶಪಡಿಸಲು ಕೂಡಾ ಅಧಿಕಾರ ಇರುತ್ತದೆ. ಭದ್ರತಾ ಪಡೆಗಳು, ಅಪರಾಧ ಎಸಗಿದ ಅಥವಾ ಅಪರಾಧ ಎಸಗಲು ಮುಂದಾದ ಯಾವ ವ್ಯಕ್ತಿಯನ್ನು ಬೇಕಾದರೂ ವಾರೆಂಟ್ ಇಲ್ಲದೇ ಬಂಧಿಸಲು ಅಧಿಕಾರ ಇರುತ್ತದೆ. 

ತಾರ್ಕಿಕ ಸಂಶಯದ ಮೇಲೆ ಕೂಡಾ ಬಂಧನಕ್ಕೆ ಅವಕಾಶ ಇದೆ. ಈ ಕಾಯ್ದೆಯ ಅನ್ವಯ ಕೈಗೊಂಡ ಕ್ರಮಗಳಿಗೆ ಅವರು ಯಾವುದೇ ಕಾನೂನು ಪ್ರಕ್ರಿಯೆಯನ್ನು ಎದುರಿಸಬೇಕಾಗಿಲ್ಲ. ಇತ್ತೀಚೆಗೆ ಕಾಶ್ಮೀರದಲ್ಲಿ ಇದೇ ಕಾಯ್ದೆಯ ಬಲದಿಂದಲೇ ಅಲ್ಲಿನ ಜನರ ಮೇಲೆ ಸೇನೆ ತನ್ನ ಕ್ರೌರ್ಯವನ್ನು ಮೆರೆಯಿತು. ಇದರಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಗೊಂಡಿತೇ ಎಂದರೆ ಅದೂ ಇಲ್ಲ. ಬದಲಿಗೆ ಪರಿಸ್ಥಿತಿ ಕೈ ಬಿಟ್ಟು ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಹೀಗೆ ಆದಲ್ಲಿ, ಇಡೀ ಕಾಶ್ಮೀರದ ಜನತೆಯನ್ನೇ ಸಾಮೂಹಿಕವಾಗಿ ಹತ್ಯಾಕಾಂಡ ನಡೆಸಬೇಕಾದಂತಹ ಸ್ಥಿತಿ ಸೇನೆಗೆ ನಿರ್ಮಾಣವಾಗಬಹುದು. ಈ ನಿಟ್ಟಿನಲ್ಲೇ, ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಅವರು ‘ಆಫ್‌ಸ್ಪ್ಪಾವನ್ನು ಹಿಂದೆಗೆಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಸರಕಾರ ಯಾವುದೇ ಸ್ಪಷ್ಟ ಪ್ರತಿಕ್ರಿಯೆಯನ್ನು ನೀಡಿಲ್ಲ.

ಆಫ್‌ಸ್ಪ್ಪಾವನ್ನು ಹಿಂದೆಗೆಯಬಹುದೇ ಎನ್ನುವ ಬಗ್ಗೆ ಸರಕಾರ ಈ ಹಿಂದೆಯೇ ಸಮಾಲೋಚನೆ ನಡೆಸಿತ್ತು. ಆಫ್‌ಸ್ಪ್ಪಾ ಕಾಯ್ದೆಯ ಪರಾಮರ್ಶೆ ನಡೆಸಿ ಅಗತ್ಯ ಶಿಫಾರಸುಗಳನ್ನು ಮಾಡಲು 2005ರಲ್ಲಿ ನ್ಯಾಯಮೂರ್ತಿ ಜೀವನ್ ರೆಡ್ಡಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆಫ್‌ಸ್ಪ್ಪಾ ಬದಲಾಗಿ ಕಾನೂನುಬಾಹಿರ ಚಟುವಟಿಕೆಗಳ ಸಂರಕ್ಣಾ ಕಾಯ್ದೆಯನ್ನು ಜಾರಿಗೊಳಿಸಿ, ಬಂಡಾಯದ ವಿರುದ್ಧ ಹೋರಾಟ ಬಲಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಆದರೂ ಆ ಶಿಫಾರಸನ್ನು ಜಾರಿ ಮಾಡುವ ಧೈರ್ಯವನ್ನು ಸರಕಾರ ಈವರೆಗೆ ಪ್ರದರ್ಶಿಸಲಿಲ್ಲ. ಕಾಶ್ಮೀರದ ಸುತ್ತಲಿರುವ ರಾಜಕೀಯ ಜಗ್ಗಾಟವೇ ಇದಕ್ಕೆ ಮುಖ್ಯ ಕಾರಣ. ಈ ಹಿಂದೆ ಆಫ್‌ಸ್ಪ್ಪಾ ಹೇರಲಾಗಿದ್ದ ಹಲವು ರಾಜ್ಯಗಳಿಂದ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಮತ್ತು ಆ ಬಳಿಕವೇ ಅಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಣೆ ಗೊಂಡಿರುವುದು. ಇದನ್ನು ಸರಕಾರ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

