ಸಾಂಸ್ಕೃತಿಕ ದಂಡುಪಾಳ್ಯ

Update: 2016-10-12 16:08 GMT

ಡಾ. ರಾಮಮನೋಹರ ಲೋಹಿಯಾ ಆ ಕಾಲದಲ್ಲೇ ಬರೆದದ್ದು:

ಬುದ್ಧದೇವ ಬೋಸ್ ಭಾರತದ ಗಮನಾರ್ಹ ಕವಿ ಮತ್ತು ಲೇಖಕರಲ್ಲಿ ಒಬ್ಬರೆಂಬುದರಲ್ಲಿ ಅನುಮಾನವಿಲ್ಲ. ಭಾರತದ ಕಥಾ ಸಾಹಿತ್ಯ ಯಾಕೆ ಅಷ್ಟೇನೂ ಶ್ರೀಮಂತವಾಗಿಲ್ಲ ಎಂಬುದಕ್ಕೆ ವಿವರಣೆ ನೀಡುತ್ತ ಬೋಸ್ ಸಂದರ್ಶನವೊಂದರಲ್ಲಿ ಹೇಳುತ್ತಾರೆ: ನಾವು ಈಚಿನ ವರ್ಷಗಳಲ್ಲಿ ಯುದ್ಧದ ಭೀಕರತೆಯನ್ನು ಸಹ ಕಂಡಿಲ್ಲ. ಕೋಲ್ಕತಾದಲ್ಲಿ ಜಪಾನೀಯರಿಂದ ನಡೆದ ಲಘು ಬಾಂಬ್ ದಾಳಿ ಅಥವಾ ಬಂಗಾಳದ ಕ್ಷಾಮವನ್ನು ಕಂಡೆವು ಸರಿ. ಆದರೆ ಇವೆಲ್ಲ ಫ್ರಾನ್ಸ್ ಅಥವಾ ಜರ್ಮನಿ ಅಥವಾ ಬ್ರಿಟನ್ ಅಥವಾ ರಷ್ಯಾ ಅನುಭವಿಸಿದ್ದರ ಮುಂದೆ ಅಥವಾ ಪೂರ್ವ ಯುರೋಪಿನ ದೇಶಗಳು ಈಗಲೂ ಅನುಭವಿಸುತ್ತಿರುವುದರ ಮುಂದೆ ಏನೇನೂ ಅಲ್ಲ. ಸರ್ವಾಕಾರಿ ಆಡಳಿತದ ದುಸ್ವಪ್ನವನ್ನೂ ನಾವು ಹಾದು ಹೋಗಿಲ್ಲ....ಎಂಥ ಲೊಳಲೊಟ್ಟೆಯಿದು? ಒಂದೇ ಬರಗಾಲದಲ್ಲಿ ಸಂಭವಿಸಿದ ಮೂವತ್ತು ಅಥವಾ ನಲವತ್ತು ಲಕ್ಷ ಜನರ ಸಾವು ಭಾರತದ ಈ ಬುದ್ಧಿಜೀವಿಗೆ ಗಾಢ ಸಂತಾಪದ ಸಂಗತಿಯಲ್ಲ, ಶ್ರೀಮಂತ ಅನುಭವವೂ ಅಲ್ಲ. ಈತ ನಮ್ಮ ಬುದ್ಧಿಜೀವಿಗಳ ಮಾದರಿ ಪ್ರತಿನಿ ಎಂಬುದನ್ನು ನಾನು ಖೇದದಿಂದ ಒಪ್ಪಿಕೊಳ್ಳಬೇಕು. ಇನ್ನು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು, ನೂರಾರು ಜನ ಅತಿಘೋರ ಚಿತ್ರಹಿಂಸೆ ಅನುಭವಿಸಿದರು. ಆದರೆ ಈ ಬುದ್ಧಿಜೀವಿಯ ಪಾಲಿಗೆ ಇಲ್ಲಿ ಸರ್ವಾಕಾರವಿರಲಿಲ್ಲ! ಭಾರತ-ಪಾಕಿಸ್ತಾನ ಗಡಿಯ ಎರಡೂ ಕಡೆ ಎರಡು ಕೋಟಿ ಅಥವಾ ಅದಕ್ಕೂ ಹೆಚ್ಚು ಜನ ತಮ್ಮ ಮನೆ ಮಾರು ಬೇರು ಕಳೆದುಕೊಂಡರು ಮತ್ತು ಧಾರ್ಮಿಕ ಕ್ಷೋಭೆಯ ಭಯೋತ್ಪಾದನೆಯಲ್ಲಿ ಆರು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲಲಾಯಿತು. ಆಗ ನಡೆದ ಸಾಮೂಹಿಕ ಅತ್ಯಾಚಾರಗಳ ಲೆಕ್ಕ ಇಡುವುದೂ ಸಾಧ್ಯವಿಲ್ಲ. ಇಷ್ಟೆಲ್ಲವೂ ಸ್ವಾತಂತ್ರ್ಯೋದಯದೊಂದಿಗೇ ಬಂದವು, ಮತ್ತು ನಮ್ಮ ಬುದ್ಧಿಜೀವಿಗೆ ಇದ್ಯಾವುದೂ ದುಃಸ್ವಪ್ನವಲ್ಲ!... 

