ಗುಜರಾತ್ ವೈದ್ಯಕೀಯ ಕಾಲೇಜುಗಳಲ್ಲಿ ಎನ್ನಾರೈ ಕೋಟಾ ತೆಗೆದು ಹಾಕಿದ್ದ ಅಧ್ಯಾದೇಕ್ಕೆ ಹೈಕೋರ್ಟ್ನಿಂದ ಕತ್ತರಿ
Update: 2016-08-16 19:25 IST
ಅಹ್ಮದಾಬಾದ್,ಆ.16: ಗುಜರಾತಿನ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಎಲ್ಲ ಅನಿವಾಸಿ ಭಾರತೀಯ(ಎನ್ನಾರೈ) ಕೋಟಾವನ್ನು ತೆಗೆದು ಹಾಕಿ ಸರಕಾರವು ಹೊರಡಿಸಿದ್ದ ಅಧ್ಯಾದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯವು ಮಂಗಳವಾರ ಭಾಗಶಃ ರದ್ದುಗೊಳಿಸಿದೆ.
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಬಯಸುವ ‘ನೈಜ’ ಎನ್ನಾರೈಗಳಿಗೆ ಕೋಟಾವನ್ನು ರದ್ದುಗೊಳಿಸುವ ಸರಕಾರದ ನಿರ್ಧಾರವು ಸಂವಿಧಾನ ವಿರೋಧಿ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಆರ್.ಸುಭಾಷ್ ರೆಡ್ಡಿ ಮತ್ತು ನ್ಯಾ.ವಿ.ಎಂ.ಪಂಚೋಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು,‘ಅವಲಂಬಿತ’ಎನ್ನಾರೈಗಳ ಕೋಟಾವನ್ನು ರದ್ದುಗೊಳಿಸುವ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿಯಿತು.
ಎನ್ನಾರೈ ಕೋಟಾವನ್ನು ಸಂಪೂರ್ಣವಾಗಿ ತೆಗೆದು ಹಾಕಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದ ನ್ಯಾಯಾಲಯವು, ಹಾಗೆ ಮಾಡುವುದು ಪಿ.ಎ.ಇನಾಮದಾರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗುತ್ತದೆ ಮತ್ತು ಅಸಾಂವಿಧಾನಿಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.