ರೇಡಿಯೊ ಮಿರ್ಚಿಯ ಆರ್‌ಜೆ ಶುಭಂ ಕೆಚೆ ಶೋ ನಡೆಸುತ್ತಿದ್ದಾಗಲೇ ಕುಸಿದು ಬಿದ್ದು ಮೃತ್ಯು

Update: 2016-10-22 11:10 GMT

ನಾಗಪುರ,ಅ.22: ರೇಡಿಯೊ ಮಿರ್ಚಿಯಲ್ಲಿ ‘ಹಾಯ್ ನಾಗಪುರ ’ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಸ್ಥಳೀಯ ರೇಡಿಯೊ ಜಾಕಿ ಶುಭಂ ಕೆಚೆ ಕಾರ್ಯಕ್ರಮದ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಗುರುವಾರ ಬೆಳಿಗ್ಗೆ ಕಾರ್ಯಕ್ರಮ ನೀಡುತ್ತಿದಾಗ ಎದೆನೋವೆಂದು ಶುಭಂ ದೂರಿಕೊಂಡಿದ್ದರು. ಬ್ರೇಕ್‌ನಲ್ಲಿ ರೆಕಾರ್ಡಿಂಗ್ ರೂಮಿನಿಂದ ಹೊರಬಂದು ಬಾತ್‌ರೂಮಿಗೆ ತೆರಲಿದ್ದ ಅವರು ಅಲ್ಲಿಯೇ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದರು.

ಶುಭಂ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವುದನ್ನು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ. ಅವರ ಹೃದಯ ಮತ್ತು ಇತರ ಅಂಗಾಂಗಗಳ ಸ್ಯಾಂಪಲ್‌ಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಶುಭಂ ಪಾನ್ ಅಂಗಡಿಯೊಂದನ್ನು ನಡೆಸುತ್ತಿರುವ ತಾಯಿ ಮತ್ತು ಸೋದರಿಯನ್ನು ಅಗಲಿದ್ದಾರೆ. ಮೂರು ವರ್ಷಗಳ ಹಿಂದೆ ಶುಭಂ ತಂದೆ ನಿಧನರಾಗಿದ್ದು, ಈ ಯುವ ಆರ್‌ಜೆ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News