ಈ ಮರ್ಮಭೇದಕ ಸತ್ಯವನ್ನು ತಮ್ಮ ‘‘ಇಂಟರ್‌ವಲ್ ಡೂರಿಂಗ್ ಪಾಲಿಟಿಕ್ಸ್’’ ಕೃತಿಯಲ್ಲಿ, ಕೆಲವು ಪುಸ್ತಕಗಳ ವಿಮರ್ಶೆ ಮಾಡುತ್ತ ದಾಖಲಿಸಿರುವ ಲೋಹಿಯಾ, ನಮ್ಮ ದೇಶದಲ್ಲಿ ಜನಸ್ತೋಮದ ಭಾವನೆಗಳು ಮತ್ತು ಬುದ್ಧಿಜೀವಿಗಳ ಚಿಂತನೆಗಳ ನಡುವೆ ಯಾಕಿಂಥ ಅಗಾಧ ಕಂದಕವಿದೆ ಎಂಬ ಪ್ರಶ್ನೆಗೆ ಉತ್ತರ ಅರಸುತ್ತಿದ್ದೇನೆ ಎಂದು ಬರೆದರು. ಅದಕ್ಕೆ ಅವರು ಕಂಡುಕೊಂಡ ಉತ್ತರ ನಮ್ಮ ಜಾತಿವ್ಯವಸ್ಥೆ.
ನನ್ನ ಬಳಿ ಇರುವ ವಿವರಣೆ ಒಂದೇ: ಭಾರತದ ಬುದ್ಧಿ ಜೀವಿಗಳು ಸಾಮಾನ್ಯವಾಗಿ ಮೇಲು ಜಾತಿಯವರು ಮತ್ತು ಕ್ಷಾಮ ಅಥವಾ ಧಾರ್ಮಿಕ, ರಾಜಕೀಯ ದುರಂತಗಳಲ್ಲಿ ಪ್ರಾಣ ತೆರುವವರು ಸಾಮಾನ್ಯವಾಗಿ ಹಿಂದುಳಿದ ಜಾತಿಗಳ ಜನರು ಅಥವಾ ಹರಿಜನರು. ಇವೆರಡೂ ಪ್ರತ್ಯೇಕ ಲೋಕಗಳು. ಅಷ್ಟೇಕೆ, ಎರಡೂ ಪ್ರತ್ಯೇಕ ದೇಶಗಳು ಅಥವಾ ಅದಕ್ಕಿಂತಲೂ ಹೆಚ್ಚು...

ಲೋಹಿಯಾ ಗುರುತಿಸುವ ಈ ವೈರುಧ್ಯ, ವಾಸ್ತವ ಒಂದು ಕಡೆ, ನಮ್ಮ ಬುದ್ಧಿವಂತ ವರ್ಗದ ಚಿಂತನೆ ಇನ್ನೊಂದು ಕಡೆ- ಈ ಎರಡು ಲೋಕಗಳ ನಡುವೆ ಅಂದಿನಂತೆ ಇಂದಿಗೂಭಾರತದಲ್ಲಿ ಅತ್ಯಗಾಧ ಕಂದಕವೇ ಇದೆ. ಒಂದೇ ಉದಾಹರಣೆ ಕೊಡುತ್ತೇನೆ ಅತ್ಯಂತ ಬುದ್ಧಿವಂತರೆಂದು ಹೆಸರಾದ ಕನ್ನಡದ ಖ್ಯಾತ ನಾಯಕನಟರೊಬ್ಬರಿಗೆ- ತನ್ನದೇ ದೊಡ್ಡ ಥಿಯರಿಯೊಂದನ್ನು ಹೀಗೆ ಮುಂದಿಡುವ ಚಾಳಿಯಿದೆ:
ಮೊದಲು- ನಾನು ಸರಿ ಇದ್ದೀನಿ, ಈ ಲೋಕ ಸರಿಯಿಲ್ಲ ಅಂದುಕೋತಾ ಇದ್ದೆ. ಆಮೇಲೆ ಇಲ್ಲ, ಈ ಲೋಕ ಸರಿಯಿದೆ, ಆದರೆ ನಾನು ಸರಿಯಿಲ್ಲ ಅಂದುಕೊಂಡೆ. ಆಮೇಲೆ ಗೊತ್ತಾಯ್ತು, ನಾನೂ ಸರಿ ಇದೀನಿ, ಈ ಲೋಕಾನೂ ಸರಿ ಇದೆ... ಇದೇ ಅವರ ಮಹಾನ್ ಆಧ್ಯಾತ್ಮಿಕ ಜ್ಞಾನೋದಯ! ಅಲ್ಲಿಗೆ ಸರ್ವಂ ಶುಭಂ ಮಂಗಳಂ!....
ಮಸಲಾ ಇವರು ಯಾವ ಲೋಕದಲ್ಲಿ ಬದುಕಿದ್ದಾರೆ? ಹೆಸರಿದೆ, ಖ್ಯಾತಿಯಿದೆ, ಬೆಚ್ಚನೆ ಮನೆ, ಮಡದಿ, ತಲೆಮಾರು ಗಳಿಗಾಗುವಷ್ಟು ಸಂಪತ್ತು... ಅದಕ್ಕೇ ಎಲ್ಲವೂ ಸರಿಯಿದೆ. ಆದರೆ ಈ ಖ್ಯಾತನಾಮರು ನಮ್ಮ ನೆಲದ ಮೇಲಂತೂ ಇಲ್ಲ, ಎಲ್ಲೋ ಅಂತರಿಕ್ಷದಲ್ಲಿ ಜೀವಿಸುತ್ತಿರಬೇಕು. ಅಲ್ಲವೇ..!
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾಯಿತು, ಆದರೂ ಇಲ್ಲಿ ಅಸ್ಪಶ್ಯತೆ ಜ್ವಲಂತವಾಗಿದೆ; ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ದೇಶದ ಮೂರು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.... ಹೇಳುತ್ತ ಹೋದರೆ ಕರುಳಿರಿಯುವ ಇಂಥ ನೂರೆಂಟು ಸವಾಲುಗಳಿವೆ. ಆದರೂ ಈ ಮಹಾನುಭಾವರಿಗೆ ನಾನೂ ಸರಿ ಇದ್ದೀನಿ, ಈ ಲೋಕವೂ ಸರಿಯಿದೆ.... ಸರ್ವಂ ಶುಭಂ ಮಂಗಳಂ...!
 


ಗಾಂಧಾರಿಗೆ ಕಣ್ಣುಗಳಿದ್ದವು. ಆದರೆ ಗಂಡನಿಗೆ ಕಣ್ಣಿಲ್ಲ ವೆಂಬ ಕಾರಣಕ್ಕೆ ತಾನೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ವತಃ ಕುರುಡಿಯಾದಳು. ವಿಶೇಷವೆಂದರೆ, ಕೈಯಾರೆ ಕತ್ತಲು ತಂದುಕೊಳ್ಳುವ ಇಂಥ ಸ್ವಯಂ ಕುರುಡು ನಮ್ಮ ದೇಶದಲ್ಲಿ ತೀರಾ ತೀರಾ ಸಾಮಾನ್ಯ ಮತ್ತು ಸಾರ್ವತ್ರಿಕವಾದ ರೋಗ! ಲೋಹಿಯಾ ಉಲ್ಲೇಖಿಸಿದ ಅಥವಾ ನಾನು ಕೊಟ್ಟ ಉದಾಹರಣೆಗಳೂ ಇಂಥ ಸ್ವಯಂ ಕುರುಡಿನವೇ. ಮತ್ತು ದಿನ ಬೆಳಗಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸ್ವಯಂ ಕುರುಡಿನ ಅಸಂಖ್ಯ ನಿದರ್ಶನಗಳನ್ನು ಕಾಣುತ್ತಲೇ ಇದ್ದೇವೆ. ಮುಖ್ಯವಾಗಿ ನಮ್ಮ ಐವತ್ತಾರು ಇಂಚು ಎದೆಯ ಪ್ರಧಾನ ಸೇವಕರ ಸೇವೆಗೆ ಟೊಂಕ ಕಟ್ಟಿ ನಿಂತ ಕೋಟ್ಯಂತರ ಮರಿಸೇವಕರೇ ತಮ್ಮ ಅಬ್ಬರ, ಆಟಾಟೋಪಗಳಿಂದ ಇದಕ್ಕೆ ಸಾಕ್ಷಿ ಒದಗಿಸುತ್ತಿದ್ದಾರೆ!...

ಇರಲಿ. ಕೇಂದ್ರದಲ್ಲಿ ಬಿಜೆಪಿ ನಿಸ್ಸಂದಿಗ್ಧ ಬಹುಮತದೊಂದಿಗೆ ಅಕಾರಕ್ಕೆ ಬಂದಿದ್ದೇ ಬಂದಿದ್ದು, ಇಡೀ ಸಂಘ ಪರಿವಾರ ಈ ದೇಶ ಮತ್ತೊಮ್ಮೆ ವಿಭಜನೆಯಾಗಲೇಬೇಕು ಎಂಬಂತೆ ಟೊಂಕ ಕಟ್ಟಿ ಹಗಲೂರಾತ್ರಿ ಹೋರಾಡುತ್ತಿದೆ. ಪ್ರತಿ ದಿನ ಅಂಕೆ ಮೀರಿದ ಮಾತುಗಳು, ಕೃತ್ಯಗಳು... ಇಲ್ಲಿ ಎರಡೇ ಉದಾಹರಣೆಗಳನ್ನು ಮುಟ್ಟಿ ನೋಡ ಬಹುದು- ದಾದ್ರಿ ಮತ್ತು ಉನಾ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಉತ್ತರ ಪ್ರದೇಶದ ದಾದ್ರಿ ಯಲ್ಲಿ ಮನೆಯಲ್ಲಿ ಗೋಮಾಂಸ ಇಟ್ಟುಕೊಂಡಿದ್ದಾರೆ ಎಂಬ ಒಂದೇ ವದಂತಿ ಹಿಡಿದುಕೊಂಡು ನೂರು ಜನರ ಗುಂಪು ಆ ಮನೆ ಮೇಲೆ ದಾಳಿ ನಡೆಸಿ ಐವತ್ತರ ಪ್ರಾಯ ಮೀರಿದ ಮನೆ ಯಜಮಾನ ಮಹಮದ್ ಅಖ್ಲಾಕ್‌ನನ್ನು ಹೊಡೆದು ಸಾಯಿಸಿಯೇಬಿಟ್ಟಿತು. ಆತನ ಮಗನ ಮೇಲೂ ಗಂಭೀರ ಹಲ್ಲೆ ನಡೆದು ಆತ ಆಸ್ಪತ್ರೆ ಸೇರಬೇಕಾಯಿತು. ಆಗ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದದ್ದು ಅವರ ಮನೆಯ ಫ್ರಿಜ್ಜಿನಲ್ಲಿದ್ದ ಮಾಂಸದ ತುಂಡು ಗೋಮಾಂಸ ಅಲ್ಲ! ಎರಡನೆಯ ಘಟನೆಯೂ ಇದೇ ಗೋವಿಗೇ ಸಂಬಂಧಪಟ್ಟಿದ್ದು. ಗುಜರಾತಿನ ಉನಾದಲ್ಲಿ ಸತ್ತ ದನವನ್ನು ಸಾಗಿಸಲು ಅಲ್ಲಿನ ದಲಿತರಿಗೆ ಒಪ್ಪಿಸಿದ್ದರು. ಆ ದಲಿತರು ದನದ ಚರ್ಮ ಸುಲಿಯುತ್ತಿದ್ದಾಗ ದಾಳಿ ನಡೆಸಿದ ಗೋರಕ್ಷಕರು ದಲಿತರನ್ನು ಕಾರಿಗೆ ಸರಪಳಿಯಿಂದ ಕಟ್ಟಿ ಹಾಕಿ ಕಬ್ಬಿಣದ ಸರಳುಗಳು ಮತ್ತು ಮರದ ರಿಪುಗಳಿಂದ ಥಳಿಸಿದ್ದಷ್ಟೇ ಅಲ್ಲ, ಅದರ ವೀಡಿಯೊ ತೆಗೆದು ತಮ್ಮ ಪೌರುಷ ಮೆರೆಯಲು ಮತ್ತು ಇತರರಿಗೆ ಎಚ್ಚರಿಕೆಯಾಗಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು...!
ಈ ಎರಡು ಘಟನೆಗಳನ್ನು ಕಂಡು ಈ ನಮ್ಮ ಬಡದೇಶ ಬೆಚ್ಚಿ ಎದ್ದು ಕೂರಬೇಕಿತ್ತು, ಕಣ್ಣಿಗೆ ನಿದ್ದೆ ಹತ್ತದ ಮಟ್ಟಿಗೆ ತಳಮಳಗೊಳ್ಳಬೇಕಿತ್ತು. ಜೀವ ವಿಲಿವಿಲಿಗುಟ್ಟಬೇಕಿತ್ತು. ಅದೇ ನಿಮಿತ್ತ ವಾಗಿ ಇಲ್ಲಿ ಮೂಲಭೂತವಾದದ್ದೇನೋ ಘಟಿಸಬೇಕಿತ್ತು. ಆದರೆ ಆದದ್ದು...? ದಾದ್ರಿ ದುರಂತದಲ್ಲಿ... ಅಲ್ಲಿದ್ದಿದ್ದು ನಿಜಕ್ಕೂ ಗೋ ಮಾಂಸವೇ ಎಂಬ ಎರಡನೇ ವರದಿ ತರಿಸಿಕೊಳ್ಳಲಾಯಿತು! ಈಗ ಆ ಜೀವ ಕಳೆದುಕೊಂಡ ಕುಟುಂಬದ ಮೇಲೆಯೇ ಪ್ರಕರಣ ದಾಖಲಿಸಬೇಕೆಂದು ನ್ಯಾಯಾಲಯವೇ ಸೂಚಿಸಿದೆ!!
ಹೋಗಲಿ, ಉನಾದಲ್ಲಿ...? ಉನಾ ಘಟನೆಗೆ ಪ್ರತಿಭಟನೆಯಾಗಿ ಇಡೀ ಗುಜರಾತಿನ ದಲಿತರು ಎದ್ದು ನಿಂತರು. ತಮ್ಮ ಶಕ್ತಿಯ ವಿರಾಟ್ ಪ್ರದರ್ಶನ ಮಾಡಿದರು. ಉನಾವರೆಗೆ ರ್ಯಾಲಿ ನಡೆಸಿ ಹೇಗೆ ಘರ್ಜಿಸಿದರೆಂದರೆ ನಮ್ಮ ಮೌನ ಮೋದಿಯೇ ಥರ ಥರ ನಡುಗಿ, ‘ದಲಿತರನ್ನು ಮುಟ್ಟುವ ಮೊದಲು ತನ್ನ ಮೇಲೆ ದಾಳಿ ಮಾಡಿ’ ಎಂಬ ಹೃದಯವಿದ್ರಾವಕ ಅಭಿನಯ ಮಾಡಬೇಕಾಯಿತು. ಆದರೂ, ಉನಾ ರ್ಯಾಲಿ ಮುಗಿಸಿಕೊಂಡು ತೆರಳುತ್ತಿದ್ದ ದಲಿತರ ಮೇಲೆ ಮತ್ತೆ ಹಲ್ಲೆ ನಡೆಯಿತು...!