ಇರೋಮ್ ಶರ್ಮಿಳಾ ನಿರ್ಧಾರ ಆಫ್‌ಸ್ಪ್ಪಾದ ಬಗ್ಗೆ ಸರಕಾರ ತನ್ನ ನಿಲುವನ್ನು ಮರು ಪರಿಶೀಲಿಸಲು ಸಕಾಲವಾಗಿದೆ. ಈಗಾಗಲೇ ಕಾಶ್ಮೀರದಲ್ಲಿ ನಡೆದ ಘಟನೆಯಿಂದಲೂ ಸರಕಾರ ಸಾಕಷ್ಟು ಪಾಠ ಕಲಿತಿದೆ. ಬರೇ ಸೇನೆಯ ಕೋವಿಯಿಂದಷ್ಟೇ ಅಲ್ಲಿಯ ಜನರನ್ನು ತನ್ನವರನ್ನಾಗಿಸಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿದೆ. ಸೇನೆ ನಡೆಸಿದ ಕೃತ್ಯದಿಂದ ಇಡೀ ವಿಶ್ವದ ಗಮನ ಕಾಶ್ಮೀರದ ಕಡೆಗೆ ಹರಿಯುವಂತಾಗಿದೆ. ಅಮಾಯಕರ ಮೇಲೆ ಬಳಸಿದ ಪಾಲೆಟ್ ಗನ್, ಸರಕಾರ ಮತ್ತು ಸೇನೆಯ ಕ್ರೌರ್ಯವನ್ನು ತೋರಿಸುತ್ತದೆ. ಭಾರತಕ್ಕೆ ಕಾಶ್ಮೀರದ ಭೌಗೋಳಿಕ ಗಡಿರೇಖೆಗಳ ಮೇಲಷ್ಟೇ ಒಲವು ಹೊರತು, ಅದರೊಳಗೆ ಬದುಕುತ್ತಿರುವ ಜನಸಂಸ್ಕೃತಿಯ ಮೇಲೆ ಯಾವ ಕಾಳಜಿಯೂ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ.

ಕಾಶ್ಮೀರವೂ ಸೇರಿದಂತೆ ಉಗ್ರವಾದ ಹರಡಿಕೊಂಡಿರುವ ರಾಜ್ಯಗಳ ಬಗೆಗಿನ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಲೇ ಬೇಕಾದಂತಹ ಸಂದರ್ಭ ಸರಕಾರಕ್ಕೆ ಎದುರಾಗಿದೆ. ಅವುಗಳನ್ನು ತನ್ನವರನ್ನಾಗಿಸಲು ಕೋವಿಯ ಭಾಷೆಯ ಬದಲು ಹೃದಯದ ಭಾಷೆಯನ್ನು ಬಳಸಬೇಕಾಗಿದೆ. ಹೇಗೆ ಇರೋಮ್ ಶರ್ಮಿಳಾ ತನ್ನ ನಿಲುವಿನಿಂದ ಹಿಂದೆ ಸರಿದು ಹೊಸ ದಾರಿಯನ್ನು ಆರಿಸಿಕೊಂಡಿದ್ದಾರೆಯೋ, ಅಂತಹದೇ ಮುತ್ಸದ್ದಿತನವನ್ನು ಸರಕಾರವೂ ಈಗ ಪ್ರದರ್ಶಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News