ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ವಶ
ಶ್ರೀನಗರ, ಅ.6: ಉತ್ತರ ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಗುರುವಾರ ನಡೆದ ಭಾರತೀಯ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಆಹಾರ ಪೊಟ್ಟಣಗಳು ಹಾಗೂ ಔಷಧಿಗಳನ್ನು ವಶಪಡಿಸಿಕೊಳಲಾಗಿದ್ದು, ಈ ಎಲ್ಲ ವಸ್ತುಗಳು ಪಾಕಿಸ್ತಾನದಿಂದ ಬಂದಿರುವುದು ಸಾಬೀತಾಗಿದೆ.
ಹತ ಉಗ್ರರ ಬಳಿಯಿದ್ದ ಮೂರು ಎಕೆ-47 ರೈಫಲ್ಸ್, ಗ್ರೆನೆಡ್, ಭಾರೀ ಪ್ರಮಾಣದ ಯುದ್ಧ ಸಾಮಗ್ರಿಗಳು, ಜಿಪಿಎಸ್ ರೇಡಿಯೊ ಸೆಟ್, ಭೂಪಟಗಳು ಹಾಗೂ ಮೆಟ್ರಿಕ್ ಶೀಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ವಸ್ತುಗಳು ಉಗ್ರರು ಮತ್ತೊಂದು ದಾಳಿಗೆ ಸಜ್ಜಾಗಿರುವುದನ್ನು ಸೂಚಿಸುತ್ತಿದೆ.
ಒಳ ನುಸುಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಮ್ಯಾಪ್ ಹಾಗೂ ಮೆಟ್ರಿಕ್ ಶೀಟ್ಗಳನ್ನು ಪರಿಶೀಲಿಸಲಾಗುವುದು ಎಂದು ಭಾರತೀಯ ಸೇನೆ ಹೇಳಿದೆ. ಬೆಳಗ್ಗೆ ಸುಮಾರು 5 ಗಂಟೆಯ ಸುಮಾರಿಗೆ ಶಸ್ತ್ರಸಜ್ಜಿತ ವ್ಯಕ್ತಿ ರಾಷ್ಟ್ರೀಯ ರೈಫಲ್ ಕ್ಯಾಂಪ್ನಲ್ಲಿ ಗುಂಡು ಹಾರಾಟ ಆರಂಭಿಸಿದ್ದ. ತಕ್ಷಣವೇ ಎಚ್ಚೆತ್ತುಕೊಂಡ ಸೈನಿಕರು ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿದರು. ಭದ್ರತಾ ಸಿಬ್ಬಂದಿಗಳು ಮತ್ತಷ್ಟು ಉಗ್ರರಿಗಾಗಿ ಶೋಧ ನಡೆಸಿ ಸಂಭಾವ್ಯ ದಾಳಿಯನ್ನು ವಿಫಲಗೊಳಿಸಿದರು.