ಇವು ತಮ್ಮಷ್ಟಕ್ಕೇ ಜೀವ ನಡುಗಿಸುವ ಘಟನೆಗಳೇನೋ ಹೌದು. ಆದರೆ ಗೋಳು ಇಲ್ಲಿಗೇ ನಿಲ್ಲುವುದಿಲ್ಲ! ಈ ಬಗ್ಗೆ ಯಾರಾದರೂ ಉಸಿರೆತ್ತಿದ ಕೂಡಲೇ ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳ ಗಾಣ ಗರ್ರನೆ ತಿರುಗಲಾರಂಭಿಸುತ್ತದೆ. ದೊಡ್ಡದೊಂದು ಅಕ್ಷೋಹಿಣಿ ಸೈನ್ಯ ಒಮ್ಮಿಂದೊಮ್ಮೆಲೇ ಎದುರಾಳಿಗಳ ಮೇಲೆ ಬೀಳುತ್ತದೆ. ಈ ದಂಡುಪಾಳ್ಯ ಗ್ಯಾಂಗ್ ಇತ್ತಲ್ಲ, ಕಂಡಕಂಡವರ ಕತ್ತು ಕೊಯ್ದು ಕತೆ ಮುಗಿಸುತ್ತಿತ್ತಲ್ಲ, ಅದ್ಯಾಕೆ ಕತ್ತನ್ನೇ ಕೊಯ್ತೀರಿ ಅಂತ ಕೇಳಿದರೆ, ಕತ್ತು ಕೊಯ್ದಾಗ, ಉಸಿರೆಳೆದುಕೊಂಡ ಕೂಡಲೇ ಸುಂಯ್ ಎಂದು ಶಿಳ್ಳೆ ಹೊಡೆದ ರೀತಿ ಸದ್ದಾಗುತ್ತೆ, ಆ ಸದ್ದು ನಮಗೆ ಮಜಾ ಕೊಡುತ್ತೆ ಅಂತ ಉತ್ತರಿಸಿದರಂತಲ್ಲ, ಇಡೀ ಸಾಮಾಜಿಕ ವಾತಾವರಣ ಹಾಗಿದೆ. ಕತ್ತು ಕೊಯ್ದರೆ ಸಾಲದು, ಆ ಸಾವಿನ ಸಪ್ಪಳವನ್ನೂ ಆಸ್ವಾದಿಸಿದಾಗಲೇ ತೃಪ್ತಿ. ದಾದ್ರಿಯಲ್ಲಿ ಆ ಅಮಾಯಕನನ್ನು ಹೊಡೆದು ಸಾಯಿಸಿದರೆ ಸಾಲದು, ಅವನ ಮೇಲೇ ಕೇಸೂ ಹಾಕಬೇಕು....
ನೋಡಿದ ಇವರೇನಾದರೂ ಮನುಷ್ಯರಾಗಿದ್ದರೆ, ಅವರು ಯಾವ ಪಕ್ಷ ಸಿದ್ಧಾಂತದವರೇ ಆಗಿದ್ದರೂ, ಛೇ ಪಾಪ! ಹೀಗಾಗಬಾರದಿತ್ತು ಎಂಬ ವ್ಯಥೆ ಹುಟ್ಟಬೇಕಿತ್ತು. ಇಲ್ಲ, ಅಂಥದ್ದೆಲ್ಲ ನಿರೀಕ್ಷಿಸುವಂತೆಯೇ ಇಲ್ಲ. ಬದಲಿಗೆ ತಲೆ ಕೆಳಗು ಮಾಡಿ ನಿಂತಾದರೂ ಸರಿ, ಆ ಪಾತಕವನ್ನೇ ಸಮರ್ಥಿಸಿಕೊಳ್ಳುತ್ತ, ಆ ಪಾತಕಿಗಳ ಕೈಗಂಟಿದ್ದ ರಕ್ತವನ್ನು ತಮ್ಮ ಕೈಗೂ ಮೆತ್ತಿಕೊಳ್ಳುತ್ತಿದ್ದಾರೆ. ಇಲ್ಲಿ ಇನ್ನೂ ಒಂದು ವಿಚಿತ್ರವಿದೆ: ತಮ್ಮ ಮೊಂಡು ವಾದಗಳ ಮೂಲಕ ಅವರು ಆ ಕೃತ್ಯವಷ್ಟನ್ನೇ ಸಮರ್ಥಿಸಿ ಸುಮ್ಮನಾಗುವಂತೆ ಕಾಣುತ್ತಿಲ್ಲ, ತಮ್ಮ ಪ್ರತಿಯೊಂದು ಶಬ್ದದ ಮುಖಾಂತರ ತಾವು ಸ್ವಯಂ ನರೇಂದ್ರ ಮೋದಿಯವರನ್ನೇ ಕಾಪಾಡುತ್ತಿದ್ದೇವೆ ಎನ್ನುವಂತೆ ಎದೆ ಸೆಟೆಸಿ ನಿಲ್ಲುತ್ತಾರೆ. ಅದೇನು ಒಳಸಂಬಂಧವೋ ಅರ್ಥವೇ ಆಗುವುದಿಲ್ಲ...!


