ಮೆಹ್ಸಾನಾದಲ್ಲಿ ಪೊಲೀಸ್ ಗೋಲಿಬಾರಿಗೆ ಆದೇಶಿಸಿದ್ದ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಕೇಜ್ರಿವಾಲ್ ಆಗ್ರಹ
Update: 2016-10-15 15:52 IST
ಅಹ್ಮದಾಬಾದ್,ಅ.15: ಕಳೆದ ವರ್ಷ ಮೆಹ್ಸಾನಾದಲ್ಲಿ ಮೀಸಲಾತಿಗೆ ಆಗ್ರಹಿಸಿ ಪಟೇಲ್ ಸಮುದಾಯದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರು ಯುವಕರ ಸಾವಿಗೆ ಕಾರಣವಾಗಿದ್ದ ಪೊಲೀಸ್ ಗೋಲಿಬಾರ್ಗೆ ಬಿಜೆಪಿಯೇ ಹೊಣೆಯಾಗಿತ್ತೆಂದು ಆಪ್ ವರಿಷ್ಠ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದಿಲ್ಲಿ ಆರೋಪಿಸಿದರು.
ತನ್ನ ಮೂರು ದಿನಗಳ ಗುಜರಾತ್ ಪ್ರವಾಸದ ಎರಡನೇ ದಿನ ಕಳೆದ ವರ್ಷದ ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿದ್ದ ಕಾಮ್ಲಿ ಗ್ರಾಮದ ನಿವಾಸಿಗಳಾದ ಕನುಭಾಯಿ ಪಟೇಲ್ ಮತ್ತು ಮಹೇಶ ಪಟೇಲ್ ಅವರ ಕುಟುಂಬ ಸದಸ್ಯರನ್ನು ಕೇಜ್ರಿವಾಲ್ ಭೇಟಿಯಾದರು.
ಹಿರಿಯ ಬಿಜೆಪಿ ನಾಯಕರ ಆದೇಶದ ಮೇರೆಗೆ ಪೊಲೀಸ್ ಗೋಲಿಬಾರ್ ನಡೆದಿತ್ತು ಎಂದ ಅವರು, ಈ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಮೃತ ಯುವಕರಿಗೆ ಶೃದ್ಧಾಂಜಲಿ ಸಭೆಯಲ್ಲಿಯೂ ಅವರು ಪಾಲ್ಗೊಂಡರು.