ಝಾಕಿರ್ ನಾಯ್ಕ್ ವಿರುದ್ಧ ’ಉಗ್ರ’ ಪ್ರಕರಣ, ಐಆರ್‌ಎಫ್ ನಿಷೇಧಕ್ಕೆ ಕೇಂದ್ರ ಸರಕಾರ ಸಜ್ಜು?

Update: 2016-08-27 02:58 GMT

ಹೊಸದಿಲ್ಲಿ, ಆ.27: ಇಸ್ಲಾಂ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರ ವಿರುದ್ಧ ’ಉಗ್ರ’ ಪ್ರಕರಣ ದಾಖಲಿಸಲು ಮತ್ತು ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‌ಎಫ್) ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರಕಾರ ಸಜ್ಜಾಗಿದೆ. 50 ಮಂದಿಯನ್ನು ಭಯೋತ್ಪಾದನೆ ಸಂಬಂಧದ ಪ್ರಕರಣಗಳಿಗೆ ಪ್ರೇರೇಪಿಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಕಳೆದ ಜುಲೈನಲ್ಲಿ ಢಾಕಾ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರಿಗೆ ಝಾಕಿರ್ ಪ್ರವಚನಗಳು ಸ್ಫೂರ್ತಿಯಾಗಿದ್ದವು ಎಂಬ ಆರೋಪದ ಹಿನ್ನಲೆಯಲ್ಲಿ ಝಾಕಿರ್ ಭಾಷಣಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸುವ ಹಾಗೂ ಸಂಘಟನೆ ನಿಷೇಧಿಸುವ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಈ ಸಂಬಂಧ ಗೃಹ ಸಚಿವಾಲಯ ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದು, ನಾಯ್ಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಲು ನಿರ್ಧರಿಸಿದೆ. ಮಹಾರಾಷ್ಟ್ರ ಸರಕಾರವೂ ಇಂಥದ್ದೇ ಕ್ರಮಕ್ಕೆ ಮುಂದಾಗಿದೆ. "ಝಾಕಿರ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನದಡಿ ಪ್ರಕರಣ ದಾಖಲಿಸಲು ಪ್ರಾಥಮಿಕ ಆಧಾರವೆಂದರೆ, ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದವರ ಹೇಳಿಕೆಗಳು. ಝಾಕಿರ್ ಹೇಳಿಕೆಯಿಂದ ಸ್ಫೂರ್ತಿ ಪಡೆದು ಈ ಕೃತ್ಯ ಎಸಗಿರುವುದಾಗಿ ಅವರು ಗೇಳಿದ್ದಾರೆ" ಎಂದು ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಯ್ಕ್ ವಿರುದ್ಧ ಐಆರ್‌ಎಫ್‌ನ ಮಾಜಿ ಸಿಬ್ಬಂದಿ ಹಾಗೂ 2006ರ ಔರಂಗಾಬಾದ್ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದ ಆರೋಪಿ ಫಿರೋಜ್ ದೇಶಮುಖ್, ಪುಣೆ ಯರವಾಡ ಜೈಲಿನಲ್ಲಿ 2012ರ ಜೂನ್‌ನಲ್ಲಿ ಮೃತಪಟ್ಟ ಇಂಡಿಯನ್ ಮುಜಾಹಿದ್ದೀನ್ ಸದಸ್ಯ ಖತೀಲ್ ಅಹ್ಮದ್ ಸಿದ್ದಿಕಿ, ಐಎಸ್ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದ ಆರೋಪದಲ್ಲಿ ಬಂಧಿತರಾದ ಅಫ್ಷಾ ಜಬೀನ್ ಮತ್ತಿತರರು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News