ಇನ್ನೊಂದು: ಈಗಂತೂ ದ್ವೇಷದ ರಾಜಕಾರಣ, ಎಲ್ಲ ಮುಚ್ಚು ಮರೆ ಕಳಚಿ ಬೆತ್ತಲಾಗಿ ನಿಂತುಬಿಟ್ಟಿದೆ. ಮುಂಚೆ ಕದ್ದೂ ಮುಚ್ಚಿ- ಹಿಂಬಾಗಿಲಿನಿಂದ-ಇತರೆ ಧರ್ಮಗಳ-ವಿಶೇಷವಾಗಿ ಮುಸ್ಲಿಮರ ವಿರುದ್ಧ ಬೆಂಕಿ ಕಾರುತ್ತಿದ್ದವರು ಈಗ ಸುಳ್ಳು ಮತ್ತು ನಂಜು ಬೆರೆಸಿ ನೇರಾನೇರ ವೀರಾವೇಶದ ಪ್ರಚಾರಾಂದೋಲನದಲ್ಲಿ ನಿರತರಾಗಿ ದ್ದಾರೆ. ಅದರ ಅಸಹ್ಯಕರ ಮಾದರಿಗಳನ್ನು ದಿನಬೆಳಗಾದರೆ ನೋಡುತ್ತಲೇ ಇದ್ದೇವೆ.... ಹಾಗೆಂದು ಇಲ್ಲಿ ನಾನು ಬಲಪಂಥೀಯ ಸಂಘಟನೆಗಳಷ್ಟನ್ನೇ ಗುರಿ ಮಾಡಿಕೊಂಡು ಈ ಮಾತು ಹೇಳುತ್ತಿದ್ದೇನೆ ಅಂದುಕೊಳ್ಳಬಾರದು. ಒಟ್ಟಾರೆ ಜನ ಸಾಮಾನ್ಯರ ಮಟ್ಟದಲ್ಲೂ ರಾಜಾರೋಷಾದ, ಅಳುಕಿಲ್ಲದ- ದ್ವೇಷ, ಅಸಹನೆಯ ಭಾಷೆ, ನಡತೆ ಸರ್ವವ್ಯಾಪಿಯಾಗುತ್ತಿದೆ. ಸಾರ್ವ ಜನಿಕ ನಡವಳಿಕೆ ಯಲ್ಲಿ ಕಾಣುತ್ತಿದ್ದ ಸಂಕೋಚ, ಲಜ್ಜೆಗಳೆಲ್ಲ ಮಾಯವಾಗಿವೆ. ದೊಡ್ಡವರಿರಲಿ, ಚಿಕ್ಕವರಿರಲಿ, ಹಂಗಿಸುವ, ಹೀಯಾಳಿಸುವ ಧಾರ್ಷ್ಟ್ಯ ಮನೆ ಮಾಡಿದೆ. ಮಾತೆತ್ತಿದರೆ ಪಾಕಿಸ್ತಾನಕ್ಕೆ ಓಡಿಸುವ ಧಾವಂತ ಒಂದು ಕಡೆಯಾದರೆ, ಕನ್ಹೆಯನೂ ನನ್ನ ಮಗ, ರೋಹಿತ್ ವೇಮುಲನೂ ಮರಣೋತ್ತರ ಮಗ, ಇದೀಗ ಜಿಗ್ನೇಶ್ ಮೆವಾನಿಯೂ ನನ್ನ ಕೂಸು ಎಂದು ಬಡಬಡಿಸುವ ಬಡಿವಾರದ ಹೇಸಿಗೆ ಇನ್ನೊಂದು ಕಡೆ..! 


ಈಗ ಏನು ಮಾಡಿದರೂ ಫೋಟೋ, ವೀಡಿಯೊ ತೆಗೆದು ಜನರ ಮುಂದಿಡುವ ಚಾಳಿಯಲ್ಲವೇ? ಈಚೆಗೆ ಅಂಥ ಮೂರು ವೀಡಿಯೊಗಳು ಕಾಣಸಿಕ್ಕವು. ಒಂದನೆಯದು- ತಮಿಳುನಾಡಿನಲ್ಲಿ, ನೋಡಲು ವಿದ್ಯಾವಂತ ನಂತೆ ಕಾಣುತ್ತಿದ್ದವನೊಬ್ಬ ಮೂರನೇ ಮಹಡಿಯಿಂದ ಒಂದು ಪಾಪದ ನಾಯಿಯನ್ನು ತೆಗೆದು ಕೆಳಕ್ಕೆ ಬಿಸಾಕಿಬಿಟ್ಟಿದ್ದು....
ಎರಡನೆಯದು, ಹಸುಗೂಸಿನಂತಿದ್ದ ಕೆಲವು ಪುಟ್ಟ ಪುಟ್ಟ ನಾಯಿಮರಿ ಗಳನ್ನು ಒಂದಷ್ಟು ಯುವಕರು ಜೀವಂತ ಸುಡುವ ವೀಡಿಯೊ...

