ಮಲ್ಯ ಚೆಕ್ ಬೌನ್ಸ್ ಪ್ರಕರಣ: ನಾಳೆಗೆ ಮುಂದೂಡಿಕೆ
Update: 2016-09-20 22:54 IST
ಹೈದರಾಬಾದ್, ಸೆ.20: ಮಾಜಿ ಮದ್ಯದ ದೊರೆ ವಿಜಯ ಮಲ್ಯ ವಿರುದ್ಧ ಜಿಎಂಆರ್ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿ.(ಜಿಎಚ್ಐಎಎಲ್)ವು ದಾಖಲಿಸಿರುವ ಎರಡು ಚೆಕ್ ಅಮಾನ್ಯ ಪ್ರಕರಣಗಳನ್ನು ಮಂಗಳವಾರ ಇಲ್ಲಿಯ ತೃತೀಯ ವಿಶೇಷ ನ್ಯಾಯಾಲಯವು ಸೆ.22ಕ್ಕೆ ಮುಂದೂಡಿತು.
ಜಿಎಚ್ಐಎಎಲ್ ನಿರ್ವಹಿಸುತ್ತಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಯ ಸೌಲಭ್ಯ ಗಳನ್ನು ಬಳಸಿಕೊಂಡಿದ್ದಕ್ಕಾಗಿ ಕಿಂಗ್ಫಿಷರ್ ಏರ್ಲೈನ್ಸ್ ಶುಲ್ಕವಾಗಿ ನೀಡಿದ್ದ ತಲಾ 50 ಲ.ರೂ.ಗಳ ಎರಡು ಚೆಕ್ಗಳು ಅಮಾನ್ಯಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾ.ಎಂ.ಕೃಷ್ಣರಾವ್ ಅವರು ಎ.20ರಂದು ಮಲ್ಯ ಮತ್ತು ಕಿಂಗ್ಫಿಷರ್ನ ಹಿರಿಯ ಅಧಿಕಾರಿ ರಘುನಾಥನ್ ಅವರನ್ನು ದೋಷಿಗಳೆಂದು ಘೋಷಿಸಿದ್ದರು.
ಆದರೆ ರಘುನಾಥನ್ ಈ ನ್ಯಾಯಾಲಯದ ಎದುರು ಹಾಜರಾಗಿಲ್ಲ. ಹೀಗಾಗಿ ದೂರುದಾರರ ಮನವಿಯ ಮೇರೆಗೆ ಅವರ ಹಾಜರಾತಿಗಾಗಿ ಪ್ರಕರಣವನ್ನು ಸೆ.22ಕ್ಕೆ ಮುಂದೂಡುತ್ತಿರುವುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದರು.