ಮೃತ ಆರೋಪಿ ರವಿಯ ಮನೆಗೆ ಸಚಿವ ಶರ್ಮಾ ಭೇಟಿ
ಹೊಸದಿಲ್ಲಿ, ಅ.8: ಗೋವಧೆ-ಗೋಮಾಂಸ ಸೇವನೆ ಆರೋಪದಲ್ಲಿ ಕಳೆದ ವರ್ಷ ಗುಂಪು ಥಳಿತಕ್ಕೆ ಬಲಿಯಾಗಿದ್ದ ಮುಹಮ್ಮದ್ ಅಖ್ಲಾಕ್ ಎಂಬಾತನ ದಾದ್ರಿಯ ಬಿಸಾರಾ ಗ್ರಾಮಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಮಹೇಶ್ ಶರ್ಮಾ, ಗ್ರೇಟರ್ ನೊಯ್ಡೆದ ಬಿಸಾರಾ ಗ್ರಾಮದ ಮೃತ ರವಿ ಎಂಬಾತನ ಮನೆಗೂ ತಾನು ಭೇಟಿ ನೀಡಿದ್ದೆ. ಗ್ರಾಮವೀಗ ಶಾಂತವಾಗಿದೆಯೆಂದು ಟ್ವೀಟಿಸಿದ್ದಾರೆ.
ರವಿ, ಅಖ್ಲಾಕ್ನ ಹತ್ಯಾರೋಪಿಯಾಗಿದ್ದು, ಇತ್ತೀಚೆಗೆ ಆತ ಕಾರಾಗೃಹದಲ್ಲೇ ಸಾವನ್ನಪ್ಪಿದ್ದನು.
ಶರ್ಮಾ, ಶುಕ್ರವಾರ ರವಿ ಸಿಸೋಡಿಯನ ಕುಟುಂಬವನ್ನು ಭೇಟಿಯಾಗಿದ್ದರು. ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದ ರವಿ, ಮಂಗಳವಾರ ಕೊನೆಯುಸಿರೆಳೆದಿದ್ದನು. ಆತನ ಆರೋಗ್ಯ ಕೆಟ್ಟಿತ್ತೆಂಬುದನ್ನು ತಳ್ಳಿಹಾಕಿರುವ ಕುಟುಂಬಿಕರು ಕಾರಾಗೃಹದಲ್ಲಿ ಆತನಿಗೆ ಥಳಿಸಲಾಗಿತ್ತೆಂದು ಆರೋಪಿಸಿ, ಆತನ ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದರು.
ರವಿಯ ಮೃತದೇಹವನ್ನು ರಾಷ್ಟ್ರಧ್ವಜ ಹೊದಿಸಿ, ಇತರ ನಿವಾಸಿಗಳ ಬೆಂಬಲದೊಂದಿಗೆ ಪ್ರದರ್ಶನಕ್ಕಿರಿಸಲಾಗಿತ್ತು. ಶುಕ್ರವಾರ ಶರ್ಮಾ ಅಲ್ಲಿಗೆ ಭೇಟಿ ನೀಡಿದ್ದರು.
ಮೃತನ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ, ಸಾವಿನ ಬಗ್ಗೆ ಸಿಬಿಐ ತನಿಖೆ ಸಹಿತ ತಮ್ಮ ಬೇಡಿಕೆಗಳನ್ನು ಸ್ಥಳೀಯಾಡಳಿತ ಒಪ್ಪಿಕೊಂಡಿದೆಯೆಂದು ಆ ಬಳಿಕ ಕುಟುಂಬಿಕರು ಹೇಳಿದ್ದರು.