ಮೂರನೆಯದು- ಒಬ್ಬ ಯುವಕ ಹಳ್ಳಿ ಬೀದಿಯಲ್ಲಿ ನಾಯಿಯ ಹಿಂಗಾಲು ಹಿಡಿದು ತಾನು ಗಿರಗಿಟ್ಲೆ ಸುತ್ತುತ್ತ ಕೊನೆಗೆ ಆ ನಾಯಿಯನ್ನು ಬೀಸಿ ಒಗೆದೇ ಬಿಟ್ಟ! ಅದು ಕುಯ್ಯೋ ಮರ್ರೋ ಕಿರುಚುತ್ತ ಕುಂಯ್‌ಗುಡುತ್ತ ಹೇಗೋ ಎದ್ದು ಓಡಿದಾಗ ಆತ ಜೋರಾಗಿ ಏನೋ ಸಾಸಿದವನಂತೆ ನಗುತ್ತಿದ್ದ...!

ಯಾಕೆ ಈ ಕ್ರೌರ್ಯ? ಸಂಪೂರ್ಣ ನಿಷ್ಕಾರಣವಾದ ಕ್ರೌರ್ಯ, ವೈಯಕ್ತಿಕ ವಾಗಿ ಏನೂ ಕೊಡದ, ತಲೆಬುಡವೇ ಇಲ್ಲದ ಕ್ರೌರ್ಯ. ಉನಾ ದಲಿತರನ್ನು ಕಟ್ಟಿ ಹಾಕಿ ಥಳಿಸುವಾಗ ಕಂಡಿದ್ದೂ ಇದೇ ಕ್ರೌರ್ಯ ವಲ್ಲವೇ? ದನ ಸಾಗಿಸುವವರ ಮೇಲೆ ನಡೆಯುವ ಹಲ್ಲೆ ಹಿಂಸಾಚಾರದ ಹಿಂದೆ ಗೋ-ಆರ್ಥಿಕತೆಯ ದೊಡ್ಡ ದೊಡ್ಡ ಪ್ರಶ್ನೆಗಳಿರಬಹುದು. ಆದರೆ ಆಗ ಕಾಣುವ ಕ್ರೌರ್ಯವೂ ಇಂಥದೇ- ಹಿಂಸೆಯಿಂದ ಪಡೆಯುವ ಆನಂದದ ಸ್ವರೂಪದ್ದಲ್ಲವೇ?

ರಾಜಕೀಯ ಪ್ರಣಾಳಿಕೆಯ ಅಂಗವಾಗಿ ಬರುವ ಅಸಹನೆ, ದ್ವೇಷಗಳನ್ನು ಹೇಗೋ ರಾಜಕೀಯವಾಗೇ ಎದುರಿಸಬಹುದು. ಯಾಕೆಂದರೆ ಯಾವ ಮೋದಿಯೂ ಇಲ್ಲಿ ಶಾಶ್ವತವಲ್ಲ. ಆದರೆ ಸಾಮೂಹಿಕ ಮನೋಪ್ರಪಂಚವೇ ಈ ಮಟ್ಟಿಗೆ ಕ್ರೂರವಾದರೆ, ಇಷ್ಟು ನಂಜು ತುಂಬಿಕೊಂಡರೆ ಅದನ್ನು ಎದುರಿಸುವ ಬಗೆ ಯಾವುದು? ಈ ಸಾಂಸ್ಕೃತಿಕ ದಂಡುಪಾಳ್ಯಕ್ಕೆ ಎಲ್ಲಿದೆ ಔಷ?...



ಕೊನೆಯ ಟಿಪ್ಪಣಿ: ಹೇಗೂ ಗೋರಕ್ಷಣೆಯ ಮಾತು ಬಂದಿದೆ. ಇಲ್ಲಿಯೇ ತುಸು ಆ ರಾಜಕಾರಣದ ಪೂರ್ವಾಪರ ಚರ್ಚಿಸುವುದು ಒಳ್ಳೆಯದು.
ಮೂಲ ಪ್ರಶ್ನೆಯಿಷ್ಟೇ- ಹಿಂದೂಗಳು ಗೋ ಮಾಂಸಭಕ್ಷಣೆ ಮಾಡುತ್ತಿದ್ದರು ಹಾಗೂ ಅಸ್ಪಶ್ಯರೆಂದರೆ ಯಾರು? ಕೃತಿಗಳಲ್ಲಿ ಅಂಬೇಡ್ಕರ್ ಅನಾದಿ ಕಾಲದಿಂದಲೂ ಹಿಂದೂಗಳು ಗೋ ಮಾಂಸ ಭಕ್ಷಕರಾಗಿದ್ದುದನ್ನು ವಿವರಿಸಿ ಬಂಡಿಗಟ್ಟಳೆ ಆಧಾರಗಳನ್ನು ಕೊಡುತ್ತಾರೆ. ಅಷ್ಟಾದರೂ, ಅವರ ನೇತೃತ್ವದ ಸಂವಿಧಾನ ಗೋರಕ್ಷಣೆಯನ್ನು ನಿರ್ದೇಶಕ ತತ್ವವಾಗಿ (48ನೇ ವಿಯ ಮೂಲಕ) ಅಳವಡಿಸಿಕೊಂಡ ವಿಚಿತ್ರ ಸಂಭವಿಸಿದ್ದು ಹೇಗೆ?
ಕೆದಕಿ ನೋಡಿದಾಗ ತಿಳಿದು ಬಂದಿದ್ದು-
ಸಂವಿಧಾನದ ಮೊದಲ ಎರಡು ಕರಡುಗಳಲ್ಲಿ ಗೋರಕ್ಷಣೆಯ ಪ್ರಸ್ತಾಪವೇ ಇರಲಿಲ್ಲ. ಆದರೆ ಬಾಬು ರಾಜೇಂದ್ರ ಪ್ರಸಾದ್‌ರ (ನಮ್ಮ ಮೊದಲ ರಾಷ್ಟ್ರಪತಿ) ಮುಂದಾಳ್ತನದಲ್ಲಿ ಒಗ್ಗೂಡಿದ ಕಾಂಗ್ರೆಸ್ಸಿನೊಳಗಣ ಕಟ್ಟಾ ಹಿಂದುತ್ವವಾದಿಗಳು ಗೋರಕ್ಷಣೆಯನ್ನು ಮೊದಲಿಗೆ ಮೂಲಭೂತ ಹಕ್ಕುಗಳ ಪಟ್ಟಿಯಲ್ಲೇ ತರಬಯಸಿ ತಿದ್ದುಪಡಿ ಮಂಡಿಸಿದರು. ಅದೇ ತಾನೇ ಸಂಭವಿಸಿದ್ದ ದೇಶ ವಿಭಜನೆಯ ರಣಗಾಯಗಳು ಇನ್ನೂ ರಕ್ತ ಸುರಿಸುತ್ತಲೇ ಇದ್ದವು. ಹಾಗಾಗಿ ಗೋ ರಕ್ಷಣೆ- ಭಕ್ಷಣೆಯ ವಿಷಯ ಅವರಿಗೆ ಹಿಂದು ಧರ್ಮದ ಹಿರಿಮೆ ಎತ್ತಿ ಹಿಡಿಯುವ ಪ್ರಶ್ನೆಯಾಗಿತ್ತು. ಆದರೆ ಅವರು ಜಾಣರು. ನೇರವಾಗಿ ಈ ಪ್ರಶ್ನೆಯ ಧಾರ್ಮಿಕ ಹಾಗೂ ಭಾವನಾತ್ಮಕ ಮುಖವನ್ನು ಪ್ರದರ್ಶಿಸದೆ ಹಳ್ಳಿಗಾಡಿನ ಅರ್ಥವ್ಯವಸ್ಥೆಯ ಮುಸುಕು ಹೊದಿಸಿ ಮುಂದಿಟ್ಟರು. ಅದೇನೇ ಆಗಲಿ, ಗೋ ರಕ್ಷಣೆ ಹಾಗೇನಾದರೂ ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಸೇರಿಹೋಗಿದ್ದರೆ ಇಡೀ ಜಗತ್ತಿನಲ್ಲಿ, ನಮ್ಮ ಭಾರತ, ಮನುಷ್ಯರ ಜೊತೆಗೆ ಪ್ರಾಣಿಗಳಿಗೂ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದ ಏಕೈಕ ದೇಶವಾಗುತ್ತಿತ್ತು! ಕಡೆಗೆ ಅಂಬೇಡ್ಕರ್ ಮತ್ತು ನೆಹರೂ ವಹಿಸಿದ ಎಚ್ಚರದಿಂದಾಗಿ ಅದು ನಿರ್ದೇಶಕ ತತ್ವ ಮಾತ್ರವಾಗಿ ಉಳಿದುಕೊಂಡಿತು... ಸಹಜವಾಗಿಯೇ ಈ ಪ್ರಶ್ನೆ ಕಾಲಕಾಲಕ್ಕೆ ನ್ಯಾಯಾ ಲಯ ಮೆಟ್ಟಿಲನ್ನೂ ಏರಿದೆ.

ಮೊದಲ ಬಾರಿ 1958ರಲ್ಲಿ ಮುಹಮ್ಮದ್ ಹನ್ೀ ಖುರೇಷಿ ಮತ್ತು ಬಿಹಾರ ಸರಕಾರಗಳ ನಡುವಿನ ಮೊಕದ್ದಮೆ ಯಲ್ಲಿ ಸುಪ್ರೀಂಕೋರ್ಟಿನ ಶ್ರೇಷ್ಠ ನ್ಯಾಯಮೂರ್ತಿ ಎಸ್.ಆರ್.ದಾಸ್ ನೇತೃತ್ವದ ಪೀಠ ಹಾಲು ಕರೆಯುವ ಅಥವಾ ಉಳುವ ಜಾನು ವಾರುಗಳ ಹತ್ಯೆಯನ್ನು ನಿಷೇಸಿದರೂ ವಯಸ್ಸು ಮೀರಿದ, ನಿರುಪಯುಕ್ತವಾದ ದನಗಳ ಹತ್ಯೆಯನ್ನು ನಿಷೇಸುವುದು ಸಮಂಜಸವಲ್ಲ ಎಂಬ ತೀರ್ಪು ನೀಡಿತು.
ಆ ಪ್ರಕರಣದಲ್ಲಿ ಕೋರ್ಟಿನ ಸಲಹೆಗಾರರಾಗಿದ್ದವರು (ಅಮಿಕಸ್ ಕ್ಯೂರಿ) ಠಾಕೂರ್‌ದಾಸ್ ಭಾರ್ಗವ. ಸಂವಿಧಾನಕ್ಕೆ ಗೋರಕ್ಷಣೆ ಪರವಾದ ತಿದ್ದುಪಡಿ ಮಂಡಿಸಿದ್ದವರು ಇವರೇ. ಆ ತಿದ್ದುಪಡಿ ಸಂದರ್ಭದಲ್ಲಿ ಗೋರಕ್ಷಣೆ ಸಂದರ್ಭದಲ್ಲಿ ಬಲಪ್ರಯೋಗಕ್ಕೆ ಅವಕಾಶವಿರಬಾರದು ಎಂದಿದ್ದ ಈ ಪುಣ್ಯಾತ್ಮರೇ ಈಗ ನ್ಯಾಯಾಲಯದ ಮುಂದೆ ತನ್ನದೇ ನಿಲುವಿಗೆ ಉಲ್ಟಾ ಹೊಡೆದು, ಮೂಲಭೂತ ಹಕ್ಕುಗಳು ಕೂಡ ನಿರ್ದೇಶಕ ತತ್ವಗಳಿಗೆ ಅೀನವೆಂಬ ವಿಪರೀತದ ವಾದ ಮಂಡಿಸಿದರು! (ಅಂದರೆ ವ್ಯಕ್ತಿಯ ಬದುಕು, ಜೀವನೋಪಾಯದ ಹಕ್ಕುಗಳಿಗಿಂತ ಗೋರಕ್ಷಣೆ ಪ್ರಶ್ನೆಯೇ ಮುಖ್ಯ ಎಂಬ ಅರ್ಥದಲ್ಲಿ). ಆದರೆ ಕೋರ್ಟು ಆಗ ಆ ವಾದ ಒಪ್ಪದೆ ಸಮತೋಲದ ನಿಲುವು ತಳೆದಿತ್ತು.
ಅಷ್ಟೇ ಅಲ್ಲ, ತನ್ನ ತೀರ್ಪಿನಲ್ಲಿ ಗೋಮಾಂಸ ದಲಿತರು, ಅಲ್ಪಸಂಖ್ಯಾತರು, ಮತ್ತಿತರರಿಗೆ ಲಭ್ಯವಿರುವ ಅಗ್ಗದ ಪೌಷ್ಟಿಕ ಆಹಾರ ಎನ್ನುವುದನ್ನೂ ಪರಿಗಣಿಸಿತ್ತು:
  
ಗೋಮಾಂಸವು ಭಾರತದಲ್ಲಿ ಒಂದು ದೊಡ್ಡ ಜನವರ್ಗದ ಆಹಾರ ಎನ್ನುವುದನ್ನು ಮರೆಯುವಂತಿಲ್ಲ. ಮುಸ್ಲಿಮರು, ಕ್ರೆಸ್ತರು, ಹರಿಜನ, ಗಿರಿಜನರಲ್ಲಿ ಬಡವರಾದವರು ಗೋಮಾಂಸ ಭಕ್ಷಿಸುವುದು ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ನೆಲೆಸಿರುವ ವಿದೇಶೀಯರಿಂದಲೂ ಗೋಮಾಂಸಕ್ಕೆ ಸೀಮಿತ ಪ್ರಮಾಣದ ಬೇಡಿಕೆ ಇದೆ... ಬಹುಶಃ ವಾರದಲ್ಲಿ ಒಂದೆರಡು ಬಾರಿ ಈ ಬಡಜನರಿಗೆ ಗೋಮಾಂಸವೇ ಕೈಗೆಟಕುವ ಆಹಾರ. ಹಾಗಿರುವಾಗ ಗೋಭಕ್ಷಣೆಯನ್ನೇ ನಿಷೇಸಿಬಿಟ್ಟರೆ ಅವರಿಗೆ ದಕ್ಕುವ ಈ ಅಲ್ಪ ಸ್ವಲ್ಪ ಪುಷ್ಟಿಯ ಸೌಕರ್ಯವನ್ನೂ ತಪ್ಪಿಸಿದಂತಾಗುತ್ತದೆ... ಗೋಮಾಂಸವೊಂದು ಸವಲತ್ತಿನ ಅಥವಾ ವೈಭೋಗದ ಪದಾರ್ಥವಲ್ಲ, ಅದು ಅವರಿಗೆ ಅತ್ಯಗತ್ಯವಾದದ್ದು... ಇದಾಗಿ ಮೂರು ದಶಕಗಳ ನಂತರ ಸರ್ವೋಚ್ಚ ನ್ಯಾಯಾಲಯ, ಈ ತೀರ್ಪಿನಲ್ಲಿ ಅಡಕವಾಗಿದ್ದ ಸಮತೋಲವನ್ನೇ ಗಾಳಿಗೆ ತೂರಿಬಿಟ್ಟಿತು!...

 2005ರಲ್ಲಿ ಶ್ರೇಷ್ಠ ನ್ಯಾಯಾೀಶ ಆರ್.ಸಿ. ಲಹೋಟಿಯವರ ನೇತೃತ್ವದ ಒಂಬತ್ತು ಮಂದಿ ನ್ಯಾಯಾೀಶರ ಪೀಠ ಮಿರ್ಝಾಪುರ ಮೋತಿ ಖುರೇಷಿ ಕಸೀಬ್ ಜಮಾತ್ ಗುಜರಾತ್ ಸರಕಾರದ ವಿರುದ್ಧ ಹೂಡಿದ್ದ ಮೊಕದ್ದಮೆಯ ತೀರ್ಪಿನಲ್ಲಿ ಗೋಹತ್ಯೆಯನ್ನು ಸಾರಾಸಗಟು ನಿಷೇಸುವ ಬಹುಮತದ (8- 1) ತೀರ್ಮಾನವನ್ನು ಪ್ರಕಟಿಸಿಬಿಟ್ಟಿತು. ಹಾಗೆ ಮಾಡು ವಾಗ ಮೂಲಭೂತ ಹಕ್ಕುಗಳ ಮೇಲೆ ನಿಯಂತ್ರಣಗಳನ್ನು ಹೇರುವಾಗ, ನಿರ್ದೇಶಕ ತತ್ವಗಳ ಆಶಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇ ಕಾಗುತ್ತದೆ ಎಂಬ ಅತಿರೇಕದ ವ್ಯಾಖ್ಯಾನದ ಮೂಲಕ ಸಂವಿಧಾನದ ಮೂಲ ಆಶಯವನ್ನೇ ತಲೆಕೆಳಗು ಮಾಡಿಬಿಟ್ಟಿತು! (ಇಲ್ಲೊಂದು ವಿಚಿತ್ರವಿದೆ. ಸರ್ವೋಚ್ಚ ನ್ಯಾಯಾಲಯ ಗೋಹತ್ಯೆಯನ್ನು ನಿಷೇಸಿದೆಯೇ ಹೊರತು ಗೋಮಾಂಸ ಭಕ್ಷಣೆಯನ್ನಲ್ಲ...!)
ಇಷ್ಟಾದ ಮೇಲೆ, 1995ರ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಕಾಯ್ದೆಗೆ ಕಳೆದ ವರ್ಷ- 2015ರ ಮಾರ್ಚಿ 4ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂಕಿತ ಹಾಕಿಬಿಟ್ಟರು. ಅವರಿಗೆ ಮುಂಚಿನ ಯಾವ ರಾಷ್ಟ್ರಪತಿಗಳೂ ಇಪ್ಪತ್ತು ವರ್ಷ ಕಾಲ ಈ ವಿವಾದಾತ್ಮಕ ಮಸೂದೆಗೆ ಒಪ್ಪಿಗೆ ನೀಡುವ ಗೋಜಿಗೇ ಹೋಗಿರಲಿಲ್ಲ. ಪ್ರಣವ್ ಮುಖರ್ಜಿಯವರೂ ಹಾಗೇ ಸುಮ್ಮನಿದ್ದುಬಿಡಬಹುದಿತ್ತು. ಕೆಲವು ಮಸೂದೆಗಳಿಗೆ ಸಹಿ ನಿರಾಕರಿಸಿದ ರಾಷ್ಟ್ರಪತಿಗಳಿಗೆ ನಮ್ಮಲ್ಲೇನೂ ಬರವಿಲ್ಲ. ಆದರೆ ಪ್ರಣವ್ ಸಹಿ ಮಾಡಿದ್ದರಿಂದಾ

Writer - ಎನ್.ಎಸ್. ಶಂಕರ್

contributor

Editor - ಎನ್.ಎಸ್. ಶಂಕರ್

contributor

Similar News